‘ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯ’; ಬಿಜೆಪಿ ಟೀಕೆ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಡಿಸಿದ ರಾಜ್ಯ ಬಜೆಟ್‌ ಅಲ್ಪಸಂಖ್ಯಾತರನ್ನು ಓಲೈಸುವಂತಾಗಿದೆ ಎಂದು ಪ್ರತಿಪಕ್ಷ ಬಿಜೆಪಿ (BJP) ತೀವ್ರ ಟೀಕಿಸಿದೆ. ಮುಸ್ಲಿಂ ಸಮುದಾಯದವರನ್ನು ‘ಬ್ರದರ್ಸ್’ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾ ಬಂದಿರುವುದನ್ನೇ ಉಲ್ಲೇಖಿಸಿ, ಈ ಬಾರಿ ಮಂಡಿಸಲಾದ ಬಜೆಟ್ ಅನ್ನು ‘ಬ್ರದರ್ಸ್ ಬಜೆಟ್’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಅನೇಕ ಯೋಜನೆಗಳನ್ನು ಘೋಷಿಸಿರುವುದನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿ ಮಾಡಿ, ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ ಶಾಲೆಗಳನ್ನು ಕೆಪಿಎಸ್ (KPS) ಮಾದರಿಯಲ್ಲಿ ಉನ್ನತೀಕರಣಗೊಳಿಸಲು ₹1000 ಕೋಟಿ ಮೀಸಲು, ಅಲ್ಪಸಂಖ್ಯಾತ ವಸತಿ ಶಾಲೆಗಳ ಆರಂಭ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ.

ಇದರ ಜೊತೆಗೆ ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಮೀಸಲು, ನಿರ್ಗತಿಕರಿಗೆ ಎರಡು ವೃದ್ಧಾಶ್ರಮಗಳ ಆರಂಭ, ನಿರುದ್ಯೋಗಿಗಳಿಗೆ ₹3 ಲಕ್ಷವರೆಗೆ ಸಹಾಯಧನ, ಅಲ್ಪಸಂಖ್ಯಾತ ಮಹಿಳೆಯರ ಸ್ವ ಉದ್ಯೋಗ ಪ್ರೋತ್ಸಾಹಕ್ಕಾಗಿ ಸೊಸೈಟಿ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ.

ಹುಬ್ಬಳ್ಳಿ (Hubballi) ಮತ್ತು ಕಲಬುರಗಿ (Kalaburagi) ನಗರಗಳಲ್ಲಿ ಹಜ್ ಭವನ ನಿರ್ಮಾಣ, ಅಲ್ಪಸಂಖ್ಯಾತ ನಿಗಮದ ಸಾಲದ ಬಡ್ಡಿ ಮನ್ನಾ, ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರಿಗೆ ನಾಲ್ಕು ಹಾಸ್ಟೆಲ್‌ಗಳ ನಿರ್ಮಾಣ, ಅಲ್ಪಸಂಖ್ಯಾತ ಇಲಾಖೆಯ ಖಾಲಿ ಹುದ್ದೆಗಳ ಭರ್ತಿ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗೆ ₹50 ಸಾವಿರ ನೆರವು ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇದೇ ವೇಳೆ ವಕ್ಫ್ (Waqf) ಆಸ್ತಿಗಳ ಅಭಿವೃದ್ಧಿಗೆ ಸಹ ಹಣ ಮೀಸಲಿಡಲಾಗಿದೆ.

ಈ ಎಲ್ಲಾ ಘೋಷಣೆಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಿಜೆಪಿ, ‘ಓಲೈಕೆ ರಾಜಕಾರಣವನ್ನೇ ಪರಮ ಗುರಿಯಾಗಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನು ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ’ ಎಂದು ಟೀಕಿಸಿದೆ.

Leave a Reply

Your email address will not be published. Required fields are marked *