‘ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ’; ಅಶೋಕ್’ಗೆ ರಾಮಲಿಂಗಾ ರೆಡ್ಡಿ ತರಾಟೆ

0
Ramalinga Reddy

ಬೆಂಗಳೂರು: ‘ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳು ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. .

ಅಶೋಕ್ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಹಾಕಿರುವ ಪೋಸ್ಟಿಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಸಿರುವ ರಾಮಲಿಂಗ ರೆಡ್ಡಿ, ‘ತಾವು ಸಾರಿಗೆ ಮಂತ್ರಿಗಳಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡುವ ಪದ್ಧತಿಗೆ ಅಡಿಪಾಯ ಹಾಕಿದ್ದು ತಾವು ಎಂಬುದು ತಿಳಿದಿದೆಯೇ? (ಮುಷ್ಕರದ ದಿನಾಂಕ: 13-09-2012 ಮತ್ತು 14-09-2012 )’ ಎಂದು ಪ್ರಶ್ನಿಸಿದ್ದಾರೆ.

‘ತಮ್ಮದೇ ಬಿ.ಜೆ.ಪಿ ಪಕ್ಷದ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ‌ ಮುಷ್ಕರ ಮಾಡಿಸಿರುವ ಕೀರ್ತಿ ನಿಮಗೆ ಸಲ್ಲಬೇಕು. ನಿಮ್ಮ ಅವಧಿಯಲ್ಲಿ ಎರಡೆರಡು ಬಾರಿ‌ ಮುಷ್ಕರ ನಡೆದದ್ದು ಮರೆತು‌ಬಿಟ್ಟೀರಾ? (ಮುಷ್ಕರದ ದಿನಾಂಕ: 11-12-2020 ರಿಂದ 14-12-2020 ( ನಾಲ್ಕು ದಿವಸ) ಮತ್ತು 07-04-2021 ರಿಂದ 21-04-2021 ( ಹದಿನೈದು ದಿವಸ). ಮುಷ್ಕರದ ಹೆಸರಿನಲ್ಲಿ ಸರಿಸುಮಾರು 3500 ನೌಕರರನ್ನು‌ ಕೆಲಸದಿಂದ ವಜಾ, ಅಮಾನತು ಮಾಡಿ FIR ಹಾಕಿಸಿ,‌ ಇಂದಿಗೂ ಅವರು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ. ಈಗ ಸಾರಿಗೆ ನೌಕರರ ಬಗ್ಗೆ ಅನುಕಂಪದ ಮಾತನ್ನು ಆಡಲು ಯಾವ ನೈತಿಕತೆ ಇದೆ’ ಎಂದು ಎದಿರೇಟು ನೀಡಿದ್ದಾರೆ.

‘ತಮ್ಮದೇ ಬಿ.ಜೆ.ಪಿ ಸರ್ಕಾರವಿದ್ದಾಗ ಮಾರ್ಚಿ-2023 ರಲ್ಲಿ ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಮಾಡಿ, 38 ತಿಂಗಳ ಹಿಂಬಾಕಿ ವೇತನ ಪಾವತಿ ಬಾಕಿಯಿಟ್ಟು, ಈ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ತಪ್ಪಾದ ಸರ್ಕಾರಿ ಆದೇಶ ಹೊರಡಿಸಿರುವುದೇ ಈ ಎಲ್ಲಾ ತೊಡಕುಗಳಿಗೆ ಮೂಲ ಕಾರಣವಾಗಿದೆ’ ಎಂದು ಗಮನ ಸೆಳೆದಿರುವ ರಾಮಲಿಂಗ ಡಿಡ್ಡಿ. ‘ತಮ್ಮ ಬಿ.ಜೆ.ಪಿ ಆಡಳಿತ ಅವಧಿಯಲ್ಲಿ ನೀಡಬೇಕಾಗಿದ್ದ ನಿವೃತ್ತ ನೌಕರರ ವೇತನ ಪರಿಷ್ಕರಣೆ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳಿಗೂ ಸಹ ಯಾವುದೇ ಅನುದಾನವನ್ನು ಮೀಸಲಿಡದೆ ಇದ್ದಾಗ್ಯೂ ಸಹ ನಮ್ಮ ಸರ್ಕಾರವು 2025 ರಲ್ಲಿ ಹಣ ಬಿಡುಗಡೆಗೊಳಿಸಿದೆ. ನಾಲ್ಕು ಸಾರಿಗೆ ಸಂಸ್ಥೆಗಳ ಬಾಕಿ ಹೊಣೆಗಾರಿಕೆ 31.03.2026 ರಂತೆ ರೂ. 7130.80 ಕೋಟಿ (ಇದರಲ್ಲಿ ರೂ. 2298.20 ಕೋಟಿ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ರೂ.822.26 ಕೋಟಿ ಇಂಧನ ಪಾವತಿ ಬಾಕಿ). ತಮ್ಮ ಬಿ.ಜಿ.ಪಿ ಆಡಳಿತ ಅವಧಿಯ ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್‌ ಬಾಕಿ ಹಣ ಪಾವತಿಗಾಗಿ, 2025ರಲ್ಲಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದ್ದು, ಈ ಸಾಲದ ಅಸಲು ಮತ್ತು ಬಡ್ಡಿಯನ್ನು ನಮ್ಮ ಸರ್ಕಾರವು ಪಾವತಿಸುತ್ತಿದೆ’ ಎಂದು ಅಂಕಿ ಅಂಶ ಒದಗಿಸಿದ್ದಾರೆ.

ಪ್ರತಿ ವರ್ಷ ನಾಲ್ಕು ಸಾರಿಗೆ ಸಂಸ್ಥೆಗಳು ಗಳಿಸುವ ಒಟ್ಟು ಆದಾಯದಲ್ಲಿ 49.15% ಸಿಬ್ಬಂದಿ ವೆಚ್ಚ (ಅಂದರೆ ರೂ.6759.68 ಕೋಟಿ) ಮತ್ತು 34.49% ಡೀಸೆಲ್‌ ವೆಚ್ಚ ( ಅಂದರೆ ರೂ.4744.41 ಕೋಟಿ) ವೆಚ್ಚವಾಗುತ್ತಿದೆ. ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾವು ಅವರೊಡನೆ ಹಲವಾರು ಸಭೆಗಳನ್ನು ನಡೆಸಿದ್ದೇವೆ. ಅವರ ಬೇಡಿಕೆಯಂತೆ 25% ವೇತನ ಪರಿಷ್ಕರಣೆ ಮಾಡಿದಲ್ಲಿ, ಪ್ರತಿ ತಿಂಗಳು ನಾಲ್ಕು ಸಾರಿಗೆ ಸಂಸ್ಥೆಗಳಿಗೆ ರೂ.131.52 ಕೋಟಿ, ವಾರ್ಷಿಕ ರೂ.1578.18 ಕೋಟಿ ಹಾಗೂ ನಾಲ್ಕು ವರ್ಷಗಳಿಗೆ ರೂ.6312.23 ಕೋಟಿ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ. ತಾವು ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ಸಾರಿಗೆ ಸಚಿವರಾಗಿ ಕೆಲಸ ಮಾಡಿರುವವರು, ಇಷ್ಟಾದರೂ ತಮಗೆ ತಿಳಿಯಬಾರದೇ? ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ತೀವ್ರ ಕಿಷ್ಲಕರವಾಗಿದ್ದು, ಏಪ್ರಿಲ್‌ 1 ,2025 ರಿಂದಲೇ ಅನ್ವವಾಗುವಂತೆ 25% ವೇತನ ಹೆಚ್ಚಳ ಮಾಡಿದ್ದಲ್ಲಿ, ವಾರ್ಷಿಕ ರೂ.1578.18 ಕೋಟಿ ಹಾಗೂ ನಾಲ್ಕು ವರ್ಷಗಳಿಗೆ ರೂ.6312.23 ಕೋಟಿ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ. ಇಷ್ಟೊಂದು ಮೊತ್ತದ ಹಣವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ, ಅವರೊಡನೆ ಚರ್ಚಿಸದೆ, ಅನುಮತಿ ಪಡೆಯದೇ, ಏಕಾಏಕಿ ನಾನು ಘೋಷಿಸಲು ಸಾಧ್ಯವೇ? ಎಂದಿದ್ದಾರೆ.

‘ಇದೇ ವಿಷಯವನ್ನೇ ನನ್ನ ಅಧ್ಯಕ್ಷತೆಯಲ್ಲಿ ಕಾರ್ಮಿಕ ಮುಖಂಡರುಗಳೊಡನೆ ನಡೆದ ನೆನ್ನೆಯ ಸಭೆಯಲ್ಲಿ ತಿಳಿಸಿದ್ದೇನೆ. ಇನ್ನೆರಡು ಮೂರು ದಿನಗಳಲ್ಲಿ ಎಷ್ಟು ಶೇಕಡವಾರು ವೇತನ ಹೆಚ್ಚಳ ನೀಡುತ್ತೇವೆ ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳೊಡನೆ ಚರ್ಚಿಸಿ, ತೀರ್ಮಾನಿಸಿ ಕೂಡಲೇ ತಿಳಿಸಲಾಗುವುದು ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗ್ಯೂ ಸಹ, ಅವರು ಮುಷ್ಕರ ಮಾಡುತ್ತೇವೆ ಅಂದರೆ ಅದಕ್ಕೆ ಅವರೇ ಹೊಣೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed