‘ಮತ ಕಳ್ಳತನ, ಸರ್ಕಾರ ಕಳ್ಳತನ, ಈಗ ಪಕ್ಷ ಕಳ್ಳತನ’; TMC ಚಿಹ್ನೆ ನಿರ್ಬಂಧ ಕ್ರಮಕ್ಕೆ ರಾಹುಲ್ ಆಕ್ಷೇಪ

0
Rahul-gandhi

ನವದೆಹಲಿ: ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಹೆಸರು ಹಾಗೂ ‘ಹೂವು–ಹುಲ್ಲು’ ಚುನಾವಣಾ ಚಿಹ್ನೆಯನ್ನು ಪಶ್ಚಿಮ ಬಂಗಾಳದ ಉಪಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತಾತ್ಕಾಲಿಕವಾಗಿ ಬಳಸದಂತೆ ನಿರ್ಬಂಧಿಸಿರುವ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ರಾಜಕೀಯ ಪಕ್ಷಗಳನ್ನು ವಿಭಜಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಮೊದಲು ಶಿವಸೇನೆ, ನಂತರ ಎನ್‌ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ” ಎಂದು ಆರೋಪಿಸಿದರು. ಪಕ್ಷದ ಚಿಹ್ನೆ ಕಸಿದುಕೊಳ್ಳುವ ಮೂಲಕ ಜನಾದೇಶವನ್ನು ಬುಡಮೇಲು ಮಾಡುವ ಶಕ್ತಿಗಳಿಗೆ ಚುನಾವಣಾ ಆಯೋಗ ನೆರವಾಗುತ್ತಿದೆ ಎಂದೂ ದೂರಿದರು.

“ಮತ ಕಳ್ಳತನ, ಸರ್ಕಾರ ಕಳ್ಳತನ, ಈಗ ಪಕ್ಷ ಕಳ್ಳತನ” ಎಂದು ಅವರು ಟೀಕಿಸಿದ್ದು, ಈ ಹೋರಾಟ ಕೇವಲ ಮಮತಾ ಬ್ಯಾನರ್ಜಿ ಅವರದ್ದಲ್ಲ; ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಬ್ಬ ಮತದಾರ ಹಾಗೂ ರಾಜಕೀಯ ಪಕ್ಷದ ಹೋರಾಟವಾಗಿದೆ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಮತ್ತು ಎದುರಾಳಿ ಬಣದ ನಡುವಿನ ಪಕ್ಷದ ನಿಯಂತ್ರಣ, ಹೆಸರು ಮತ್ತು ಚಿಹ್ನೆ ಕುರಿತ ವಿವಾದದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೆ.17ರಂದು ಮಧ್ಯಂತರ ಆದೇಶ ಹೊರಡಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಎರಡೂ ಬಣಗಳಿಗೂ ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಹೆಸರು ಮತ್ತು ಮೀಸಲು ‘ಹೂವು–ಹುಲ್ಲು’ ಚಿಹ್ನೆ ಬಳಸಲು ಅವಕಾಶವಿಲ್ಲ ಎಂದು ಆಯೋಗ ತಿಳಿಸಿದೆ.

ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾ 15ರ ಅಡಿಯಲ್ಲಿ ವಿವಾದದ ಕುರಿತು ಸಮಗ್ರ ನಿರ್ಧಾರ ಅಗತ್ಯವಿದೆ ಎಂದು ಆಯೋಗ ಹೇಳಿದೆ. ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಎರಡೂ ಬಣಗಳು ಪರ್ಯಾಯ ಪಕ್ಷದ ಹೆಸರು ಮತ್ತು ಮುಕ್ತ ಚಿಹ್ನೆಗಳ ಆಯ್ಕೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಚುನಾವಣಾ ಆಯೋಗದ ಆದೇಶವನ್ನು ಕಾಂಗ್ರೆಸ್ ಕೂಡ ಟೀಕಿಸಿದೆ. ಪಕ್ಷದ ಹೆಸರು ಮತ್ತು ಚಿಹ್ನೆ ಬಳಕೆಗೆ ನಿರ್ಬಂಧ ವಿಧಿಸಿರುವುದು ಚುನಾವಣಾ ಆಯೋಗದ ಸಾಂವಿಧಾನಿಕ ಹೊಣೆಗಾರಿಕೆಯಿಂದ ಹಿಂದೆ ಸರಿದಿರುವುದಕ್ಕೆ ಸಮಾನ ಎಂದು ಕಾಂಗ್ರೆಸ್ ಆರೋಪಿಸಿದೆ.

Leave a Reply

Your email address will not be published. Required fields are marked *

You may have missed