ಬುಡಕಟ್ಟು, ಅಲೆಮಾರಿ ಸಮುದಾಯಗಳು ಕೀಳರಿಮೆ ತೊರೆದು ಸ್ವಾಭಿಮಾನದಿಂದ ಬದುಕಬೇಕು: ಬಿ.ಕೆ. ಹರಿಪ್ರಸಾದ್

0
BKHariprasad

ಬೆಂಗಳೂರು: ಬುಡಕಟ್ಟು, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳು ಕೀಳರಿಮೆ ತೊರೆದು ಸ್ವಾಭಿಮಾನದಿಂದ ಬದುಕಬೇಕು. ತಮ್ಮ ಕಲೆ, ಸಂಸ್ಕೃತಿ ಹಾಗೂ ಪ್ರತಿಭೆಯ ಬಗ್ಗೆ ಹೆಮ್ಮೆ ಹೊಂದಿ, ಅದನ್ನು ದೇಶ-ವಿದೇಶಗಳಲ್ಲಿ ಪರಿಚಯಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.

ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜ ಸುಧಾರಣೆಗೆ ಕೊಡುಗೆ ನೀಡಿದ ಬಿರ್ಸಾ ಮುಂಡಾ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇವರಾಜ ಅರಸು ಅವರಿಗೆ ಪುಷ್ಪನಮನ ಸಲ್ಲಿಸಿದರು.

ಬಿರ್ಸಾ ಮುಂಡಾ ಆದಿವಾಸಿಗಳ ಮಹಾನ್ ನಾಯಕರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಅವರು ಕೇವಲ 30ನೇ ವಯಸ್ಸಿನಲ್ಲಿ ನಿಧನರಾದರೂ, ಜಾರ್ಖಂಡ್‌ನ ಆದಿವಾಸಿ ಸಮುದಾಯಗಳಲ್ಲಿ ಇಂದಿಗೂ ಅವರ ಬಗ್ಗೆ ಅಪಾರ ಗೌರವವಿದೆ ಎಂದರು.

ಆದಿವಾಸಿಗಳು, ಬುಡಕಟ್ಟು ಹಾಗೂ ದಲಿತರು ದೇಶದ ಮೂಲ ನಿವಾಸಿಗಳಾಗಿದ್ದು, ದೇಶದ ನಾಯಕತ್ವ ಮತ್ತು ಮಾಲೀಕತ್ವದಲ್ಲಿ ಅವರಿಗೆ ಸಮಾನ ಪಾಲು ಇರಬೇಕಿತ್ತು. ಸ್ವಾತಂತ್ರ್ಯ ಹೋರಾಟದ ಆಶಯವಾಗಿದ್ದ ಸಮಾನ ಹಕ್ಕು, ಸಮಬಾಳು ಮತ್ತು ಸಮಪಾಲು ಇನ್ನೂ ಸಂಪೂರ್ಣವಾಗಿ ಸಾಕಾರಗೊಂಡಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ರಾಜಕೀಯ ಸ್ವಾತಂತ್ರ್ಯ ದೊರೆತಿದ್ದರೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಇನ್ನೂ ಹೋರಾಟ ಅಗತ್ಯವಿದೆ. ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದರು.

ಐದು ವರ್ಷಕ್ಕೊಮ್ಮೆ ದೊರೆಯುವ ಮತದಾನದ ಹಕ್ಕು ಸಮುದಾಯದ ಪ್ರಮುಖ ಶಕ್ತಿಯಾಗಿದೆ. ಹಣ ಅಥವಾ ಮದ್ಯದ ಆಮಿಷಕ್ಕೆ ಮತ ಚಲಾಯಿಸದೆ, ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.

ಸಮುದಾಯ ಸಣ್ಣದು ಎಂದು ಭಾವಿಸಬಾರದು. ಒಗ್ಗಟ್ಟಿನಿಂದ ಮತ ಚಲಾಯಿಸಿದರೆ ರಾಜಕೀಯ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು ಎಂದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉದಾಹರಣೆ ನೀಡಿದ ಅವರು, ಬುಡಕಟ್ಟು ಸಮುದಾಯಗಳಲ್ಲಿಯೂ ಅಪಾರ ಪ್ರತಿಭೆ ಮತ್ತು ಸಾಮರ್ಥ್ಯವಿದೆ ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆ ಹಾಗೂ ಆಹಾರ ಭದ್ರತಾ ಕಾಯ್ದೆಯಂತಹ ಕ್ರಮಗಳು ದುರ್ಬಲ ವರ್ಗಗಳ ಹಕ್ಕುಗಳನ್ನು ಬಲಪಡಿಸಿವೆ ಎಂದು ಹರಿಪ್ರಸಾದ್ ಹೇಳಿದರು. ಸಮುದಾಯದ ಪರವಾಗಿ ನಿಲ್ಲುವವರಿಗೆ ಬೆಂಬಲ ನೀಡಬೇಕು. ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದರು.

ಅಲೆಮಾರಿ ಹಾಗೂ ಅರೆ ಅಲೆಮಾರಿ ಘಟಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಲ್ಲಪ್ಪ ಅವರಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

You may have missed