ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೂ SIR ನೋಟಿಸ್; ತಪ್ಪು ಅರಿತು ಕ್ಷಮೆಯಾಚಿಸಿದ ಚುನಾವಣಾ ಆಯೋಗ

0
harekala-HAJABBA-300x169-1

ಮಂಗಳೂರು: ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪುರಸ್ಕೃತ, ಮಂಗಳೂರಿನ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗದ ಎಸ್‌ಐಆರ್‌ ನೋಟಿಸ್ ಜಾರಿಯಾಗಿದ್ದು, ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಅದನ್ನು ವಾಪಸ್ ಪಡೆದ ಘಟನೆ ನಡೆದಿದೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಹಿನ್ನೆಲೆಯಲ್ಲಿ ಹಾಜಬ್ಬ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್ ಜಾರಿಯಾಗಲು ಕಾರಣವಾಗಿದ್ದು ತಾಂತ್ರಿಕ ದೋಷ ಎಂಬುದು ಬಳಿಕ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದಾದ ಬಳಿಕ ಹಿರಿಯ ಅಧಿಕಾರಿಗಳು ಖುದ್ದಾಗಿ ಹಾಜಬ್ಬ ಅವರ ಮನೆಗೆ ತೆರಳಿ ಕ್ಷಮೆಯಾಚಿಸಿ ನೋಟಿಸ್ ಹಿಂಪಡೆದಿದ್ದಾರೆ.

ಹಾಜಬ್ಬರಿಗೆ ನೋಟಿಸ್ ನೀಡಿದ್ದೇಕೆ?

2002ರ ಮತದಾರರ ಪಟ್ಟಿಯಲ್ಲಿ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ಆದರೆ ಪ್ರಸ್ತುತ ಅವರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪತ್ರ ಸೇರಿದಂತೆ ಅಧಿಕೃತ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂದು ಪೂರ್ಣ ಹೆಸರು ನಮೂದಾಗಿದೆ.

ಹಳೆಯ ಮತದಾರರ ಪಟ್ಟಿಯಲ್ಲಿನ ಹೆಸರು ಮತ್ತು ಪ್ರಸ್ತುತ ದಾಖಲೆಗಳಲ್ಲಿನ ಹೆಸರಿನ ನಡುವೆ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಎಸ್‌ಐಆರ್‌ ತಂತ್ರಜ್ಞಾನ ವ್ಯವಸ್ಥೆಯಲ್ಲಿ ನೋಟಿಸ್ ಸ್ವಯಂಚಾಲಿತವಾಗಿ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನೋಟಿಸ್ ಹಾಜಬ್ಬ ಅವರಿಗೆ ತಲುಪಿಸಲಾಗಿತ್ತು. ಸೆಪ್ಟೆಂಬರ್ 11ರಂದು ಹರೇಕಳ ಗ್ರಾಮ ಪಂಚಾಯತ್ ಕಚೇರಿಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿತ್ತು.

ತಪ್ಪು ಅರಿತು ಮನೆಗೇ ಬಂದ ಅಧಿಕಾರಿಗಳು

ವಿಷಯ ತಿಳಿಯುತ್ತಿದ್ದಂತೆಯೇ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮಂಗಳೂರಿನ ಹರೇಕಳದಲ್ಲಿರುವ ಹಾಜಬ್ಬ ಅವರ ಮನೆಗೆ ಅಧಿಕಾರಿಗಳು ಖುದ್ದಾಗಿ ತೆರಳಿ, ತಾಂತ್ರಿಕ ಪ್ರಮಾದದಿಂದ ನೋಟಿಸ್ ಜಾರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ, ಹಾಜಬ್ಬ ಅವರ ಬಳಿ ಕ್ಷಮೆಯಾಚಿಸಿದ ಅಧಿಕಾರಿಗಳು ಮನೆಯಲ್ಲೇ ಅವರ ದಾಖಲೆಗಳನ್ನು ಪರಿಶೀಲಿಸಿ ನೋಟಿಸ್‌ನ್ನು ವಾಪಸ್ ಪಡೆದಿದ್ದಾರೆ.

Leave a Reply

Your email address will not be published. Required fields are marked *

You may have missed