ನಮ್ಮ ಮೆಟ್ರೋ: ಈ ತಿಂಗಳಾಂತ್ಯಕ್ಕೆ ಪಿಂಕ್‌ ಲೈನ್ ಉದ್ಘಾಟನೆ: ತೇಜಸ್ವಿ ಸೂರ್ಯ

0
Namma-Metro-Pink-Line

ಬೆಂಗಳೂರು: ನಮ್ಮ ಮೆಟ್ರೋದ ಪಿಂಕ್‌ ಲೈನ್ ಅನ್ನು ಈ ತಿಂಗಳಾಂತ್ಯಕ್ಕೆ ಉದ್ಘಾಟಿಸಲು ಬಿಎಂಆರ್‌ಸಿಎಲ್ ಗುರಿ ನಿಗದಿಪಡಿಸಿದ್ದು, ನಿಗದಿತ ಗಡುವಿನೊಳಗೆ ಕಾಮಗಾರಿ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಜಯದೇವ ನಿಲ್ದಾಣದಿಂದ ಕಾಳೇನ ಅಗ್ರಹಾರವರೆಗೆ ಪಿಂಕ್‌ ಲೈನ್ ಪರಿಶೀಲನೆ ನಡೆಸಿದ ಬಳಿಕ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಾಸಕ ಕೃಷ್ಣಪ್ಪ ಅವರೊಂದಿಗೆ ಮೆಟ್ರೋ ಮಾರ್ಗವನ್ನು ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.

ಪಿಂಕ್‌ ಲೈನ್ ಉದ್ಘಾಟನೆಗೆ ಬಿಎಂಆರ್‌ಸಿಎಲ್ ಈ ತಿಂಗಳಾಂತ್ಯದ ಗುರಿ ಹೊಂದಿದೆ. ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಸಚಿವರೊಂದಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಸೂರ್ಯ ಹೇಳಿದ್ದಾರೆ.

ಸುರಕ್ಷತಾ ಅನುಮೋದನೆ ಹಾಗೂ ಕಾಲಮಿತಿಯ ಕುರಿತು ಇಂದು ಬೆಳಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಮುಂದಿನ 15 ದಿನಗಳಲ್ಲಿ ರೈಲಿನ ಸಂಚಲನಕ್ಕೆ ಸಂಬಂಧಿಸಿದ ಅನುಮೋದನೆ ದೊರೆಯುವ ನಿರೀಕ್ಷೆಯಿದ್ದು, ಬಳಿಕ ಸಂಪೂರ್ಣ ಮಾರ್ಗಕ್ಕೆ ಅಗತ್ಯ ಸುರಕ್ಷತಾ ಅನುಮತಿ ದೊರೆಯಲಿದೆ. ಈ ಅನುಮೋದನೆಗಳು ಶೀಘ್ರವಾಗಿ ದೊರೆಯುವಂತೆ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.

ಪಿಂಕ್‌ ಲೈನ್‌ ಕಾರ್ಯಾರಂಭದಿಂದ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಜತೆಗೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಸೂರ್ಯ ಹೇಳಿದ್ದಾರೆ.

ಬೆಂಗಳೂರು ನಗರದ ಸಂಚಾರ ಸಮಸ್ಯೆ ನಿವಾರಣೆಗೆ ಸುರಂಗ ರಸ್ತೆ ಯೋಜನೆಯಂತಹ ‘ಅವೈಜ್ಞಾನಿಕ’ ಯೋಜನೆಗಳ ಬದಲು, ವೈಜ್ಞಾನಿಕ, ಸುಸ್ಥಿರ ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಾರ್ವಜನಿಕ ಸಾರಿಗೆ ಯೋಜನೆಗಳಿಗೆ ಆದ್ಯತೆ ನೀಡಬೇಕು. ನಗರದ ಹಿತದೃಷ್ಟಿಯಿಂದ ಇಂತಹ ಯೋಜನೆಗಳಿಗೆ ನಾಗರಿಕರು ಹಾಗೂ ಪ್ರತಿಪಕ್ಷಗಳು ಬೆಂಬಲ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *