ದಕ್ಷಿಣ ಕನ್ನಡ: ಸೋಮೇಶ್ವರ ಡೇಂಜರ್ ಬೀಚ್ !

ಆ ಸಮುದ್ರ ತೀರಕ್ಕೆ ಎಂತವರನ್ನೂ ತನ್ನತ್ತ ಸೆಳೆಯೋ ತಾಕತ್ತಿದೆ. ನೋಡೋಕೆ ಅಷ್ಟು ಮನಮೋಹಕವಾಗಿರೋ ಆ ಕಡಲ ಕಿನಾರೆಯ ಸೌಂದರ್ಯ ಸವಿಯೋದಕ್ಕೆ ವರ್ಷಂಪ್ರತಿ ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಆದ್ರೆ ಹೀಗೆ ಬರೋ ಪ್ರವಾಸಿಗರಿಗೆ ಮಾತ್ರ ಯಾವುದೇ ರಕ್ಷಣೆಯಿಲ್ಲ. ಹೀಗಾಗಿಯೇ ಆ ಕಡಲ ತೀರ ಸಾವಿರಾರು ಮಂದಿಯನ್ನ ಬಲಿ ಪಡೆಯೋ ಮೂಲಕ ಡೇಂಜರಸ್ ಬೀಚ್ ಅನ್ನೋ ಕುಖ್ಯಾತಿಯನ್ನ ಗಳಿಸಿಕೊಂಡಿದೆ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿರೋ ಸೋಮೇಶ್ವರ ಬೀಚ್ ಇದೀಗ ತನ್ನ ನಿಸರ್ಗ ಸೌಂದರ್ಯದಿಂದಲೇ ಸಾವಿರಾರು ಮಂದಿಯನ್ನ ಬಲಿ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲ, ಪಣಂಬೂರು, ತಣ್ಣೀರು ಬಾವಿ ಬೀಚ್ ಗಳಿದ್ದರು ಕೂಡ ಸೋಮೇಶ್ವರ ಕಡಲ ತೀರ ತನ್ನ ನಿಸರ್ಗ ಸೌಂದರ್ಯದಿಂದಲೇ ಪ್ರವಾಸಿಗರನ್ನೇ ತನ್ನತ್ತ ಸೆಳೆಯುತ್ತಿದೆ.
ಅಂತೆಯೇ ನಿತ್ಯವೂ ಸಾವಿರಾರು ಮಂದಿ ಬೀಚ್ ಗೆ ಆಗಮಿಸುತ್ತಿದ್ದಾರೆ. ಜೊತೆಗೆ ಬೀಚ್ ಬಂಡೆಗಳಿಂದ ಕೂಡಿರೋದ್ರಿಂದಲೇ ಸಮುದ್ರದ ಅಲೆಗಳ ಸೆಳೆತ ಜೋರಾಗಿದ್ರಿಂದ ಈಜೋದಕ್ಕೆ ನೀರಿಗಿಳಿದ ಅದೆಷ್ಟೋ ಮಂದಿಯನ್ನ ಸಮುದ್ರ ಬಲಿ ಪಡೆದುಕೊಂಡಿದೆ. ಕಳೆದ ತಿಂಗಳ ಹಿಂದೆಯೆಷ್ಟೇ ಹಾಸನ ಮೂಲದ ನಾಲ್ವರು ಯುವಕರು ಬಲಿಯಾಗಿದ್ದಾರೆ. ವರ್ಷಂಪ್ರತಿ ಹತ್ತಾರು ಮಂದಿ ಸಾವನ್ನಪ್ಪುತ್ತಿದ್ದರೂ ಕೂಡ ಜಿಲ್ಲಾಡಳಿತ ವಾಗಲಿ ಪ್ರವಾಸೋದ್ಯಮ ಇಲಾಖೆಯಾಗಲಿ ಎಚ್ಚೆತ್ತುಕೊಂಡಿಲ್ಲ. ಪ್ರವಾಸಿಗರ ರಕ್ಷಣೆ ಬಿಡಿ ಸಮುದ್ರ ತೀರದಲ್ಲಿ ಯಾವುದೇ ಸೂಚನಾ ಫಲಕಗಳನ್ನ ಅಳವಡಿಸಿಲ್ಲ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸಾವನ್ನಪ್ಪಿರುವ ಪ್ರವಾಸಿಗರ ವಿವರ ಹೀಗಿದೆ
2011-12ರಲ್ಲಿ 10 ಸಾವು
2012-13 ರಲ್ಲಿ 5 ಸಾವು
2013-14 ರಲ್ಲಿ 12 ಸಾವು
2014-15 ರಲ್ಲಿ 8 ಸಾವು
2015-16 ರಲ್ಲಿ 6 ಸಾವು
ಈಗಾಗಲೇ ಸೋಮೇಶ್ವರ ಕಡಲ ತೀರದಲ್ಲಿ ಸಾವನ್ನಪ್ಪಿರುವವರ ಸಂಬಂಧಿಕರು ಇಲ್ಲಿರೋ ರುದ್ರ ಬಂಡೆಯ ಮೇಲೆ ಸೂಚನಾ ಫಲಕಗಳನ್ನ ಕೆತ್ತಿಸೋ ಕಾರ್ಯವನ್ನ ಮಾಡಿದ್ದಾರೆ. ಆದ್ರೆ ಪದೇ ಪದೇ ಕಡಲ ತೀರದಲ್ಲಿ ಸಾವು ಸಂಭವಿಸುತ್ತಿದ್ದರೂ ಕೂಡ ರಜಾ ದಿನಗಳಲ್ಲಿ ಕಡಲ ತೀರಕ್ಕೆ ಬರೋ ಪ್ರವಾಸಿಗರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.
ಇದಕ್ಕಾಗಿಯೇ ಪ್ರವಾಸೋದ್ಯಮ ಇಲಾಖೆ ಬೀಚ್ ಅಭಿವೃದ್ದಿ ಮಾಡೋದಾಗಿ ಹಲವು ವರ್ಷಗಳಿಂದಲೂ ಹೇಳುತ್ತಲೇ ಇದೆ. ಆದ್ರೆ ಇದುವರೆಗೂ ಪ್ರವಾಸಿಗರಿಗೆ ಕನಿಷ್ಟ ಮೂಲಸೌಕರ್ಯಗಳನ್ನ ಒದಗಿಸೋ ಗೋಜಿಗೆ ಹೋಗಿಲ್ಲ. ಇನ್ನು ಬೀಚ್ ನಲ್ಲಿ ಅಳವಡಿಸಿರೋ ಹೈಮಾಸ್ಟ್ ದೀಪಗಳು ಕೆಟ್ಟು ಹೋಗಿದ್ರೆ, ಶೌಚಾಲಯ ಬಳಕೆಗೆ ಸಿಗುತ್ತಿಲ್ಲ.
ಸಾಲದಕ್ಕೆ ಪ್ರವಾಸಿಗರ ರಕ್ಷಣೆಗೆ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಈಜೋದಕ್ಕೆ ತೆರಳಿರೋ ಪ್ರವಾಸಿಗರ ರಕ್ಷಣೆಗೆ ಅಂತಾ ಖಾಸಗಿ ಸಂಸ್ಥೆಯೊಂದು ಇಬ್ಬರು ಜೀವ ರಕ್ಷಕ ಸಿಬ್ಬಂಧಿಗಳನ್ನ ನೇಮಿಸಿದೆ. ಆದ್ರೆ ಪ್ರವಾಸೋದ್ಯಮ ಇಲಾಖೆ ಇದುವರೆಗೂ ಜೀವ ರಕ್ಷಕ ಸಿಬ್ಬಂಧಿಗಳನ್ನ ನೇಮಿಸೋ ಗೋಜಿಗೆ ಹೋಗಿಲ್ಲ. ಇನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಾಣಹಾನಿ ಸಂಬಂಧಿಸಿದಾಗ ಕೇಸು ದಾಖಲಿಸಿಕೊಂಡು ಕೈತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸರಕಾರ ಸೋಮೇಶ್ವರ ಬೀಚ್ ಅಭಿವೃದ್ದಿಗೆ ಮನಸ್ಸು ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ.
ಸೋಮೇಶ್ವರ ಕಡಲ ತೀರದಲ್ಲಿ ಸಾವನ್ನಪ್ಪಿರುವವ ಸಂಖ್ಯೆಗೆ ಲೆಕ್ಕವೇ ಇಲ್ಲ. ಸ್ಥಳೀಯ ಈಜುಗಾರರು ಅದೆಷ್ಟೋ ಮಂದಿಯನ್ನ ರಕ್ಷಿಸೋ ಕಾರ್ಯವನ್ನ ಮಾಡಿದ್ದಾರೆ. ವರ್ಷಂಪ್ರತಿ ಹತ್ತಾರು ಮಂದಿಯನ್ನ ಕಡಲ ಒಡಲು ನುಂಗಿ ಹಾಕುತ್ತಿದ್ದರೂ ಕೂಡ ಪ್ರವಾಸೋದ್ಯಮ ಇಲಾಖೆಗೆ ಇದೆಲ್ಲಾ ಕಾಣಿಸದೇ ಇರೋದು ಮಾತ್ರ ದುರಂತವೇ ಸರಿ. ಇನ್ನಾದ್ರ ಸರಕಾರ ಎಚ್ಚೆತ್ತು ಪ್ರವಾಸಿಗರಿಗೆ ಕನಿಷ್ಟ ಮೂಲಸೌಕರ್ಯಗಳನ್ನ ಒದಗಿಸುವುದರ ಜೊತೆಗೆ ರಕ್ಷಣೆ ನೀಡುವತ್ತ ಗಮನ ಹರಿಸಬೇಕಾದ ಅಗತ್ಯವಿದೆ.