ಕೊಹಿನೂರ್ ವಜ್ರ ; ನಿಲುವು ಸ್ಪಷ್ಟಪಡಿಸಲು ಕೇಂದ್ರಕ್ಕೆ ಸೂಚನೆ

ಕೊಹಿನೂರ್ ವಜ್ರವನ್ನು ಮರಳಿ ಭಾರತಕ್ಕೆ ತರುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ, ಅಮೂಲ್ಯ ವಜ್ರದ ವಾಪಸ್ಸಾತಿ ಕುರಿತಾದ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಒಂದು ವಾರದೊಳಗಾಗಿ ಈ ಬಗ್ಗೆ ವರದಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಆರ್.ಭಾನುಮತಿ ಮತ್ತು ಯು.ಯು.ಲಲಿತ್ ಅವರಿದ್ದ ಪೀಠ ಸಾಲಿಸಿಟರ್ ಜನರಲ್ ರಣಜಿತ್ ಕುಮಾರ್ ಅವರಿಗೆ ನಿರ್ದೇಶಿಸಿದೆ.
ಸುಮಾರು 5 ಸಾವಿರ ವರ್ಷಗಳ ಇತಿಹಾಸವಿರುವ ಕೊಹಿನೂರ್ ವಜ್ರ ಭಾರತಕ್ಕೆ ಸೇರಿದ್ದು ಎಂದು ಅನೇಕರು ಪ್ರತಿಪಾದಿಸಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಭಾರತ, ದಕ್ಷಿಣ ಆಫ್ರಿಕಾ ಸಹಿತ ಹಲವು ದೇಶಗಳು ಅದು ನಮಗೇ ಸಲ್ಲಬೇಕು ಎಂದು ವಾದಿಸುತ್ತಿವೆ. ಸದ್ಯ ಬ್ರಿಟನ್ ನಲ್ಲಿರುವ ಕೊಹಿನೂರ್ ವಜ್ರ ವಾಪಸು ನೀಡಿದರೆ ನಮ್ಮ ವಸ್ತು ಸಂಗ್ರಹಾಲಯವೇ ಖಾಲಿಯಾದಿತು ಎಂದು ಬ್ರಿಟಿಷ್ ಪ್ರಧಾನಿ ಹೇಳುತ್ತಾರೆ ಎಂಬುದನ್ನೂ ನ್ಯಾಯಾಧೀಶರು ವಿಚಾರಣೆ ವೇಳೆ ಉಲ್ಲೇಖಿಸಿದರು.
ಅಖಿಲ ಭಾರತ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯಾಂಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೊಹಿನೂರ್ ವಜ್ರ ಹಾಗೂ ಟಿಪ್ಪು ಸುಲ್ತಾನ್, ಬಹಾದೂರ್ ಷಾ ಜಾಫರ್, ಝಾನ್ಸಿ ರಾಣಿ ಲಕ್ಷ್ಮೀಭಾಯಿ, ನವಾಬ್ ಮೀರ್ ಅಹ್ಮದ್ ಅಲಿ ಬಂಡಾ ಸೇರಿದಂತೆ ಭಾರತೀಯ ರಾಜ ಮಹಾರಾಜರಿಗೆ ಸೇರಿದ ಒಡವೆಗಳು, ಖಡ್ಗಗಳು ಹಾಗೂ ಇತರ ಮಹತ್ವದ ಸಂಪತ್ತನ್ನು ಭಾರತಕ್ಕೆ ವಾಪಸು ತರಬೇಕು ಎಂದು ಕೋರಲಾಗಿದೆ….