ಸೆ.22ರಿಂದ ರಾಜ್ಯದಲ್ಲಿ ಹೊಸ ಜಾತಿ ಜನಗಣತಿ; 15 ದಿನಗಳಲ್ಲಿ ಪೂರ್ಣಗೊಳಿಸಲು ಸರ್ಕಾರ ಸಿದ್ಧತೆ

0
Vidhanasoudha

ಬೆಂಗಳೂರು: ರಾಜ್ಯದಲ್ಲಿ ನೂತನ ಜಾತಿ ಜನಗಣತಿ ಕಾರ್ಯವನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರೊಳಗೆ ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. “ಸಮೀಕ್ಷೆಯು ವೈಜ್ಞಾನಿಕ, ಪಾರದರ್ಶಕವಾಗಿರಬೇಕು. ಪ್ರಶ್ನೆಗಳ ಅಂತಿಮ ಆಯ್ಕೆಗೆ ತಜ್ಞರ ಸಮಿತಿಯ ಸಲಹೆ ಪಡೆಯಬೇಕು. ಈ ಬಾರಿ 1.65 ಲಕ್ಷ ಗಣತಿದಾರರ ಅಗತ್ಯವಿದ್ದು, ಶಿಕ್ಷಕರ ಜೊತೆಗೆ ಇತರೆ ಇಲಾಖೆಗಳ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುವುದು,” ಎಂದು ಸಿಎಂ ಸಭೆಯಲ್ಲಿ ಸೂಚಿಸಿದರು.

ಅಕ್ಟೋಬರ್ ಅಂತ್ಯದೊಳಗೆ ಸಮೀಕ್ಷೆಯ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆಯಿದ್ದು, ತರಬೇತಿ ಸೇರಿದಂತೆ ಎಲ್ಲ ಪೂರ್ವಸಿದ್ಧತೆಗಳನ್ನು ತಕ್ಷಣ ಆರಂಭಿಸಲು ಸೂಚಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗ ನೀಡಿದ ಪ್ರಸ್ತಾವನೆಯನ್ವಯ, ಈ ಬಾರಿ ರಾಜ್ಯದ ಎಲ್ಲ 7 ಕೋಟಿ ಜನರನ್ನು ಒಳಗೊಂಡ ಸಮಗ್ರ ಸಮೀಕ್ಷೆ ನಡೆಯಲಿದೆ. ಜಾತಿ ಆಧಾರಿತ ತಾರತಮ್ಯ ನಿಗ್ರಹಿಸುವುದು ಸಮೀಕ್ಷೆಯ ಮುಖ್ಯ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದರು.

ಭೂಸ್ವಾಮ್ಯ ಸೇರಿದಂತೆ ವ್ಯಕ್ತಿಯ ಆರ್ಥಿಕ ಹಿನ್ನಲೆಯಲ್ಲಿ ಮಾಹಿತಿ ಸಂಗ್ರಹಿಸಲು ಸಮೀಕ್ಷೆ ಯೋಜನೆಯಾಗಿದೆ. ಮುಂಬರುವ ಬಜೆಟ್ ತಯಾರಿಕೆಗೆ ಈ ವರದಿ ಪ್ರಮುಖ ಆಧಾರವಾಗಲಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು. “ಈ ಬಾರಿ ಸಮೀಕ್ಷೆಯು ಇಡೀ ದೇಶಕ್ಕೆ ಮಾದರಿಯಾಗಬೇಕು. ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಎಲ್ಲರನ್ನೂ ಸಮೀಕ್ಷೆಯಲ್ಲಿ ಒಳಗೊಂಡಂತೆ ನೋಡಿಕೊಳ್ಳಬೇಕು,” ಎಂದು ಅವರು ಹೇಳಿದರು.

ಈ ಹಿಂದೆ ಕಾಂತರಾಜ್ ಆಯೋಗವು 54 ಪ್ರಶ್ನೆಗಳೊಂದಿಗೆ ಹಸ್ತಚಾಲಿತ ಸಮೀಕ್ಷೆ ನಡೆಸಿದ್ದನ್ನು ಸ್ಮರಿಸಿ, ಈ ಬಾರಿ ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲಾಗುವುದು. ತೆಲಂಗಾಣ ಮಾದರಿಯ ಅಧ್ಯಯನ ಕೂಡ ಕೈಗೊಳ್ಳಲಾಗುತ್ತದೆ. ಸಮೀಕ್ಷೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ವಿವರಿಸಿದರು.

ಬೆಂಗಳೂರು ನಗರದಲ್ಲಿ ಸಮೀಕ್ಷೆ ಯಶಸ್ವಿಯಾಗಿ ನಡೆಯುವಂತೆ ಪ್ರತ್ಯೇಕ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂದು ಕೂಡ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಸಚಿವ ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷೆ ಮಧುಸೂದನ್ ಆರ್. ನಾಯಕ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *