ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ

(ವರದಿ: ಮಹದೇವಸ್ವಾಮಿ ಜಿ. ಗೌಡ)
ಚಾಮರಾಜನಗರ: ಪುಟಾಣಿ ಮಕ್ಕಳ ಹೆಜ್ಜೆ, ಅಜ್ಜಿಯರ ನಗು ಹಾಗೂ ಬಾಂಧವ್ಯದ ಸಂಭ್ರಮಕ್ಕೆ ಹನೂರಿನ ಕ್ರಿಸ್ತರಾಜ ಶಾಲೆ ಸಾಕ್ಷಿಯಾಯಿತು. ಶಾಲೆಯಲ್ಲಿ ಶನಿವಾರ ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗಾಗಿ ಆಯೋಜಿಸಿದ್ದ ಗ್ರ್ಯಾಂಡ್ ಮದರ್ಸ್ ಡೇ ಕಾರ್ಯಕ್ರಮ ಅಜ್ಜಿ-ಮೊಮ್ಮಕ್ಕಳ ನಡುವಿನ ಪ್ರೀತಿಯ ಬಂಧವನ್ನು ಅನಾವರಣಗೊಳಿಸಿತು.
ಶಾಲೆಯ ವ್ಯವಸ್ಥಾಪಕ ಫಾದರ್ ಸಂಜಯ್ ಕುಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳನ್ನು ಕೇವಲ ಅಂಕಗಳ ಯಂತ್ರಗಳನ್ನಾಗಿ ರೂಪಿಸುವುದಲ್ಲ, ಪ್ರಗತಿಪರ ಚಿಂತನೆ ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿರುವ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಮಕ್ಕಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಪರಿಶ್ರಮ ಮಹತ್ವದ್ದಾಗಿದೆ. ಮಕ್ಕಳನ್ನು ಹುರಿದುಂಬಿಸಲು ಅಮೂಲ್ಯ ಸಮಯ ನೀಡಿ ಆಗಮಿಸಿದ ಪೋಷಕರು ಹಾಗೂ ಅಜ್ಜಿಯರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿ ಶಿಕ್ಷಣ ಸಂಯೋಜಕ (ಇಸಿಒ) ಮಹೇಶ್ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಪರದೆಗೆ ಹೆಚ್ಚು ಅಂಟಿಕೊಂಡಿದ್ದಾರೆ. ಅದರಿಂದ ಹೊರಬಂದು ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಬೇಕು. ಓದು, ಆಟ ಹಾಗೂ ಮನರಂಜನೆಯೂ ಶಿಕ್ಷಣದ ಭಾಗವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.

ಅಜ್ಜಿಯರಿಗೆ ಶುಭಾಶಯ ಪತ್ರ, ಗುಲಾಬಿ
ಕಾರ್ಯಕ್ರಮದ ವಿಶೇಷವಾಗಿ ಮಕ್ಕಳು ತಾವೇ ತಯಾರಿಸಿದ ಶುಭಾಶಯ ಪತ್ರಗಳನ್ನು ಅಜ್ಜಿಯರಿಗೆ ನೀಡಿ, ಗುಲಾಬಿ ಹೂವು ಅರ್ಪಿಸಿ ಪಾದಮುಟ್ಟಿ ನಮಸ್ಕರಿಸಿದರು. ಬಳಿಕ ಅಜ್ಜಿಯರು ಮತ್ತು ಮೊಮ್ಮಕ್ಕಳು ಒಟ್ಟಾಗಿ ನೃತ್ಯ, ಹಾಡುಗಳ ಮೂಲಕ ಸಂಭ್ರಮಿಸಿದರು. ಕೆಲ ಅಜ್ಜಿಯರು ತಮ್ಮ ಬಾಲ್ಯದ ನೆನಪುಗಳನ್ನು ಮಕ್ಕಳೊಂದಿಗೆ ಹಂಚಿಕೊಂಡು ನೀತಿ ಪಾಠ ಹೇಳಿದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಶೀಲಾ ಮೇರಿ, ಮುಖ್ಯ ಶಿಕ್ಷಕಿಯರಾದ ಪುಷ್ಪ ಮೇರಿ, ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ, ಪುಷ್ಪಸಗಾಯ ಸೇರಿದಂತೆ ಶಿಕ್ಷಕರು, ಪೋಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
