‘ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಮತ್ತೊಬ್ಬ ಅಧಿಕಾರಿ ಬಲಿ’; ಬಿಜೆಪಿ ಆಕ್ರೋಶ..

‘ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಮತ್ತೊಬ್ಬ ಅಧಿಕಾರಿ ಬಲಿ’ ಎಂದು ಬಿಜೆಪಿ ಆಕ್ರೋಶ.. ಪಿಎಸ್​ಐ ಸಾವಿಗೆ ಕಾರಣವಾದ ಶಾಸಕನ ಬಂಧನಕ್ಕೆ ಸಿ.ಟಿ.ರವಿ ಆಗ್ರಹ.. 

ಯಾದಗಿರಿ: ಸೈಬರ್ ಕ್ರೈಮ್ ಠಾಣೆಯ ಪಿಎಸ್​ಐ ಪರಶುರಾಮ (34) ಎಂಬವರು ಶುಕ್ರವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಪ್ರಭಾವಿಗಳಿಂದ ಹಣಕ್ಕಾಗಿ ಒತ್ತಡ ಹೇರಲಾಗಿದ್ದು ಇದರಿಂದ ನೊಂದಿದ್ದ ಪಿಎಸ್​ಐ ಪರಶುರಾಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಿಎಸ್​ಐ ಸಾವಿನ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ರೇಟ್ ಕಾರ್ಡ್ ಮತ್ತು ಎಕ್ಸ್ಟ್ರಾ ಟಿಪ್ಸ್ ಹಾವಳಿಯಿಂದ ಯಾದಗಿರಿಯ ಪಿಎಸ್ಐ ಪರಶುರಾಮ ಅವರ ಜೀವ ಹೋಗಿದೆ ಎಂದು ಆರೋಪಿಸಿದ್ದಾರೆ.

ಭ್ರಷ್ಟತನದ ಪರಮಾವಧಿ ಮುಟ್ಟಿದ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೊಬ್ಬ ಪೊಲೀಸ್ ಅಧಿಕಾರಿಯನ್ನು ಬಲಿಪಡೆದಿದೆ. ಅತ್ಯಂತ ಬಡತನದ ಹಿನ್ನಲೆಯಿಂದ ಬಂದರೂ, ತನ್ನ ಛಲ ಮತ್ತು ಸಾಧನೆಯಿಂದ ಪಿಎಸ್ಐ ಆದ ಪರಶುರಾಮ್ ಛಲವಾದಿ ಯಾದಗಿರಿಯಲ್ಲಿ ನಿನ್ನೆ ಸಾವಿಗೀಡಾಗಿದ್ದಾರೆ. ಮೃತರ ಪತ್ನಿ ತನ್ನ ಪತಿಯ ಸಾವಿಗೆ, “ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಮಾಡಿದ ಒತ್ತಡದಿಂದ ತನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ”. ಈ ಸಾವಿಗೆ ಭ್ರಷ್ಟ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ‘X’ನಲ್ಲಿ ಸಿ.ಟಿ.ರವಿ ಪೋಸ್ಟ್ ಹಾಕಿದ್ದಾರೆ.

ಮೃತ ಪಿಎಸ್ಐ ಪತ್ನಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ಹೆಸರೇಳಿದರೂ ಅವರನ್ಯಾಕೆ ಇನ್ನೂ ಬಂಧಿಸಿಲ್ಲ?? ನಿಮ್ಮ ಲಂಚದ ಹಾವಳಿಗೆ ಇನ್ನೆಷ್ಟು ಅಧಿಕಾರಿಗಳು ಬಲಿಯಾಗಬೇಕು? ಎಂದು ಪ್ರಶ್ನಿಸಿರುವ ಸಿ.ಟಿ.ರವಿ, ಕೂಡಲೇ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತವರ ಪುತ್ರನನ್ನು ಈ ಕೂಡಲೇ ಬಂಧಿಸಿ, ಮೃತ ಪಿಎಸ್ಐ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.

You may have missed