ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದಾಳಿ ಖಂಡನೀಯ; ಕಾಂಗ್ರೆಸ್ ಆಕ್ರೋಶ

0
CJP-Chalo-Sansad-Delhi-lathi-charge-2026-300x186-2

ಬೆಂಗಳೂರು: ದೆಹಲಿಯ ಜಂತರ್ ಮಂತರ್ ನಿಂದ ‘ಚಲೋ ಸಂಸದ್’ ಮೆರವಣಿಗೆ ನಡೆಸುತ್ತಿದ್ದಾಗ ಶಾಂತಿಯುತ ಪ್ರತಿಭಟನೆ ಮತ್ತು ಆಮರಣಾಂತ ಸತ್ಯಾಗ್ರಹದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮೇಲೆ ನಡೆಸಿದ ಅಮಾನವೀಯ ಪೊಲೀಸ್ ದಾಳಿ ಸಂಪೂರ್ಣವಾಗಿ ಖಂಡನೀಯ ಎಂದು ಕಾಂಗ್ರೆಸ್ ಹೇಳಿದೆ.

ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ರಕ್ಷಿಸಲು ಸಾಧ್ಯವಾಗದ ಸರ್ಕಾರವು ನ್ಯಾಯಕ್ಕಾಗಿ ಒತ್ತಾಯಿಸುವ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದೆ, ತನ್ನ ಸರ್ವಾಧಿಕಾರಿ ಕ್ರೌರ್ಯವನ್ನು ನಿರ್ಲಜ್ಜವಾಗಿ ಪ್ರದರ್ಶಿಸಿದೆ ಎಂದು ಕಾಂಗೇಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವ ನೀಡಿರುವ ಸಂವಿಧಾನಬದ್ಧ ಹಕ್ಕು. ತಮ್ಮ ಭವಿಷ್ಯವನ್ನು ನಾಶಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತುವುದು ಅಪರಾಧವೇ? ಅವರ ಕೈಯಲ್ಲಿ ಪುಸ್ತಕ, ಫಲಕ ಮತ್ತು ನ್ಯಾಯದ ಬೇಡಿಕೆಗಳಿದ್ದವು; ಸರ್ಕಾರದ ಕೈಯಲ್ಲಿ ಲಾಠಿ, ಬೂಟು, ಬ್ಯಾರಿಕೇಡ್ ಮತ್ತು ಬಂಧನಗಳಿದ್ದವು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದ ಹೇಡಿ ಸರ್ಕಾರವೇ ಪೊಲೀಸ್ ಬಲದಿಂದ ಅವರ ಧ್ವನಿಯನ್ನು ಹತ್ತಿಕ್ಕುತ್ತಿರುವುದು ನಾಚಿಕೆಗೇಡು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ಶಾಂತಿಯುತ ಸತ್ಯಾಗ್ರಹಗಳನ್ನು ಇದೇ ರೀತಿಯಲ್ಲಿ ಲಾಠಿ ಮತ್ತು ಬಂಧನಗಳಿಂದ ಹತ್ತಿಕ್ಕಲು ಯತ್ನಿಸಿದ್ದರು. ಆದರೆ ಜನರ ಧ್ವನಿಯನ್ನು ಶಾಶ್ವತವಾಗಿ ಮೌನಗೊಳಿಸಲು ಅವರಿಗೇ ಸಾಧ್ಯವಾಗಲಿಲ್ಲ; ಕೊನೆಗೆ ಬ್ರಿಟಿಷರೇ ಈ ದೇಶವನ್ನು ಬಿಟ್ಟು ಹೋಗಬೇಕಾಯಿತು. ಅಂದು ಬ್ರಿಟಿಷರ ಗುಲಾಮಗಿರಿ ಮಾಡಿದವರ ರಾಜಕೀಯ ವಾರಸುದಾರರು ಇಂದು ಅದೇ ವಸಾಹತುಶಾಹಿ ದಮನವನ್ನು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸುತ್ತಿದ್ದಾರೆ. ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಬಿಜೆಪಿಯವರು ಅಧಿಕಾರದಿಂದ ಇಳಿಯುವ ದಿನಗಳು ದೂರವಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ–ಯುವಜನರನ್ನು ಸುಳ್ಳು ಭರವಸೆಗಳಿಂದ ದಾರಿ ತಪ್ಪಿಸಿ, ಅವರ ಮತ ಪಡೆದು ಅಧಿಕಾರಕ್ಕೇರಿದವರೇ ಇಂದು ಅದೇ ಯುವಜನರ ರಕ್ತವನ್ನು ಬೀದಿಯಲ್ಲಿ ಚೆಲ್ಲಿದ್ದಾರೆ. ಉದ್ಯೋಗ ಕೇಳಿದರೆ ಬಂಧನ, ಪರೀಕ್ಷೆಯಲ್ಲಿ ನ್ಯಾಯ ಕೇಳಿದರೆ ಲಾಠಿ, ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಪ್ರಶ್ನಿಸಿದರೆ ಪೊಲೀಸ್ ದೌರ್ಜನ್ಯ ಇದೇನಾ ಮೋದಿ ಸರ್ಕಾರದ ಯುವಜನ ನೀತಿ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

‘ಪರೀಕ್ಷಾ ಪೇ ಚರ್ಚಾ’ ಹೆಸರಿನಲ್ಲಿ ಉಪದೇಶ ಮಾಡುವ ಪ್ರಧಾನಿಗಳಿಗೆ ವಿದ್ಯಾರ್ಥಿಗಳ ನಿಜವಾದ ಪ್ರಶ್ನೆಗಳನ್ನು ಎದುರಿಸುವ ಧೈರ್ಯ 56 ಇಂಚಿನ ಎದೆಯಲ್ಲಿ ಇಲ್ಲವೇ ವಿದ್ಯಾರ್ಥಿಗಳ ಮೇಲೆ ಬೀಸಿದ ಪ್ರತಿಯೊಂದು ಲಾಠಿಯೂ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಬಿದ್ದ ಏಟು. ಇದು ಮೋದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿದೆ ಎಂದಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ತಕ್ಷಣ ಚಿಕಿತ್ಸೆ ನೀಡಿ, ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಬೇಕು. ಈ ನಾಚಿಕೆಗೇಡಿನ ದೌರ್ಜನ್ಯಕ್ಕೆ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು ಹಾಗೂ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಈಗಲಾದರೂ ರಾಜೀನಾಮೆ ನೀಡಬೇಕು. ಲಾಠಿಯಿಂದ ದೇಹವನ್ನು ಗಾಯಗೊಳಿಸಬಹುದು; ಆದರೆ ವಿದ್ಯಾರ್ಥಿಗಳ ಪ್ರಶ್ನೆಗಳನ್ನು, ಯುವಜನರ ಆಕ್ರೋಶವನ್ನು ಮತ್ತು ಪ್ರಜಾಪ್ರಭುತ್ವದ ಧ್ವನಿಯನ್ನು ಎಂದಿಗೂ ಕೊಲ್ಲಲು ಸಾಧ್ಯವಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

Leave a Reply

Your email address will not be published. Required fields are marked *