‘ಭ್ರಷ್ಟಾಚಾರದ ಎಲ್ಲಾ ವಿಕೆಟ್‌ಗಳು ಬೀಳಬೇಕು’: ‘ಬಳ್ಳಾರಿ ಚಲೋ’ ಪಾದಯಾತ್ರೆಯಲ್ಲಿ ಸಿ.ಟಿ. ರವಿ ರಣಕಹಳೆ

0
CT-RAVI

ಬಳ್ಳಾರಿ: ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ, ರೈತರ ಸಮಸ್ಯೆಗಳು ಹಾಗೂ ಯುವಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯ 9ನೇ ದಿನವಾದ ಬುಧವಾರ ಕುಡಿತಿನಿಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವರಾದ ಸಿ.ಟಿ. ರವಿ, ಎಸ್‌. ಸುರೇಶ್‌ ಕುಮಾರ್‌, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಕ್ಯಾ. ಬ್ರಿಜೇಶ್‌ ಚೌಟ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಮ್‌ ಗೌಡ, ನಂದೀಶ್‌ ರೆಡ್ಡಿ, ಉಪಾಧ್ಯಕ್ಷ ರಾಜು ಗೌಡ ಸೇರಿದಂತೆ ಹಲವು ನಾಯಕರು, ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ಭ್ರಷ್ಟಾಚಾರದ ಎಲ್ಲಾ ವಿಕೆಟ್‌ಗಳು ಬೀಳಬೇಕು’

ಪಾದಯಾತ್ರೆಯಲ್ಲಿ ಮಾತನಾಡಿದ ಸಿ.ಟಿ. ರವಿ, ರೈತರು, ಯುವಕರು ಹಾಗೂ ದಲಿತರಿಗೆ ನ್ಯಾಯ ದೊರಕಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ಪ್ರಕರಣದಲ್ಲಿ ಕೇವಲ ಒಬ್ಬರ ರಾಜೀನಾಮೆ ಪಡೆದರೆ ಸಾಲದು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. “ಭ್ರಷ್ಟಾಚಾರದ ಎಲ್ಲ ವಿಕೆಟ್‌ಗಳು ಬೀಳಬೇಕು” ಎಂದು ಅವರು ಆಗ್ರಹಿಸಿದರು.

ಗೃಹಲಕ್ಷ್ಮಿ ಬಾಕಿ ಹಣಕ್ಕೆ ಲೆಕ್ಕ ಕೇಳಿದ ಬಿಜೆಪಿ

ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಹಣದ ಕುರಿತು ಸರ್ಕಾರ ಸ್ಪಷ್ಟ ಲೆಕ್ಕ ನೀಡಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು. ಕೆಪಿಎಸ್‌ಸಿ ನೇಮಕಾತಿಯಲ್ಲಿ ಯುವಕರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅವರು, ಬರ ಪರಿಹಾರ ನೀಡದೆ ರೈತರನ್ನು ನಿರ್ಲಕ್ಷಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರ ಹೆಚ್ಚಿಸಿದ್ದ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿತಗೊಳಿಸಿರುವುದು ಜನವಿರೋಧಿ ನೀತಿ ಎಂದು ಟೀಕಿಸಿದ ಅವರು, ಇಂತಹ ವಿಷಯಗಳ ವಿರುದ್ಧ ‘ಬಳ್ಳಾರಿ ಚಲೋ’ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *