ಎತ್ತುಗಳ ಜೊತೆ ಶಾರದಮ್ಮ ಕೃಷಿ, ಎಲ್ಲೆಡೆಯಿಂದ ಶಹಬ್ಬಾಸ್ ಗಿರಿ, ಆದರೆ ಅಂಗಲಾಚಿದರೂ ಸಿಗದ ಬೋರ್ವೆಲ್ ಸೌಲಭ್ಯ

ಶಿವಮೊಗ್ಗ: ಆಧುನಿಕ ಕೃಷಿ ಯಂತ್ರೋಪಕರಣಗಳ ಯುಗದಲ್ಲೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸಿಕೊಂಡು, ಎತ್ತುಗಳ ಸಹಾಯದಿಂದ ನೇಗಿಲು ಹೊಡೆಯುತ್ತಾ ಕೃಷಿ ಮಾಡುತ್ತಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರೈತ ಮಹಿಳೆ ಶಾರದಮ್ಮ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಸ್ವಗ್ರಾಮ ಕಾಗೋಡು ಮೂಲದ ಶಾರದಮ್ಮ, ಪ್ರತಿದಿನ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡೇ ತಮ್ಮ ಜಮೀನಿಗೆ ತೆರಳಿ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ಆದರೆ, ನೀರಾವರಿ ಸೌಲಭ್ಯ ಇಲ್ಲದಿರುವುದು ಅವರ ದೊಡ್ಡ ಸಮಸ್ಯೆಯಾಗಿದೆ.
ಶಾರದಮ್ಮ ಅವರಿಗೆ ಎರಡು ಎಕರೆ ಜಮೀನು ಇದ್ದರೂ, ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಕೇವಲ ಐದು ಚೀಲ ಭತ್ತದ ಇಳುವರಿ ಬಂದಿದ್ದು, ನೀರಿನ ಕೊರತೆಯಿಂದ ಬೆಳೆ ಕೈಕೊಡುತ್ತಿದೆ ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
“ನಾಟಿ ಮಾಡೋಣ ಎಂದರೆ ನೀರಿಲ್ಲ. ನಾಟಿ ಮಾಡಿದ ಮೇಲೂ ನೀರಿಲ್ಲದೆ ಬೆಳೆ ಒಣಗುತ್ತದೆ. ಹಂದಿಗಳು ಬಂದು ಬೆಳೆ ಹಾಳು ಮಾಡುತ್ತವೆ. ನಮಗೆ ಒಂದು ಬೋರ್ವೆಲ್ ಸಿಕ್ಕರೆ ಸಾಕು” ಎಂದು ಶಾರದಮ್ಮ ಮನವಿ ಮಾಡಿದ್ದಾರೆ.

ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಸೌಲಭ್ಯ ಕಲ್ಪಿಸಿಕೊಡುವಂತೆ ಕ್ಷೇತ್ರದ ಜನಪ್ರತಿನಿಧಿಗಳಿಗೆ ಮಾಧ್ಯಮದ ಮೂಲಕ ಮನವಿ ಮಾಡಿರುವ ಅವರು, “ಒಂದು ಬೋರ್ವೆಲ್ ಆದರೆ ನೆಮ್ಮದಿಯಾಗಿ ಕೃಷಿ ಮಾಡಿಕೊಂಡು ಜೀವನ ನಡೆಸಬಹುದು” ಎಂದು ಭಾವುಕರಾಗಿ ಹೇಳಿದ್ದಾರೆ.
ಕಾಗೋಡಿನಲ್ಲಿ ವಾಸಿಸುವ ಶಾರದಮ್ಮ ಅವರ ಜಮೀನು ಮಂಡಗಳಲೆ ಪ್ರದೇಶದಲ್ಲಿದ್ದು, ವಾಹನ ಸೌಲಭ್ಯವಿಲ್ಲದ ಕಾರಣ ಪ್ರತಿದಿನ ಎತ್ತುಗಳೊಂದಿಗೆ ಕಾಲ್ನಡಿಗೆಯಲ್ಲೇ ಜಮೀನಿಗೆ ತೆರಳುತ್ತಾರೆ.
ವಿಶೇಷವೆಂದರೆ ಇಂದಿಗೂ ತಾವೇ ನೇಗಿಲು ಹಿಡಿದು ಗದ್ದೆ ಉಳುಮೆ ಮಾಡುವ ಅವರು, ಭತ್ತದ ಒಕ್ಕಲುತನವನ್ನೂ ಎತ್ತುಗಳ ಸಹಾಯದಿಂದ ಮಾಡುತ್ತಿದ್ದಾರೆ. ಯಂತ್ರಗಳ ಬಳಕೆಯಿಂದ ಎತ್ತುಗಳಿಗೆ ಹುಲ್ಲಿನ ಕೊರತೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಶ್ರಮವಾದರೂ ಸಾಂಪ್ರದಾಯಿಕ ಕೃಷಿಯನ್ನೇ ಮುಂದುವರಿಸುತ್ತಿದ್ದಾರೆ.
ಶ್ರಮಜೀವಿ ರೈತ ಮಹಿಳೆ ಶಾರದಮ್ಮ ಅವರ ಮನವಿಗೆ ಸರ್ಕಾರ ಹಾಗೂ ಕೃಷಿ ಇಲಾಖೆ ಸ್ಪಂದಿಸಿ, ಅಗತ್ಯ ನೀರಾವರಿ ಸೌಲಭ್ಯ ಕಲ್ಪಿಸುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
