‘ಬ್ಯಾರಿ ಕೂಟ -2026’: ‘ಯಾರೇ ವಿಭಜಿಸಲು ಪ್ರಯತ್ನಿಸಿದರೂ ಬ್ಯಾರಿಗಳು ಒಗ್ಗಟ್ಟನ್ನು ಉಳಿಸಿಕೊಂಡು ಹೋಗಬೇಕು’: ಸಿದ್ದರಾಮಯ್ಯ ಸಲಹೆ

0
Barry Koota- SIDDARAMAIAH- UT KHADER- GA BAVA 2

ಬೆಂಗಳೂರು: ಬ್ಯಾರಿಗಳನ್ನು ಯಾರೇ ವಿಭಜಿಸಲು ಪ್ರಯತ್ನಿಸಿದರೂ ತಮ್ಮ ಅಸ್ಮಿತೆಯನ್ನು, ಒಗ್ಗಟ್ಟನ್ನು ಉಳಿಸಿಕೊಂಡು ಹೋಗಬೇಕು. ತುಳು ಮತ್ತು ಬ್ಯಾರಿ ಭಾಷೆಗೆ ಲಿಪಿ ಇಲ್ಲದ್ದರಿಂದ ಕನ್ನಡದಲ್ಲಿಯೇ ನಿಮ್ಮತನವನ್ನು ಉಳಿಸಿಕೊಂಡಿರುವುದು ಪ್ರಶಂಸನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ ಭಾನುವಾರ ಆಯೋಜಿಸಿದ್ದ ಬೃಹತ್ “ಬ್ಯಾರಿ ಕೂಟ -2026” ಅನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ವಿಧಾನಸಭಾಧ್ಯಕ್ಷ ಯು. ಟಿ.ಖಾದರ್, ಕೆಪಿಸಿಸಿ ನಾಯಕ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಸೇರಿದಂತೆ ಅನೇಕ ಪ್ರಮುಖರು ಸಮಾರಂಭದಲ್ಲಿ ಉಪಸಾತಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿಗಳು ದೇಶ, ವಿದೇಶದ ಅನೇಕ ಭಾಗಗಳಲ್ಲಿ ಕೆಲಸ ಮಾಡುವವರಾದರೂ ಬ್ಯಾರಿ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಬ್ಯಾರಿಗಳು ಜಾತ್ಯತೀತರು. ಜಾತಿ ವ್ಯಾಮೋಹವಾಗಲಿ, ಧರ್ಮದ ವ್ಯಾಮೋಹವಾಗಲಿ ಇಲ್ಲ. ಮೂಲತಃ ವ್ಯಾಪಾರಿಗಳಾದ ಬ್ಯಾರಿಗಳು ಎಲ್ಲಾ ಸಮುದಾಯಗಳೊಂದಿಗೆ ಹೊಂದಿಕೊಂಡು ಅವರ ಸಂಸ್ಕೃತಿ, ಉದ್ಯೋಗದೊಂದಿಗೆ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಿರುವುದು ದೊಡ್ಡ ವಿಚಾರ ಎಂದರು.

ಬ್ಯಾರಿ ಸಮುದಾಯದವರು ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ. ಒಂದು ಕಾಲದಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು, ಹೆಣ್ಣು ಮಕ್ಕಳು ವಿದ್ಯಾವಂತರಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆ. ಲಿಂಗ ತಾರತಮ್ಯ ಹೋಗಲಾಡಿಸಲು ವಿದ್ಯಾಭ್ಯಾಸ ಅವಶ್ಯಕ ಎಂದವರು ಪ್ರತಿಪಾದಿಸಿದರು.

ಎಲ್ಲರೂ ಜಾತ್ಯತೀತರಾಗಿರುವುದು ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಪರಸ್ಪರ ಪ್ರೀತಿಸಬೇಕು‌ ಮನುಷ್ಯರಾಗಿ ಬಾಳಬೇಕು ಎಂದು ಎಲ್ಲಾ ಧರ್ಮಗಳೂ ಹೇಳುತ್ತವೆ. ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವುದು ಸರಿಯಲ್ಲ ಎಂದು ಸಿಎಂ ಹೇಳಿದರು.

ಬ್ಯಾರಿ ಭವನ ನಿರ್ಮಾಣಕ್ಕೆ 5 ಕೋಟಿ ರೂ ನೀಡಿದ್ದೆ. ಬ್ಯಾರಿ ಭಾಷೆ, ಕಲೆ ಉಳಿಸಲು ಸರ್ಕಾರ ನೆರವು ನೀಡಲಿದೆ. ಮಂಗಳೂರು ಬ್ಯಾರಿ ಅಕಾಡೆಮಿಗೆ 3 ಕೋಟಿ, ಹಜ್ ಭವನಕ್ಕೆ 10 ಕೋಟಿ ಅನುದಾನ ನೀಡಲಾಗಿದೆ ಎಂದವರು ಗಮನಸೆಳೆದರು.

ಬ್ಯಾರಿ ಸಮುದಾಯಕ್ಕೆ ಸೇರಿದ ಯು. ಟಿ.ಖಾದರ್ ವಿಧಾನಸಭಾಧ್ಯಕ್ಷರಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಾ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ. ಇಡೀ ಬ್ಯಾರಿ ಸಮುದಾಯ ಇನ್ನಷ್ಟು ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಲಿ‌ ಎಂದು ಸಿಎಂ ಹೇಳಿದರು.

Leave a Reply

Your email address will not be published. Required fields are marked *

You may have missed