ಡಿ.11 ; ಬಂಥನಾಳದಲ್ಲಿ ಕೃಷಿಕರ ಮಕ್ಕಳಿಗೆ ಸಾಮೂಹಿಕ ವಿವಾಹ

ಬರಪೀಡಿತ ವಿಜಯಪುರ ಜಿಲ್ಲೆಯ ಎಲ್ಲೆಡೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಮಳೆ ಇಲ್ಲದೆ ಕೈಕೊಟ್ಟಿವೆ. ಮಳೆಯ ನೀರಿನ ಕೊರತೆಯಾಗಿ ಭೂತಾಯಿ ಬಂಜೆಯಂತಾದರೆ, ನಾಡಿನ ಜನತೆಗೆ ಅನ್ನ ನೀಡುವ ರೈತನ ಕೈಗಳೆ ಖಾಲಿಯಾಗಿವೆ. ದನಕರುಗಳ ಮೇವು, ನೀರಿಗೂ ಇಲ್ಲಿ ತತ್ವಾರ.
ಇಂಥದರಲ್ಲಿ ಇಲ್ಲಿನ ರೈತರು ತಮ್ಮ ಮಕ್ಕಳ ಮದುವೆ ಕಾರ್ಯದ ಖರ್ಚು ವೆಚ್ಚಕ್ಕೂ ಬೆಳೆಯ ಆದಾಯವನ್ನೆ ನೆಚ್ಚಿಕೊಂಡ ರೈತನ ಕನಸು ಕೂಡ ಕಮರಿದಂತಾಗಿದೆ. ತೀವ್ರ ಸಂಕಷ್ಟದಲ್ಲಿದ್ದ ಇಂಥಹ ರೈತ ಕುಟುಂಬಗಳನ್ನು ರಕ್ಷಿಸಲು ಇಂಡಿ ತಾಲ್ಲೂಕಿನ ಬಂಥನಾಳ ಮಠದ ಪೀಠಾಧಿಪತಿ ಶ್ರೀ ವೃಷಭಲಿಂಗೇಶ್ವರ ಮಹಾ ಶಿವಯೋಗಿಗಳು ಡಿ.11 ರಂದು ಬಂಥನಾಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ರೈತರಿಗೆ ಸಂತಸ ತಂದಿದೆ.
ಕಳೆದ 2005ರ ನವಂಬರ 18,19 ಮತ್ತು 20 ರಂದು ಇಂಡಿ ತಾಲ್ಲೂಕಿನ ಬಂಥನಾಳ ಮಠದ ಶಾಖಾ ಮಠ ಲಚ್ಯಾಣ ಮಠದಲ್ಲಿ ಸರ್ವ ಧರ್ಮದ ಸರಳ ಸಾಮೂಹಿಕ ವಿವಾಹ ಪ್ರಥಮ ಬಾರಿಗೆ ಹಮ್ಮಿಕೊಳ್ಳುವದರ ಜೊತೆಗೆ ಶ್ರೀ ಸಿದ್ದಲಿಂಗ ಮಹಾರಾಜರ 155ನೇ ಜಯಂತಿ ಹಾಗೂ ಲಕ್ಷ ದೀಪೋತ್ಸವ ಹಾಗೂ ಜಂಗಮಾರಾಧನೆಗಳಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸರ್ವ ಧರ್ಮದ 250 ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಅಂದಿನಿಂದ ಇಂದಿನವರೆಗೂ ಈ ಪೂಜ್ಯರು ತಮ್ಮ ಮಠದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹವನ್ನು ಅಚ್ಚುಕಟ್ಟಾಗಿ ಸಂಘಟಿಸುತ್ತಾ ಬಂದಿರುವದು ಶ್ಲಾಘನೀಯ.
1971ರಲ್ಲಿ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಸಂಸ್ಥಾನಮಠ 5ನೇ ಪೀಠಾಧಿಪತಿಯಾದ ಸಜ್ಜನಿಕೆಯ ಸಾಕಾರಮೂರ್ತಿ ಶ್ರೀ ವೃಷಭಲಿಂಗೇಶ್ವರ ಶ್ರೀಗಳು ಬಸಯ್ಯ ಮತ್ತು ಶರಣಮ್ಮ ಎಂಬ ಶರಣ ದಂಪತಿಗಳ ಪುತ್ರರಾಗಿ 1964ರಲ್ಲಿ ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ಜನ್ಮತಾಳಿದರು.
ಬಂಥನಾಳ ಮಠದ ಈ ಹಿಂದಿನ ಪೀಠಾಧಿಪತಿ ಪೂಜ್ಯ ಸಂಗನಬಸವ ಶ್ರೀಗಳ ಸಂಕಲ್ಪದಂತೆ ಬಂಥನಾಳ ಮಠಕ್ಕೆ ಆಗಮಿಸಿದರು. ನಂತರ ಶ್ರೀಗಳ ದೂರದೃಷ್ಟಿ ಹಾಗೂ ತಪೋಬಲದ ದೀಕ್ಷೆ ಪಡೆದು ವಿದ್ಯಾಭ್ಯಾಸದ ಸಂದರ್ಭದಲ್ಲೆ ಬಂಥನಾಳ ಮಠದ ಪೀಠವನ್ನು ಅಲಂಕರಿಸಿ ಮಠದ ಪರಂಪರೆ ಎಂಬ ರಥವನ್ನು ಮುನ್ನಡೆಸಿಕೊಂಡು ಬರುವ ಕಾರ್ಯಕ್ಕೆ ಕಂಕಣ ಬದ್ಧರಾದರು.
ಪೂಜ್ಯ ವೃಷಭಲಿಂಗೇಶ್ವರ ಶ್ರೀಗಳು ಬಂಥನಾಳ ಪೀಠ ಅಲಂಕರಿಸುವಾಗ ಭಕ್ತರು ನಿರೀಕ್ಷೆಗಳು ನೂರಾರು ಇದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಪೂಜ್ಯರು ಸವಾಲಗಿ ಸ್ವೀಕರಿಸಿದರು. ಬಂಥನಾಳ,ಬೋಳೆಗಾಂವ, ಲಚ್ಯಾಣ, ಸೋಲಾಪುರ, ಕೃಷ್ಣಾ, ಪೂಣಾ ಮಠಗಳ ಉಸ್ತಾವಾರಿ ವಹಿಸಿಕೊಂಡರು. ಜತೆಗೆ ಲಿಂಗೈಕ್ಯ ಸಂಗನಬಸವ ಮಹಾಶಿವಯೋಗಿಗಳು ಕಟ್ಟಿದ ಮಠಗಳಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ಮುನ್ನಡೆಸಿಕೊಂಡು, ಅಪಾರ ಭಕ್ತ ಸಮೂಹವನ್ನು ಸಮಾಧಾನ ಪಡಿಸುವ ಮೂಲಕ ಶ್ರೀಮಠದ ಸಂಪ್ರದಾಯ ಎಂಬ ರಥವನ್ನು ಯಶಶ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಅಂದು ಬಂಥನಾಳದ ಲಿಂಗೈಕ್ಯ ಸಂಗನಬಸವ ಮಹಾಶಿವಯೋಗಿಗಳು ಬಡ ಮಕ್ಕಳ ಏಳಿಗೆಗಾಗಿ ಶೈಕ್ಷಣಿಕ ಕ್ರಾಂತಿಗೈದರೆ, ಇಂದು ಅವರ ಶಿಷ್ಯರಾದ ಬಂಥನಾಳದ ಶ್ರೀ ವೃಷಭಲಿಂಗೇಶ್ವರ ಶಿವಯೋಗಿಗಳು ಬಡ ಜನತೆಯ ಏಳಿಗೆಗಾಗಿ ಮಠದಲ್ಲಿ ಪ್ರತಿವರ್ಷ ಸರ್ವ ಧರ್ಮದ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯ ಕೈಕೊಂಡು ಶ್ರಮಿಸುತ್ತಿರುವದು ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಅದೆಷ್ಟೋ ಬಡ ಕುಟುಂಬದ ಜನರಲ್ಲಿ ಹೊಸ ಆಶಾ ಕಿರಣ, ಸಂತಸ ಮೂಡಿಸಿದೆ.