ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

0
Srirangapattana-Dasara

ಮಂಡ್ಯ: ಮೈಸೂರು ದಸರಾಕ್ಕಿಂತಲೂ ಪುರಾತನವಾದ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಆಚರಿಸುವ ಬದಲು ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಜಲಸಂಪನ್ಮೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಶ್ರೀರಂಗಪಟ್ಟಣ ದಸರಾ ಆಚರಣೆ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಈ ಬಾರಿ ಉತ್ಸವಕ್ಕೆ ವಿಶೇಷ ರೂಪ ನೀಡಲಾಗುವುದು ಎಂದರು.

ಅಕ್ಟೋಬರ್ 12 ಮತ್ತು 13ರಂದು ಯುವ ಸಂಭ್ರಮ ಹಾಗೂ ಅಕ್ಟೋಬರ್ 15ರಿಂದ 18ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ಯುವ ಸಂಭ್ರಮದಲ್ಲಿ ಸ್ಥಳೀಯ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಅವರನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ದಸರಾ ಆಚರಣೆಗೆ ₹5 ಕೋಟಿ ಅನುದಾನ ಕೋರಿ ಸಮಿತಿ ಮನವಿ ಸಲ್ಲಿಸಿದೆ. ಶಾಸಕರ ಸಲಹೆಗಳನ್ನು ಪರಿಗಣಿಸಿ ಮುಂದಿನ ಮೂರು ದಿನಗಳಲ್ಲಿ ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ನಾಡಿನ ಸಮಸ್ತ ಎಂಜಿನಿಯರ್‌ಗಳಿಗೆ ದಿನಾಚರಣೆಯ ಶುಭಾಶಯ ಕೋರಿದ ಸಚಿವರು, ಜಿಲ್ಲೆಯ ಅಭಿವೃದ್ಧಿ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆಯೂ ಸಭೆಯಲ್ಲಿ ಮಾಹಿತಿ ಹಂಚಿಕೊಂಡರು.

Leave a Reply

Your email address will not be published. Required fields are marked *