ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಸವಾಲ್: ‘ಧೈರ್ಯವಿದ್ದರೆ ಮುಖಾಮುಖಿ ಚರ್ಚೆಗೆ ಬನ್ನಿ’

ಬೆಂಗಳೂರು: ಕೆಪಿಎಸ್ಸಿ ಹಗರಣದ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಎನ್. ಚಲುವರಾಯಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಆರೋಪ-ಪ್ರತ್ಯಾರೋಪಗಳ ನಡುವೆ ಇದೀಗ ವೈಯಕ್ತಿಕ ವಿಚಾರಗಳೂ ಮುನ್ನೆಲೆಗೆ ಬಂದಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಕುಮಾರಸ್ವಾಮಿಗೆ ನೇರ ಚರ್ಚೆಗೆ ಬಹಿರಂಗ ಸವಾಲು ಹಾಕಿದ್ದಾರೆ. “ಧೈರ್ಯವಿದ್ದರೆ ವಿಧಾನಸೌಧದ 313 ಅಥವಾ 334ನೇ ಕೊಠಡಿಗೆ ಬನ್ನಿ. ಮಾಧ್ಯಮಗಳ ಎದುರೇ ಮುಖಾಮುಖಿ ಚರ್ಚೆ ಮಾಡೋಣ” ಎಂದು ಹೇಳಿದ್ದಾರೆ.
ಇದೇ ವೇಳೆ 2006ರ ರಾಜಕೀಯ ಬೆಳವಣಿಗೆಯನ್ನು ಪ್ರಸ್ತಾಪಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕಾಣೆಯಾಗಿದ್ದರು ಎಂದು ಆರೋಪಿಸಿದ್ದಾರೆ. ಆಗ ಅವರ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮಗೆ ಕರೆ ಮಾಡಿ ಕುಮಾರಸ್ವಾಮಿಯನ್ನು ಹುಡುಕಿ ವಿಧಾನಸೌಧಕ್ಕೆ ಕರೆತರುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.
“ಬೆಳಗ್ಗೆ 10 ಗಂಟೆಯೊಳಗೆ ಅವರನ್ನು ಪತ್ತೆಹಚ್ಚಿ ಕರೆತನ್ನಿ ಎಂದು ದೇವೇಗೌಡರು ಹೇಳಿದ್ದರು. ನಾನು ಬೆಳಗ್ಗೆ 5 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ” ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಅಂದು ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಈ ವಿಚಾರದಲ್ಲಿ ಕುಮಾರಸ್ವಾಮಿಯವರನ್ನೇ ಕೇಳಬೇಕು ಎಂದು ತಿಳಿಸಿರುವ ಚಲುವರಾಯಸ್ವಾಮಿ, ಕೆಪಿಎಸ್ಸಿ ಹಗರಣದ ಕುರಿತು ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳಿಗೆ ನೇರ ಚರ್ಚೆಯಲ್ಲೇ ಉತ್ತರಿಸಲು ಸಿದ್ಧ ಎಂದು ಹೇಳಿದ್ದಾರೆ.
