ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ

0
Raghaveshwar-Shree-Gokarna-Chaturmasa-1

ಕಾರವಾರ: ವಾಹನ ಚಲಿಸಲು ಇಂಧನ ಹಾಗೂ ನಿಯಂತ್ರಣ ಶಕ್ತಿ ಅಗತ್ಯವಿರುವಂತೆ, ದೇಹವೆಂಬ ವಾಹನ ಚಲಿಸಲು ಮನಸ್ಸು ಮತ್ತು ಓಜಸ್ಸು ಎಂಬ ಶಕ್ತಿಗಳು ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶನಿವಾರ ‘ಅನ್ನಂ ಬ್ರಹ್ಮ’ ಮಾಲಿಕೆಯ ಪ್ರವಚನ ನೀಡಿದ ಶ್ರೀಗಳು, ಮನಸ್ಸು ದೇಹದ ನಿಯಂತ್ರಣ ಶಕ್ತಿಯಾಗಿದ್ದು, ಅನ್ನದ ಸೂಕ್ಷ್ಮಾಂಶದಿಂದ ಮನಸ್ಸು ನಿರ್ಮಾಣವಾಗುತ್ತದೆ. ದೇಹದ ಶಕ್ತಿಯಾದ ಓಜಸ್ಸೂ ಆಹಾರದಿಂದಲೇ ಪೋಷಿಸಲ್ಪಡುತ್ತದೆ ಎಂದು ವಿವರಿಸಿದರು.

ಆತ್ಮಸಾಧನೆಯ ಉದ್ದೇಶದಿಂದ ಕೈಗೊಳ್ಳುವ ಉಪವಾಸದಿಂದ ಓಜಸ್ಸು ವೃದ್ಧಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ. ಆತ್ಮಸಾಧನೆಯೊಂದಿಗೆ ಉಪವಾಸ ಕೈಗೊಂಡಾಗ ಊಟವಿಲ್ಲದೆಯೂ ಜೀವಿಸಲು ಸಾಧ್ಯ ಎಂದು ತಿಳಿಸಿದರು.

ಹೃದಯದಲ್ಲಿರುವ ಓಜಸ್ಸು ಜೀವಿಯ ಅಳಿವು-ಉಳಿವಿಗೆ ಪ್ರಮುಖ ಕಾರಣವಾಗಿದೆ. ಮದ್ಯಪಾನ, ಅಸಮರ್ಪಕ ಆಹಾರ ಹಾಗೂ ಅತಿಯಾದ ವ್ಯಾಯಾಮದಿಂದ ಓಜಸ್ಸು ಕ್ಷೀಣಿಸುತ್ತದೆ. ಶುದ್ಧ ಗೋಘೃತ, ಗೋಕ್ಷೀರ, ಅರವತ್ತು ದಿನಗಳಲ್ಲಿ ಬೆಳೆಯುವ ಅಕ್ಕಿ, ಪಾರಂಪರಿಕ ಗೋಧಿ ಹಾಗೂ ಹೆಸರುಕಾಳು ಓಜಸ್ಸಿನ ವೃದ್ಧಿಗೆ ಸಹಕಾರಿ ಎಂದು ಹೇಳಿದರು.

ಪಾರಂಪರಿಕ ಬೆಳೆಗಳ ಸಂರಕ್ಷಣೆಗೆ ಕರೆ

ಜೀವನಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಇಂದಿನ ವ್ಯವಸ್ಥೆ ಕ್ರಮೇಣ ನಾಶ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಒಂದೆಡೆ ಗೋಸಂತತಿ ಕ್ಷೀಣಿಸುತ್ತಿದ್ದರೆ, ಮತ್ತೊಂದೆಡೆ ತಳಿ ಅಭಿವೃದ್ಧಿಯ ಹೆಸರಿನಲ್ಲಿ ಪಾರಂಪರಿಕ ಭತ್ತ ಹಾಗೂ ಆಹಾರ ಬೆಳೆಗಳ ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವಿನಾಶ್ ಭಟ್, ಕೇಂದ್ರ ಸಾಂಬಾರು ಮಂಡಳಿಯ ಪ್ರಸನ್ನ ಕೆರೆಕೈ, ಧಾರವಾಡ ಜಿಲ್ಲಾ ರೋಟರಿ ಗವರ್ನರ್ ಗಣೇಶ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಂಗಳೂರು ಹವ್ಯಕ ಮಂಡಲದ ವಿವಿಧ ವಲಯಗಳ ಪರವಾಗಿ ಮೂಡಂಬಿಕಾನ ಸುಬ್ರಹ್ಮಣ್ಯ ಭಟ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *