‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ

0
Gokarna-Chaturmasya-Raghaveshwar-shree

ಕಾರವಾರ: ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶುಕ್ರವಾರ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರವಚನ ಅನುಗ್ರಹಿಸಿದರು.

ಆಹಾರವು ರೂಪ, ಗುಣ ಮತ್ತು ರುಚಿಯಲ್ಲಿ ವಿಭಿನ್ನವಾಗಿದ್ದರೂ ಸಿಹಿ, ಹುಳಿ, ಖಾರ ಸೇರಿದಂತೆ ಷಡ್ರಸಗಳಿಂದ ಕೂಡಿದ ಆಹಾರಗಳು ಜೀವಿಗೆ ಆನಂದ ನೀಡುವುದು ಅದರ ಸಾಮಾನ್ಯ ಗುಣವಾಗಿದೆ. ಅನ್ನದಿಂದ ಸರ್ವೇಂದ್ರಿಯಗಳಿಗೂ ಸಂತೋಷ ದೊರೆಯುತ್ತದೆ. ಹೀಗಾಗಿ ಅನ್ನವನ್ನು ದೇವರೆಂದು ಗೌರವಿಸುವ ಪರಂಪರೆ ನಮ್ಮಲ್ಲಿದೆ ಎಂದು ಶ್ರೀಗಳು ಹೇಳಿದರು.

ಆಯುಷ್ಯ, ಶಕ್ತಿ, ವರ್ಣ, ಸ್ಮರಣೆ, ಸತ್ವ, ಓಜಸ್ಸು ಹಾಗೂ ಶೋಭೆಗೆ ಆಹಾರವೇ ಪ್ರಮುಖ ಕಾರಣ. ಹಸಿವು ಹೆಚ್ಚಾದಾಗ ಬುದ್ಧಿಯ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಸೂಕ್ತ ಆಹಾರ ಸೇವನೆಯಿಂದ ಬುದ್ಧಿ ಮತ್ತೆ ಚುರುಕಾಗುತ್ತದೆ ಎಂದು ಅವರು ವಿವರಿಸಿದರು.

ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಲಾದ ‘ಓಜಸ್ಸು’ ದೇಹದಲ್ಲಿರುವ ಅಮೃತದ್ರವದಂತಿದ್ದು, ರಸ, ರಕ್ತ ಸೇರಿದಂತೆ ಸಪ್ತಧಾತುಗಳ ಸಾರದಿಂದ ರೂಪುಗೊಳ್ಳುತ್ತದೆ. ಆಹಾರವು ದೇಹದ ಅಗ್ನಿಯನ್ನು ಕಾಪಾಡುವುದರ ಜತೆಗೆ ಓಜಸ್ಸನ್ನು ವೃದ್ಧಿಸುತ್ತದೆ. ಸರಿಯಾದ ಆಹಾರ ಮತ್ತು ಜೀವನಶೈಲಿಯಿಂದ ಓಜಸ್ಸನ್ನು ರಕ್ಷಿಸಿಕೊಳ್ಳಬಹುದು ಎಂದು ಶ್ರೀಗಳು ತಿಳಿಸಿದರು.

ಇದೇ ವೇಳೆ ಶ್ರೀರಾಮಚಂದ್ರಾಪುರಮಠಕ್ಕೆ ಶಿಷ್ಯಭಾವದಿಂದ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ಮರಾಠ ಸಮಾಜದ ವತಿಯಿಂದ ಸ್ವರ್ಣಪಾದುಕಾ ಪೂಜೆ ನೆರವೇರಿಸಲಾಯಿತು. ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಗುರುಪೀಠ ಮತ್ತು ಶಿಷ್ಯರು ಆಗಾಗ್ಗೆ ಸೇರುವುದರಿಂದ ಗುರು-ಶಿಷ್ಯ ಭಾವ ಮತ್ತಷ್ಟು ಗಟ್ಟಿಯಾಗುತ್ತದೆ. ಪಾದುಕಾ ಪೂಜೆಯ ಫಲವಾಗಿ ಮರಾಠ ಸಮಾಜದ ಕಷ್ಟ-ನಷ್ಟಗಳು ದೂರವಾಗಲಿ ಹಾಗೂ ಗುರುಪರಂಪರೆಯ ಅನುಗ್ರಹ ಸದಾ ಸಮಾಜದ ಮೇಲಿರಲಿ ಎಂದು ಆಶೀರ್ವದಿಸಿದರು.

ಮರಾಠ ಸಮಾಜದ ಜಿಲ್ಲಾ ಅಧ್ಯಕ್ಷ ಮಂಜುನಾಥ ತಿಮ್ಮ ಮರಾಠಿ, ಕುಮಟಾ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಶೇಡಿಗದ್ದೆ ಸೇರಿದಂತೆ ನೂರಾರು ಸಮಾಜದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಡಾ. ರಾಜಾರಾಮ ಮಡಿಕೇರಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು.

Leave a Reply

Your email address will not be published. Required fields are marked *