ಆಟಿಸಂಗೆ ಕಾಂಡಕೋಶ ಚಿಕಿತ್ಸೆ ನಿಷೇಧ: ಸುಪ್ರೀಂ ಕೋರ್ಟ್ ಆದೇಶಕ್ಕೆ ವೈದ್ಯರ ಸ್ವಾಗತ

0
DOCTORS1

ನವದೆಹಲಿ: ಆಟಿಸಂ ಚಿಕಿತ್ಸೆಗೆ ಕಾಂಡಕೋಶ ಚಿಕಿತ್ಸೆಯನ್ನು ಬಳಸುವುದರ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ನಿಷೇಧ ಆದೇಶವನ್ನು ವೈದ್ಯ ಸಮುದಾಯ ಸ್ವಾಗತಿಸಿದೆ. ಸಂವಹನ, ಸಾಮಾಜಿಕ ಸಂವಹನ ಹಾಗೂ ನಡವಳಿಕೆಗೆ ಪರಿಣಾಮ ಬೀರುವ ನರ-ಬೆಳವಣಿಗೆಯ ಸ್ಥಿತಿಯಾದ ಆಟಿಸಂಗೆ ಕಾಂಡಕೋಶ ಚಿಕಿತ್ಸೆ ವೈಜ್ಞಾನಿಕವಾಗಿ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನು ಒಳಗೊಂಡ ಪೀಠ, “ಕಾಂಡಕೋಶ ಚಿಕಿತ್ಸೆಗೆ ಪ್ರಸ್ತುತ ಯಾವುದೇ ದೃಢ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಪ್ರಾಯೋಗಿಕ ಪುರಾವೆಗಳಿಂದ ಬೆಂಬಲಿತವಾದ ಉತ್ತಮ ವೈದ್ಯಕೀಯ ಅಭ್ಯಾಸವೆಂದು ಗುರುತಿಸಲ್ಪಟ್ಟಿಲ್ಲ” ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ. ಅನುಮೋದಿತ ಕ್ಲಿನಿಕಲ್ ಪ್ರಯೋಗಗಳ ಹೊರತಾಗಿ ಕಾಂಡಕೋಶಗಳ ಬಳಕೆ ಅನೈತಿಕವಾಗಿದ್ದು, ಅದನ್ನು ದುಷ್ಕೃತ್ಯವೆಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ವೈಜ್ಞಾನಿಕ ಪುರಾವೆಗಳ ಕೊರತೆಯ ನಡುವೆಯೂ ಖಾಸಗಿ ಪ್ರಯೋಗಾಲಯಗಳು ಆಟಿಸಂಗೆ ಚಿಕಿತ್ಸೆ ನೀಡುವುದಾಗಿ ಜಾಹೀರಾತು ನೀಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ಕ್ರಮ ಅಗತ್ಯವಾಗಿತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ಏಮ್ಸ್‌ನ ನರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಂಜರಿ ತ್ರಿಪಾಠಿ, “ಆಟಿಸಂ ಮತ್ತು ಸೆರೆಬ್ರಲ್ ಪಾಲ್ಸಿಯಂತಹ ಅಸ್ವಸ್ಥತೆಗಳಿಗೆ ಕಾಂಡಕೋಶ ಚಿಕಿತ್ಸೆ ಎಂಬ ಹೆಸರಿನಲ್ಲಿ ರೂ.6ರಿಂದ 20 ಲಕ್ಷದವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಯಾವುದೇ ಸುಧಾರಣೆಯಾಗದೆ ಅನೇಕ ಕುಟುಂಬಗಳು ಹಣ ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಸರಿಯಾದ ಹಾಗೂ ಸಮಯೋಚಿತ ಕ್ರಮ” ಎಂದು ಹೇಳಿದರು.

Leave a Reply

Your email address will not be published. Required fields are marked *