ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದ ಕ್ರೌರ್ಯ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಢಾಕಾ: ಬಾಂಗ್ಲಾದೇಶದ ರಂಗ್ಪುರದಲ್ಲಿ ಬೀಗ ಹಾಕಿದ ಮನೆಯೊಳಗೆ ನಿವೃತ್ತ ಶಾಲಾ ಶಿಕ್ಷಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಹಿಂದೂಗಳ ಹತ್ಯೆ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಮೃತರನ್ನು ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಅಗಾಮಿ ಚಕ್ರವರ್ತಿ ಪ್ರಾರ್ಥಿ (23) ಹಾಗೂ ಪುತ್ರ ಪ್ರಿಯಂ ಚಕ್ರವರ್ತಿ (12) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಕುಟುಂಬದ ಇಬ್ಬರು ನೆರೆಹೊರೆಯವರಾದ ಸಿದ್ಧಾರ್ಥ ದಾಸ್ (19) ಮತ್ತು ಮುಗ್ಧಾ ದಾಸ್ (23) ಯಾಬಾ ಮಾದಕವಸ್ತು ಸೇವಿಸಲು ಮನೆಯ ಮೇಲ್ಛಾವಣಿಗೆ ತೆರಳಿದ್ದರು. ಶಬ್ದ ಕೇಳಿ ಅಲ್ಲಿಗೆ ಬಂದ ಗಣಪತಿ ಅವರನ್ನು ಗಮನಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಅವರನ್ನು ಹತ್ಯೆ ಮಾಡಿದ್ದಾರೆ.

ನಂತರ ವಿಷಯ ತಿಳಿಯಲು ಹೊರಬಂದ ಅವರ ಪುತ್ರಿ ಹಾಗೂ 12 ವರ್ಷದ ಪುತ್ರನನ್ನೂ ಆರೋಪಿಗಳು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಮುಖಗಳನ್ನು ದಹನಕಾರಿ ವಸ್ತುವಿನಿಂದ ಸುಟ್ಟು ಹಾಕಲಾಗಿತ್ತು.
ಹತ್ಯೆಯ ಬಳಿಕ ಆರೋಪಿಗಳು ಮನೆಯಲ್ಲೇ ರಾತ್ರಿ ಕಳೆದಿದ್ದು, ಸ್ನಾನ ಮಾಡಿ, ಆಹಾರ ಸೇವಿಸಿ ಅಲ್ಲಿದ್ದ ಮಾದಕವಸ್ತುಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಕಪಾಟು, ಡ್ರಾಯರ್ಗಳನ್ನು ತೆರೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಕುಟುಂಬದ ಚಿನ್ನಾಭರಣ ಹಾಗೂ ಎರಡು ಮೊಬೈಲ್ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಮೊಬೈಲ್ಗಳನ್ನು ಡಿಟರ್ಜೆಂಟ್ ಬೆರೆಸಿದ ನೀರಿನಲ್ಲಿ ಮುಳುಗಿಸಿ ನಾಶಪಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಅವರು ಹತ್ಯೆಯನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಿಂದ ದೊರೆತ ವಸ್ತುಗಳ ಆಧಾರದಲ್ಲಿ
ಡಿಎನ್ಎ ಪರೀಕ್ಷೆ ಸೇರಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
