ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

0
Mango

ಬೆಂಗಳೂರು, ಜು.3: ರಾಜ್ಯದಲ್ಲಿ ಮಾವು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಆಸರೆಯಾಗಿ ರಾಜ್ಯ ಸರ್ಕಾರ ₹101 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ವ್ಯತ್ಯಾಸ ಪಾವತಿಗಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನಿರ್ದೇಶನದಂತೆ, ಆವರ್ತ ನಿಧಿಯಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಣ ಬಿಡುಗಡೆ ಮಾಡಲು ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಈ ಕುರಿತು ಜಾರಿಗೊಂಡಿರುವ ಸರ್ಕಾರದ ಆದೇಶದಲ್ಲಿ, ಈ ಮೊತ್ತದ ಶೇ.50 ರಷ್ಟು ಹಣವನ್ನು ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ರಾಜ್ಯ–ಕೇಂದ್ರಗಳ ಶೇ.50–50 ಪಾಲುದಾರಿಕೆ

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯಗಳು ಶೇ.50–50 ಪಾಲು ಹೊಂದಿದ್ದು, ಈ ಬಗ್ಗೆ ಕಳೆದ ವಾರವೇ ಆದೇಶ ಹೊರಡಿಸಲಾಗಿತ್ತು. ರೈತರಿಗೆ ತಕ್ಷಣ ಪಾವತಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲು ರಾಜ್ಯವು ತನ್ನ ಪಾಲಾದ ₹101 ಕೋಟಿ ಬಿಡುಗಡೆಗೊಳಿಸಿದೆ.

ಉತ್ಪತ್ತಿ, ಬೆಲೆ, ಖರೀದಿ ಸ್ಥಿತಿ

2025–26ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದು, ಅಂದಾಜು 8 ರಿಂದ 10 ಲಕ್ಷ ಟನ್ ಉತ್ಪಾದನೆಯಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳು ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ.

ಈ ವರ್ಷ ಮಾರುಕಟ್ಟೆ ಬೆಲೆಗಳಲ್ಲಿ ತೀವ್ರ ಏರಿಳಿತ ಕಂಡುಬಂದಿದ್ದು, ಮೇ 2025ರಲ್ಲಿ ಮಾವಿನ ಮಾದರಿ ಬೆಲೆ ₹1,200 ರಿಂದ ₹2,500 ಕ್ವಿಂಟಾಲ್‌ಗೆ ಇತ್ತು. ಆದರೆ, ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ಮಾವು ₹450–₹550 ಮಟ್ಟಕ್ಕೆ ಕುಸಿಯಿತು.

ಖರ್ಚು ಲೆಕ್ಕಾಚಾರ

ಕೃಷಿ ಬೆಲೆ ಆಯೋಗವು ಮಾವಿನ A1 + FL ಕೃಷಿ ವೆಚ್ಚವನ್ನು ಕ್ವಿಂಟಾಲ್‌ಗೆ ₹3,460 ಮತ್ತು C3 ವೆಚ್ಚವನ್ನು ₹5,466 ಎಂದು ಶಿಫಾರಸು ಮಾಡಿದೆ. ಈ ಆಧಾರದ ಮೇಲೆ ಬೆಲೆ ವ್ಯತ್ಯಾಸ ಪಾವತಿಸಲು ಕೇಂದ್ರದ ಒಪ್ಪಿಗೆಯೊಂದಿಗೆ ರಾಜ್ಯ ಕ್ರಮ ಕೈಗೊಂಡಿದೆ.

ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮಾವು ಅಭಿವೃದ್ಧಿ ಮಂಡಳಿಯನ್ನು PDPS (Price Deficiency Payment Scheme) ಅನುಷ್ಠಾನಕ್ಕೆ ರಾಜ್ಯ ಮಟ್ಟದ ಅಂಶವಾಗಿ ಗುರುತಿಸಲಾಗಿದೆ. 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

Leave a Reply

Your email address will not be published. Required fields are marked *