ಧರ್ಮಸ್ಥಳದಲ್ಲಿ ‘ಸಿರಿ ಮಾತೃಶ್ರೀ’ ಕೈಗಾರಿಕಾ ಉದ್ಯಾನವನ ಉದ್ಘಾಟನೆ; ಗ್ರಾಮೀಣ ಸಬಲೀಕರಣಕ್ಕೆ ಉಪರಾಷ್ಟ್ರಪತಿ ಕರೆ

ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಿರ್ಮಿಸಲಾದ ‘ಸಿರಿ ಮಾತೃಶ್ರೀ ಕೈಗಾರಿಕಾ ಉದ್ಯಾನವನ’ವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶನಿವಾರ ಉದ್ಘಾಟಿಸಿದರು. ಮಹಿಳಾ ನೇತೃತ್ವದ ಸಾಮಾಜಿಕ ಪರಿವರ್ತನೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಈ ಯೋಜನೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಸ್ವಾವಲಂಬನೆ ಮತ್ತು ಗ್ರಾಮೀಣ ಸಬಲೀಕರಣ ಅತ್ಯಗತ್ಯ ಎಂದರು. ಸಿರಿಯಂತಹ ಸಂಸ್ಥೆಗಳು ಮಹಿಳೆಯರು ಹಾಗೂ ಗ್ರಾಮೀಣ ಕುಟುಂಬಗಳ ಜೀವನದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯವೆಂಬುದನ್ನು ತೋರಿಸಿವೆ ಎಂದು ಹೇಳಿದರು.

ಪ್ರಸ್ತುತ ಸಿರಿ ಸಂಸ್ಥೆ 3,000ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಹಾಗೂ 10,000ಕ್ಕೂ ಹೆಚ್ಚು ಮಂದಿಗೆ ಪರೋಕ್ಷವಾಗಿ ಜೀವನೋಪಾಯ ಒದಗಿಸುತ್ತಿದೆ. ಇದರ ಬಹುಪಾಲು ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಾಗಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಅವರ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದ ಉಪರಾಷ್ಟ್ರಪತಿ, ಮಹಿಳಾ ಸಬಲೀಕರಣ ಮತ್ತು ಸಮುದಾಯ ಕಲ್ಯಾಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದರು.
Vice President Shri C. P. Radhakrishnan visited and offered prayers at the Sri Kshetra Dharmasthala Manjunatha Swamy Temple in Dharmasthala, Karnataka, today. pic.twitter.com/G3dZ3V2XVa
— Vice-President of India (@VPIndia) May 31, 2026
ಹೊಸ ಕೈಗಾರಿಕಾ ಉದ್ಯಾನವನದಲ್ಲಿ ಮಹಿಳಾ ಉದ್ಯೋಗಿಗಳಿಗೆ ವಸತಿ, ಮಕ್ಕಳ ಆರೈಕೆ ಕೇಂದ್ರ, ಸಾರಿಗೆ, ನೈರ್ಮಲ್ಯ ಅಡುಗೆಮನೆ ಸೇರಿದಂತೆ ಹಲವು ಕಾರ್ಮಿಕ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಇದಕ್ಕೂ ಮುನ್ನ ಉಪರಾಷ್ಟ್ರಪತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅನ್ನಪೂರ್ಣ ಪ್ರಸಾದ ನಿಲಯದ ಸೇವಾ ಕಾರ್ಯಗಳನ್ನೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
