ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದ ಸಿಎಂ ಸಿದ್ದರಾಮಯ್ಯ, ಜನರಿಗೆ ಉತ್ತರ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

0
R.Ashok

ಬೆಂಗಳೂರು,: ಸಿಎಂ ಸಿದ್ದರಾಮಯ್ಯನವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದು ಹೇಳಿದ್ದು, ಈ ಕುರಿತು ಜನತೆಗೆ ಉತ್ತರ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದು ಹೇಳಿದ್ದು, ಈಗ ಅವರೇ ಹೋರಾಟಕ್ಕೆ ಸೇರಿದ್ದಾರೆ. ಕಾಂಗ್ರೆಸ್‌ ಪರವಾಗಿ ಅವರು ಹೇಗೆ ಹೋರಾಡುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್‌ ಮಾಡುತ್ತಿರುವ ಹೋರಾಟ ಸುಳ್ಳು ಎಂದು ಸಾಬೀತಾಗಿದೆ. ಬಿಜೆಪಿ ಮೇಲೆ ಮಾಡಿರುವ ಸುಳ್ಳು ಎಂದು ಸಾಬೀತಾಗಿದೆ. ಮತಗಳ್ಳತನ ಕಾಂಗ್ರೆಸ್‌ನ ಸಂಸ್ಕೃತಿಯಾಗಿದೆ ಎಂದು ತಿಳಿದುಬಂದಿದೆ. ಸಿ.ಎಂ.ಇಬ್ರಾಹಿಂ ಬಾದಾಮಿ ಕ್ಷೇತ್ರದಲ್ಲಿ ಮತ ಖರೀದಿಸಿದ್ದೇನೆಂದು ಹೇಳಿದ್ದಾರೆ. ಈ ಬಗ್ಗೆ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್‌ ಒಬ್ಬಂಟಿಯಾಗಿ ಬಿಹಾರ ಚುನಾವಣೆಗೆ ಹೋದರೆ, ಸಿಎಂ ಸಿದ್ದರಾಮಯ್ಯ ತಂಡ ಬೇರೆ ಕಡೆ ಚುನಾವಣೆಗೆ ಹೋಗಿದೆ. ಡಿ.ಕೆ.ಶಿವಕುಮಾರ್‌ ಬಂಡೆಯಂತೆ ಆಗುತ್ತಿದ್ದಾರೆ. ಇವರು ಚಾಮುಂಡಿ ಬೆಟ್ಟವನ್ನು ಹಿಂದೂಗಳ ಆಸ್ತಿಯಲ್ಲ ಎನ್ನುವುದಾದರೆ, ಈ ದೇವಸ್ಥಾನಕ್ಕೆ ಯಾವಾಗ ಮುಲ್ಲಾಗಳನ್ನು ಹಾಗೂ ಪಾದ್ರಿಗಳನ್ನು ನೇಮಿಸುತ್ತಾರೆ? ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಕಗ್ಗೊಲೆಯಾಗಿದೆ. ಅವರು ಯಾವಾಗಲೂ ಹಿಂದೂ ವಿರೋಧಿ ಎಂದರು.

ನಾವೇನೂ ಉದ್ಘಾಟನೆಗೆ ಕರೀರಿ ಎಂದು ಹೇಳಿಲ್ಲ, ಇದರಿಂದ ಹಿಂದೂಗಳನ್ನು ಎತ್ತಿ ಕಟ್ಟಿದಂತಾಗಿದೆ ಎಂದು ಮುಸ್ಲಿಮ್‌ ಮುಖಂಡರೇ ಹೇಳಿದ್ದಾರೆ. ಮೊದಲು ನಂದಿ ಧ್ವಜ ಹಾಗೂ ಗೋ ಪೂಜೆಯಾಗಬೇಕು. ಹಸು ತಿನ್ನುವ ಬಾನು ಮುಷ್ತಾಕ್‌ ಪೂಜೆ ಹೇಗೆ ಮಾಡುತ್ತಾರೆ? ಎಲ್ಲವೂ ಹಿಂದೂ ಶಾಸ್ತ್ರ ಪ್ರಕಾರ ನಡೆಯುತ್ತದೆ. ಹಿಂದೂ ಪಂಚಾಂಗದ ಪ್ರಕಾರ ದಿನಾಂಕ ನಿಗದಿಯಾಗುತ್ತದೆ. ಇಷ್ಟೆಲ್ಲ ಇದ್ದರೂ ಇದು ಹಿಂದೂಗಳದ್ದಲ್ಲ ಎನ್ನುತ್ತಾರೆ. ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಸಚಿವ ಜಮೀರ್‌ ಅಹ್ಮದ್‌ ಅವರು ಮೂರ್ತಿ ಪೂಜೆ ಬಗ್ಗೆ ಸ್ಪಷ್ಟನೆ ನೀಡಲಿ. ಈ ಕುರಿತು ಬಿಜೆಪಿಯಿಂದ ಹೋರಾಟ ರೂಪಿಸಲಾಗುತ್ತಿದೆ. ಚಾಮುಂಡೇಶ್ವರಿಯ ದೇವಾಲಯ ಉಳಿಸಿ ಎಂದು ಹೋರಾಟ ಮಾಡಲಾಗುವುದು. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲ. ಅದು ಹಿಂದೂಗಳ ಹಬ್ಬ. ನಾಡದೇವತೆಯನ್ನು, ನಾಡಹಬ್ಬವನ್ನು ಇವರು ವೋಟಿನ ಡಬ್ಬ ಮಾಡಿಕೊಂಡಿದ್ದಾರೆ ಎಂದರು.

ಸಂಸತ್ತನ್ನು ರಾಷ್ಟ್ರಪತಿಯಿಂದಲೇ ಉದ್ಘಾಟನೆ ಮಾಡಬೇಕೆಂದು ಕಾನೂನು ಇಲ್ಲ. ಉದ್ಘಾಟನಾ ಕಾರ್ಯಕ್ರಮ ಕೇಂದ್ರ ಸಂಪುಟಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಬುಡಕಟ್ಟು ಜನಾಂಗದವರನ್ನು ಬಿಜೆಪಿ ರಾಷ್ಟ್ರಪತಿಯಾಗಿ ಮಾಡಿದೆ. ಆದರೆ ಕಾಂಗ್ರೆಸ್‌ ಇಂತಹ ಕೆಲಸ ಮಾಡಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಉತ್ತರ ನೀಡಲಿ ಎಂದರು.

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ರಚನೆಯಾದಾಗಲೇ ಅದನ್ನು ವಿರೋಧಿಸಿದ್ದೆ. ಯಾರೋ ಬಂದು ನೂರು ಅತ್ಯಾಚಾರ-ಕೊಲೆಯಾಗಿದೆ ಎಂದು ಹೇಳಿಬಿಟ್ಟರೆ, ಅದಕ್ಕಾಗಿ ಎಸ್‌ಐಟಿ ರಚಿಸುವ ಸರ್ಕಾರಕ್ಕೆ ಕಾಮನ್‌ಸೆನ್ಸ್‌ ಇಲ್ಲ. ನೂರು ಕೊಲೆ-ಅತ್ಯಾಚಾರಗಳಾದರೆ ಅದನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಸರ್ಕಾರಕ್ಕೆ ಇಷ್ಟೂ ಗೊತ್ತಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

Leave a Reply

Your email address will not be published. Required fields are marked *