ಉಡುಪಿ: ಕೃಷ್ಣ ಮಠದ ಕನಕ ಗೋಪುರದ ಮುಂಭಾಗದಲ್ಲಿ ಕನಕ ಮಂದಿರ ನಿರ್ಮಾಣಕ್ಕೆ ನಿರ್ಧಾರ

ಉಡುಪಿ: ನೀ ಮಾಯೆಯೋ.. ನಿನ್ನೊಳು ಮಾಯೆಯೋ ಎಂದು ಹಾಡಿ ಹೊಗಳಿದ ಕನಕದಾಸರ ಜನ್ಮದಿನ ಇವತ್ತು. ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ಕನಕದಾಸರ ಜನ್ಮ ದಿನವನ್ನು ಉಡುಪಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕನಕದಾಸರ ಭಕ್ತರಿಗೆ ಈ ಬಾರಿಯ ಕನಕ ಜಯಂತಿ ಅವಿಸ್ಮರಣೀಯ. ಕೃಷ್ಣ ಮಠದ ಕನಕ ಗೋಪುರದ ಮುಂಭಾಗದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕನಕನ ದೇವಸ್ಥಾನವನ್ನು ನಿರ್ಮಾಣ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಪರ್ಯಾಯ ಕಾಣಿಯೂರು ಮಠಾಧೀಶರು 5 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದರು. ಪೇಜಾವರ ಮಠಾಧೀಶರ ನೇತೃತ್ವ ಮತ್ತು ಸರ್ಕಾರದ ವತಿಯಿಂದ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದೆ.
ಇದಕ್ಕೂ, ಮೊದಲು ಕನಕ ಸದ್ಭಾವನಾ ಜ್ಯೋತಿಯನ್ನು ವೈಭವದ ಮೆರವಣಿಗೆಯ ಮೂಲಕ ಕರೆತರಲಾಯಿತು. ಬೆಂಗಳೂರಿನಿಂದ ಹೊರಟ ಸದ್ಭಾವನಾ ಜ್ಯೋತಿಯನ್ನು ಉಡುಪಿಯಲ್ಲಿ ಸ್ವಾಗತಿಸಲಾಯಿತು. ಪರ್ಯಾಯ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕನಕ ಜ್ಯೋತಿಯನ್ನು ಬರಮಾಡಿಕೊಂಡರು. ಬೆಂಗಳೂರಿನ ಯೋಗೀಶ್ವರಾನಂದ ಸ್ವಾಮೀಜಿ ಮತ್ತು ಪರ್ಯಾಯ ಸ್ವಾಮೀಜಿ ಜೊತೆಯಾಗಿ ಕನಕದಾಸರ ಬೆಳ್ಳಿಕವಚ ಪುತ್ಥಳಿಗೆ ಪೂಜೆ ನೆರವೇರಿಸಿದರು. ಎರಡೂ ಸಮುದಾಯ ಜೊತೆಯಾಗಿ ಕನಕದಾಸರ ಜಯಂತಿ ಮಾಡುತ್ತಿದ್ದು, ಇದನ್ನೇ ಮುಂದುವರೆಸುವುದಾಗಿ ಹೇಳಿದರು.