ನೇಪಾಳ ಪ್ರವಾಹ: 1,125ಕ್ಕೂ ಹೆಚ್ಚು ಮಂದಿ ಬಲಿ, 4,858 ಜನರು ಇನ್ನೂ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಮುಂದುವರಿದಿದ್ದು, ಸಾವಿನ ಸಂಖ್ಯೆ 1,127ಕ್ಕೆ ಏರಿಕೆಯಾಗಿದೆ. ಇನ್ನೂ 4,858 ಮಂದಿ ನಾಪತ್ತೆಯಾಗಿದ್ದು, ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳ ಪೊಲೀಸರ ಪ್ರಕಾರ, ಚಿತ್ವಾನ್ನಲ್ಲಿ 348, ನವಲಪರಾಸಿ ಪೂರ್ವದಲ್ಲಿ 217, ನವಲಪರಾಸಿ ಪಶ್ಚಿಮದಲ್ಲಿ 190, ನುವಾಕೋಟ್ನಲ್ಲಿ 155, ಗೋರಖಾದಲ್ಲಿ 66, ಧಾದಿಂಗ್ನಲ್ಲಿ 59, ರಸುವಾದಲ್ಲಿ 45 ಹಾಗೂ ತನಹುನ್ನಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿಯೂ ಒಂಬತ್ತು ಮೃತದೇಹಗಳು ಪತ್ತೆಯಾಗಿವೆ.
ಪತ್ತೆಯಾದ ಮೃತದೇಹಗಳ ಪೈಕಿ 95 ಮಂದಿಯನ್ನು ಮಾತ್ರ ಗುರುತಿಸಲಾಗಿದ್ದು, ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಗುರುತು ಪತ್ತೆಯಾಗದ ಮೃತದೇಹಗಳ ಡಿಎನ್ಎ ಮಾದರಿ ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂರಕ್ಷಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಗುರುತು ಪತ್ತೆ ಮಾಡಲು ಇವು ನೆರವಾಗಲಿವೆ ಎಂದು ಪ್ರಧಾನಿ ಬಾಲೇಂದ್ರ ಶಾ ತಿಳಿಸಿದ್ದಾರೆ.
ರಕ್ಷಣಾ, ಪರಿಹಾರ ಹಾಗೂ ಪುನರ್ಸ್ಥಾಪನಾ ಕಾರ್ಯಾಚರಣೆಗಾಗಿ ಸುಮಾರು 7,912 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈವರೆಗೆ 6,541 ಮಂದಿಯನ್ನು ರಕ್ಷಿಸಲಾಗಿದೆ.
ಭೋಟೆ ಕೋಶಿ ನದಿಯ ಹಠಾತ್ ಪ್ರವಾಹದಿಂದ ಹಾನಿಗೊಳಗಾದ ಜಲವಿದ್ಯುತ್ ಯೋಜನೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಭಾರತ ಮತ್ತು ಚೀನಾ ವಿಶೇಷ ಸುರಂಗ ರಕ್ಷಣಾ ತಂಡಗಳನ್ನು ನೇಪಾಳ ಸೇನೆಗೆ ನೆರವಾಗಲು ಕಳುಹಿಸಿವೆ.
ಅಪಾಯಕಾರಿ ಭೂಗತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ತಾಂತ್ರಿಕ ತಜ್ಞರ ನೆರವು ಪಡೆಯಲಾಗುತ್ತಿದೆ. ಜೀವ ರಕ್ಷಣೆ, ನಾಪತ್ತೆಯಾದವರ ಪತ್ತೆ, ಬದುಕುಳಿದವರ ರಕ್ಷಣೆ ಹಾಗೂ ವಿದೇಶಿ ಪ್ರಜೆಗಳೂ ಸೇರಿದಂತೆ ಸಂತ್ರಸ್ತರಿಗೆ ತುರ್ತು ನೆರವು ನೀಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
