ಪರ್ಯಾಯಕ್ಕೆ ದೇವಳನಗರಿ ಉಡುಪಿ ಸಜ್ಜು; ಬಿಗಿಬಂದೋಬಸ್ತ್

ದೇವಳ ನಗರಿಯಲ್ಲಿ ಪರ್ಯಾಯಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ಜನವರಿ 17-18 ರಂದು ಪರ್ಯಾಯೋತ್ಸವ ನಡೆಯಲಿದ್ದು, ಇದಕ್ಕಾಗಿ ಉಡುಪಿಯಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ. ಕೃಷ್ಣಮಠ ಮತ್ತು ಪೇಜಾವರ ಮಠ ಸಿಂಗಾರಗೊಳ್ಳುತ್ತಿದ್ದು, ಹಿರಿಯ ಯತಿ ಪೇಜಾವರ ಶ್ರೀಗಳ ಪರ್ಯಾಯ ಮಹೋತ್ಸವವನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲು ಉಡುಪಿ ಸರ್ವ ರೀತಿಯಿಂದಲೂ ಸಜ್ಜುಗೊಳ್ಳುತ್ತಿದೆ.
ಪರ್ಯಾಯ ಮಹೋತ್ಸವಕ್ಕೆ ನಗರದ ಸೌಂದರ್ಯವೃದ್ಧಿ ಕಾರ್ಯಭರದಿಂದ ನಡೆಯುತ್ತಿದ್ದು, ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾರ್ಯ ಈಗಾಗಲೇ ಪೂರ್ಣಗೊಳ್ಳುತ್ತಾ ಬಂದಿದೆ.
ಪೇಜಾವರ ಶ್ರೀಗಳ ದಾಖಲೆಯ ಐದನೆಯ ಪರ್ಯಾಯ ಇದಾಗಿರುವುದು ವಿಶೇಷ.. ಪರ್ಯಾಯ ಪೂರ್ವಭಾವಿ ವಿಧಿಯಾದ ಪುರಪ್ರವೇಶ ಸಮಾರಂಭ ಈಗಾಗಲೇ ಮುಗಿದಿದ್ದು, ಇದೀಗ ಮಠಕ್ಕೆ ಹೊರೆಕಾಣಿಕೆ ನಾನಾ ಮೂಲೆಗಳಿಂದ ಹರಿದು ಬರುತ್ತಿದೆ. ಪರ್ಯಾಯದ ಅಂಗವಾಗಿ ಸಮಸ್ತ ಮುಸ್ಲಿಂ ಪರ್ಯಾಯ ಸಮಿತಿಯವರು ಕೃಷ್ಣಮಠಕ್ಕೆ ಹೊರೆ ಕಾಣಿಕೆ ಅರ್ಪಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ
ಉಡುಪಿಯ ಜೋಡುಕಟ್ಟೆಯಿಂದ ಮೆರವಣಿಗೆ ಮೂಲಕ ಹೊರೆ ಕಾಣಿಕೆಯನ್ನು ಸಮರ್ಪಿಸಿದರು. ಪರ್ಯಾಯ ಸ್ವಾಗತ ಸಮಿತಿ ಹೊರೆ ಕಾಣಿಕೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿತು.