ನ.10ರಂದು ಟಿಪ್ಪು ಜಯಂತಿ; ಹಿಂದೂ ಕಾರ್ಯಕರ್ತರ ಪ್ರತಿಭಟನೆ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಪ್ರತಿವರ್ಷ ನವೆಂಬರ್ 10ರಂದು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮುಂದಿನ ಮಂಗಳವಾರ ವಿಧಾನಸೌಧದಲ್ಲಿ ಮೊದಲ ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಮರುಲ್ ಇಸ್ಲಾಂ, ಮುಂದಿನ ಮಂಗಳವಾರ ವಿಧಾನಸೌಧದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಬಿ. ಶೇಕ್ ಅಲಿ, ಪ್ರೊ. ನರಸಿಂಹಯ್ಯ, ವಾಟಾಳ್ ನಾಗರಾಜ್, ತಲಕಾಡು ಚಿಕ್ಕರಂಗೇಗೌಡ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ನವಂಬರ್ 10ರಂದು ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲವು ವಿರೋಧಿಸಿ ಮೈಸೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಟಿಪ್ಪು ಸುಲ್ತಾನ್ ಹಿಂದೂ ಧರ್ಮದ ವಿರೋಧಿಯಾಗಿದ್ದ. ಆತನ ಆಳ್ವಿಕೆಯ ಕಾಲದಲ್ಲಿ ಸಾವಿರಾರು ಹಿಂದೂಗಳ ಹತ್ಯೆ ನಡೆದಿದೆ. ಇಂತಹ ಹಿಂದೂ ವಿರೋಧಿಯ ಜಯಂತಿ ಆಚರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ತನ್ನ ನಿಲುವನ್ನು ಬದಲಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ನಡುವೆ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿರುವ ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ, ಟಿಪ್ಪು ಸಲ್ತಾನ್ ಜಯಂತಿಯನ್ನು ಆಚರಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಟಿಪ್ಪು ದೇಶ ಪ್ರೇಮಿಯಲ್ಲ, ಚಿತ್ರದುರ್ಗದ ವೀರ ಮದಕರಿ ನಾಯಕನನ್ನು ಶ್ರೀರಂಗಪಟಣ್ಣದ ಸೆರೆಯಲ್ಲಿಟ್ಟು ಖಜಾನೆ ಲೂಟಿ ಹೊಡೆದಿದ್ದ. ಇಪ್ಪತ್ತು ಸಾವಿರ ಹಿಂದು ಯುವಕರನ್ನು ಮತಾಂತರಗೊಳಿಸಿದ್ದ, ಮಾತ್ರವಲ್ಲದೆ, ಉಚ್ಚಂಗಿ ದೇವಸ್ಥಾನದ ಎರಡು ಅಂತಸ್ತುಗಳನ್ನ ನಾಶಪಡಿಸಿ ಕಟ್ಟಡದ ಮೇಲೆ ಜಮ್ಮಾ ಮಸೀದಿ ಕಟ್ಟಿಸಿದ್ದನು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲೆ ಸಿಗುತ್ತದೆ ಎಂದು ಚಿದಾನಂದ ಮೂರ್ತಿ ಅವರು ಆರೋಪಿಸಿದರು.