ಹನಿಟ್ರ್ಯಾಪ್ಗೆ ಒಳಗಾದವರನ್ನು ಮೂರ್ಖರು ಎಂದ ದೇಶಪಾಂಡೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಕೋಲಾಹಲ ಸೃಷ್ಟಿಸಿದೆ. ಸುಮಾರು 48 ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರೆ, ಇನ್ನೊಂದೆಡೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ರಾಜ್ಯದಲ್ಲಿ ಕನಿಷ್ಠ 400 ಜನರನ್ನು ಹನಿಟ್ರ್ಯಾಪ್ಗೆ ಬಲಿ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ರಾಜಕೀಯ ನಾಯಕರಿಂದ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಈ ವಿಚಾರವು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಯಕರು ಆಗ್ರಹಿಸಿದ್ದಾರೆ.
ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ?
ಇದೇ ವೇಳೆ, ಹನಿಟ್ರ್ಯಾಪ್’ಗೆ ಒಳಗಾಗುವರ ವೀಕ್ನೆಸ್ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕೂಡಾ ಗಮನಸೆಳೆದಿದೆ. ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ? ಹನಿಟ್ರ್ಯಾಪ್ ಸುಮ್ಮನೆ ಆಗುತ್ತಾ? ನಾವು ಹಲೋ ಅಂದ್ರೆ ಅವರು ಹಲೋ ಅಂತಾರೆ, ನೀವು ಬಾಯ್ ಅಂದ್ರೆ ಅವರು ಬಾಯ್ ಅಂತಾರೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಹನಿಟ್ರ್ಯಾಪ್ ಅದವರ ವೀಕ್ನೆಸ್ ಬಗ್ಗೆ ಬೊಟ್ಟು ಮಾಡಿದ್ದಾರೆ.
ಹನಿಟ್ರ್ಯಾಪ್ಗೆ ಬಲಿಯಾದವರು ಮೂರ್ಖರು:
ಇನ್ನೊಂದೆಡೆ ಹನಿಟ್ರ್ಯಾಪ್ಗೆ ಬಲಿಯಾದವರನ್ನು ಮೂರ್ಖರು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಟೀಕಿಸಿದ್ದಾರೆ. ರಾಜಕೀಯದಲ್ಲಿರುವವರು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಮ್ಮೆ ಹತ್ಯೆಯಾದರೆ, ಆ ಸ್ಥಾನಮಾನವನ್ನು ಮರಳಿ ಪಡೆಯುವುದು ಕಷ್ಟಎಂದಿರುವ ದೇಶಪಾಂಡೆ, ಹನಿಟ್ರ್ಯಾಪ್ಗೆ ಬಲಿಯಾದವರೂ ಮೂರ್ಖರು ಎಂದು ಹೇಳಿದ್ದಾರೆ. ಹನಿಟ್ರ್ಯಾಪ್ನಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.