‘ಎಲ್ಲೆ ಮೀರಿ ಭಾಷೆ ಬಳಸಿ ಟೀಕೆ ಮಾಡುವ ಸಂಪ್ರದಾಯ ಕೈಬಿಡಿ’; ಬಿಜೆಪಿ ನಾಯಕರಿಗೆ ರಮೇಶ್ ಬಾಬು ಕಿವಿಮಾತು

ಬೆಂಗಳೂರು: ‘ಎಲ್ಲೆ ಮೀರಿ ಭಾಷೆ ಬಳಸಿ ಟೀಕೆ ಮಾಡುವ ಸಂಪ್ರದಾಯ ಕೈಬಿಡಿ’ ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಿವಿಮಾತು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಬಾಬು, ಯಾವುದೇ ಪಕ್ಷವಾದರೂ ಎಲ್ಲೆಯನ್ನು ಮೀರಿ ಭಾಷೆಯನ್ನು ಬಳಸಿ ಟೀಕೆ ಮಾಡುವ ಸಂಪ್ರದಾಯ ನಮ್ಮ ರಾಜ್ಯದಲ್ಲಿ ಇಲ್ಲ. ಆದರೆ ಕಳೆದ ಐದಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಟೀಕೆ ಮಾಡಿದರೆ ರಾತ್ರೋರಾತ್ರಿ ನಾಯಕರಾಗಬಹುದು ಎಂದು ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯನ್ನು ಕೇಶವ ಕೃಪಾ, ಬೈಠಕ್ ಹೀಗೆ ಎಲ್ಲಿ ನೀಡಲಾಗುತ್ತಿದೆ ಎಂದು ಸಂಘ- ಪರಿವಾರದವರೇ ಹೇಳಬೇಕು ಎಂದು ಪ್ರತಿಪಾದಿಸಿದರು.
ಸದಾ ವತ್ಸಲೇ ಮಾತೃಭೂಮಿ ಎಂದು ರಾಜಕೀಯ ಮಾಡುತ್ತಿದ್ದವರು ಈಗ ಸದಾ ಬೈಯುವುದೇ ರಾಜಕೀಯ ಎಂದುಕೊಂಡಿದ್ದಾರೆ. ಇದಲ್ಲೆ ಛಲವಾದಿ ನಾರಾಯಣಸ್ವಾಮಿ ಅವರೇ ಉದಾಹರಣೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುರ್ಬಲ ವಿರೋಧ ಪಕ್ಷ ಎಂದರೆ ಅದು ಬಿಜೆಪಿ. ಎರಡೂ ಮನೆಗಳಲ್ಲಿ ಅತ್ಯಂತ ಬೌದ್ದಿಕ ಹೀನರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್.ಅಶೋಕ್ ಅವರಿಗೆ ಪ್ರೆಸ್ ಮೀಟ್ ಮಾಡುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಜೊತೆಗೆ ಪದಬಳಕೆಯೂ ತಿಳಿದಿಲ್ಲ. ದಿನಬೆಳಗಾದರೆ ಆಡಳಿತ ಪಕ್ಷವನ್ನು ಬೈಯ್ಯುವುದು, ಮಾಧ್ಯಮ ಗೋಷ್ಟಿ ಮಾಡುವುದು ಇಷ್ಟಕ್ಕೆ ನಾಯಕ ಎಂದು ಕೊಂಡಿದ್ದಾರೆ. ಈ ಛಲವಾದಿ ನಾರಾಯಣಸ್ವಾಮಿ ಅವರು ಜನತಾ ಪರಿವಾರದಿಂದ ರಾಜಕೀಯ ಪ್ರಾರಂಭ ಮಾಡಿ ಜೀವರಾಜ ಆಳ್ವ ಅವರಿಂದ ರಾಜಕೀಯ ನೆಲೆ ಪಡೆದು. ಸೈಕಲ್ ನಾರಾಯಣ ಸ್ವಾಮಿ ಎಂದು ಪ್ರಸಿದ್ದರಾಗಿ. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಆಶ್ರಯ ಪಡೆದು, ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಅನುಕೂಲ ಪಡೆದು ಈಗ ಪಕ್ಷ ಹಾಗೂ ನಾಯಕರನ್ನು ಟೀಕೆ ಮಾಡುವ ವಿಶ್ವವಿಖ್ಯಾತ ರಾಜಕಾರಣಿ ಛಲವಾದಿ ನಾರಾಯಣಸ್ವಾಮಿ ಎಂದು ರಮೇಶ್ ಬಾಬು ದೂರಿದರು.
ಸಂಘ ಪರಿವಾರದವರು ವಾರಕ್ಕೊಮ್ಮೆ ಬೈಠಕ್ ಮಾಡಿ ಖರ್ಗೆ ಕುಟುಂಬದ ವಿರುದ್ದ, ಕಾಂಗ್ರೆಸ್ ವಿರುದ್ದ ಯಾವ ಪದ ಬಳಕೆ ಮಾಡಬೇಕು ಎಂದು ತರಬೇತಿ ನೀಡುತ್ತಿದ್ದಾರೆ. ಚಿತ್ತಾಪುರ ಸೇರಿದಂತೆ ಇತರೆಡೆ ಅವರು ಬಳಕೆ ಮಾಡಿರುವ ಪದವನ್ನು ಇಡೀ ರಾಜ್ಯ ನೋಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ನಾಯಕರನ್ನು ಸದಾ ಟೀಕೆ ಮಾಡಿ ಎಂದು ನಾಗಪುರದಿಂದ ನಿರ್ದೇಶನ ಬಂದಿರಬೇಕು ಎಂದುಕೊಂಡಿದ್ದೇನೆ. ಅರಗ ಜ್ಞಾನೇಂದ್ರ ಅವರು ಖರ್ಗೆ ಅವರ ಬಣ್ಣವನ್ನು ಇಟ್ಟುಕೊಂಡು ಹೀಯಾಳಿಸಿದ್ದರು. ಇವರಿಗೆ ಇನ್ನೂ ನಾಚಿಕೆ, ಮಾನ ಮರ್ಯಾದೆ ಬಂದಿಲ್ಲ. ಇಂದು ಮತ್ತೆ ಖರ್ಗೆ ಕುಟುಂಬದ ಮೇಲೆ ಮತ್ತೊಂದು ಪದ ಬಳಕೆ ಮಾಡಿದ್ದಾರೆ. ಅವರಿಗೆ ನಾವು ಹೆದರುವುದಿಲ್ಲ. ಜನರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ನಂಬಿದ್ದೇನೆ. ನಮ್ಮ ಪಕ್ಷ ನಿಮ್ಮನ್ನು ಹೆಸರಿಸುವ ಬೆದರಿಸುವ ಕೆಲಸ ಮಾಡುವುದಿಲ್ಲ. ನಮಗೆ ಇದು ಅವಶ್ಯಕತೆಯೂ ಇಲ್ಲ ಎಂದು ರಮೇಶ್ ಬಾಬು ಎದಿರೇಟು ನೀಡಿದರು.