ಘಟ್ಟ ಏರಿತಾ ಭೂತ..? ಬೆಂಗಳೂರಿಗೆ ಚಾಚಿದ ಕೋಲ..

ಕೈಯಲ್ಲಿ ಕತ್ತಿ ಹಿಡಿದು ಅಟ್ಟಿಸಿಕೊಂಡು ಹೋಗುತ್ತಿರುವ ಭೂತ ವೇಷಧಾರಿಗಳು. ಹತ್ತಿರ ಬರುತ್ತಲೇ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗುತ್ತಿರುವ ಭಕ್ತರು. ಘಟ್ಟ ಏರಿತಾ ಭೂತ..? ಬೆಂಗಳೂರಿಗೆ ಚಾಚಿದ ಕೋಲ..
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಗ್ರಾಮದಲ್ಲಿ ಆಚರಿಸುವ ಭೂತ ನೆರಿಗೆ ಹಬ್ಬದ ವೈಶಿಷ್ಟ್ಯತೆ. ಶ್ರೀಮನ್ನಾರಾಯಣನ ದ್ವಾರಪಾಲಕಾರದ ಜಯವಿಜಯರು ಶಾಪಗ್ರಸ್ತರಾಗಿ ಬಳಿಕ ಹಿರಣ್ಯ-ಕಶ್ಯಪರಾಗಿ ಜನ್ಮತಾಳಿದ ಪುರಾಣದ ಕಥೆ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ ತೂಬುಗೆರೆ ಗ್ರಾಮಸ್ಥರು ಇದೇ ಹಿರಣ್ಯ-ಕಶ್ಯಪರಿಗೆ ಇಟ್ಟಿರುವ ಹೆಸರು ಕೆಂಚಣ್ಣ ಹಾಗೂ ಕರಿಯಣ್ಣ ಭೂತಗಳು. ಈ ಭೂತಗಳಿಗಾಗಿ ಗ್ರಾಮಸ್ಥರು ಪ್ರತಿ ವರ್ಷ ಹಬ್ಬ ಆಚರಿಸುತ್ತಾರೆ.
ಭಕ್ತರ ನಂಬಿಕೆಯಂತೆ ಗ್ರಾಮದ ವೆಂಕಟನಾರಾಯಣ ದೇವಾಲಯದ ಅರ್ಚಕ ಭೂತ ವೇಷಧಾರಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅವರ ಮೇಲೆ ಭೂತಗಳನ್ನ ಆವಾಹಿಸುತ್ತಾನೆ. ಈ ವೇಳೆ ಭೂತಾವಾಹಿಸಿಕೊಂಡ ವ್ಯಕ್ತಿಗಳು ಇಡೀ ಗ್ರಾಮದ ತುಂಬೆಲ್ಲಾ ಸಂಚರಿಸುತ್ತಾರೆ. ಹೀಗೆ ಭೂತಗಳು ಸಂಚರಿಸುವುದರಿಂದ ಗ್ರಾಮದಲ್ಲಿರುವ ಇತರೆ ದುಷ್ಟಶಕ್ತಿಗಳು ದೂರವಾಗುತ್ತವಂತೆ. ಅಲ್ಲದೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ.
ಪ್ರತಿ ವರ್ಷ ಆಶಾಡ ಮಾಸದ ಏಕಾದಶಿಯ ನಂತರದ ದ್ವಾದಶಿಯಂದು ಭೂತನೆರಿಗೆ ಹಬ್ಬ ಆಚರಿಸಲಾಗುತ್ತದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ, ಮೈಸೂರು ಸೇರಿದಂತೆ ಹಲವು ಕಡೆಯಿಂದ ಭಕ್ತರು ಆಗಮಿಸುತ್ತಾರೆ.
ಗ್ರಾಮದ ಕೆಲವು ಮನೆಗಳಿಗೆ ವೇಷಧಾರಿಗಳು ನುಗ್ಗಿದಾಗ ಕೋಳಿಯನ್ನ ಕೆಂಚನ್ಣ-ರಿಯಣ್ಣನಿಗೆ ನೀಡಲಾಗುತ್ತೆ. ಅಟ್ಟಾಡಿಸಿಕೊಂಡು ಓಡುವಾಗ ಬಾಳೆ ರಸಾಯನ ವೇಷದಾರಿಗಳಿಗೆ ನೀಡದೆ ಹೋದರೆ ಸಿಕ್ಕ ಸಿಕ್ಕವರನ್ನ ಕಚ್ಚುತ್ತಾರೆ ಕರಿಯಣ್ಣ-ಕೆಂಚಣ್ಣ. ಗ್ರಾಮದ ಹೊರವಲಯದ ಆಂಜನೇಯ ಗುಡಿಯಿಂದ ವೆಂಕಟನಾರಾಯಣ ದೇವಾಲಯದವರೆಗೂ ಸಾಗುವ ಈ ಮೆರವಣಿಗೆ ಭಕ್ತರಿಗೆ ಮನರಂಜನೆಯನ್ನೂ ಕೊಡುತ್ತದೆ.
ಹಲವು ಶತಮಾನಗಳಿಂದ ಆಚರಿಸುತ್ತಾ ಬಂದಿರುವ ಭೂತನೆರಿಗೆ ಹಬ್ಬದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.