ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ನಿಮಗುಚಿತವೇ? ಡಿಕೆಶಿಗೆ ಸಿ.ಟಿ.ರವಿ ಪ್ರಶ್ನೆ

0
ct ravi

ಬೆಂಗಳೂರು: ಉಪಮುಖ್ಯಮಂತ್ರಿಯಾಗಿ ಎಲ್ಲರ ಪರವಾಗಿ ನ್ಯಾಯಾಧೀಶರಾಗಿರಬೇಕಿರುವ ಡಿ.ಕೆ.ಶಿವಕುಮಾರ್ ಅವರು ದುರದೃಷ್ಟವಾಶಾತ್ ಯಾರದ್ದೋ ವಕೀಲರಾಗಿಬಿಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಬಣ್ಣಿಸಿದ್ದಾರೆ. ಡಿಕೆಶಿ ಅಂದರೆ ‘ಡಿ (ಡ್ರಾಮ) ಕೆ (ಕಿಂಗ್) ಶಿವಕುಮಾರ್’ ಎಂದು ಸಿ.ಟಿ.ರವಿ ಲೇವಡಿ ವ್ಯಂಗ್ಯವಾಡಿದ್ದಾರೆ.

‘ನೀವು ಉಪಮುಖ್ಯಮಂತ್ರಿಗಳು ಎನ್ನುವುದನ್ನು ಮರೆತು ಬಿಟ್ಟಿದ್ದೀರಿ. ನೀವು ನ್ಯಾಯಾಧೀಶರ ಸ್ಥಾನದಲ್ಲಿ ಇದ್ದು, ಸತ್ಯಾಸತ್ಯತೆಯನ್ನು ವಿಚಾರ ಮಾಡಬೇಕಾದವರು ದುರದೃಷ್ಟವಾಶಾತ್ ಯಾರದ್ದೋ ವಕೀಲರಾಗಿಬಿಟ್ಟಿದ್ದೀರಿ. ಯಾರು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತದೆ. ಮೋಹಪರವಶರಾದವರಿಗೆ, ಅಧಿಕಾರದ ಮದದಿಂದ ಕೂಡಿದವರಿಗೆ, ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥ ಆಗಲಿಕ್ಕೆ ಸಾಧ್ಯವಿಲ್ಲ’ ಎಂದು ಸಿ.ಟಿ.ರವಿ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

ಸಭಾಪತಿಗಳ ರೂಲಿಂಗ್ ನೀಡಿದ ನಂತರ ನೀವುಗಳು, ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ನಿಮಗುಚಿತವೇ? ಗೂoಡಾಗಳನ್ನೂ, ಜೊತೆಗಾರರನ್ನು ಎತ್ತಿಕಟ್ಟಿ, ಶಾಸಕಾಂಗದ ದೇಗುಲವಾದ “ಸುವರ್ಣ ಸೌಧದಲ್ಲಿ” ನನ್ನ ಮೇಲೆ ನಡೆದ ಹಲ್ಲೆಯನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ? ಇದನ್ನು ಗಾಂಧಿಗಿರಿ ಎನ್ನಬೇಕೇ ಅಥವಾ ಗೂoಡಾಗಿರಿ ಎನ್ನಬೇಕೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸರ್ಕಾರದ ಪೊಲೀಸರು ಮಾಡಿದ ಅಸಂವಿಧಾನಿಕ, ಅನೈತಿಕ ಬಂಧನವನ್ನು ಏನೆಂದು ಭಾವಿಸುತ್ತೀರಿ? ಪೊಲೀಸರು ರಾತ್ರಿ ಇಡೀ ನಡೆಸಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ? ಯಾರ ಕಾಣದ ಕೈಗಳ ಪಾತ್ರವಿದೆ? ಇದನ್ನು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡಿ, ಸತ್ಯದರಿವು ನಿಮಗಾಗುತ್ತದೆ. ಕಪಟ ನಾಟಕ ಯಾರು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ ಎಂದಿರುವ ಸಿ.ಟಿ.ರವಿ, ಸಾರ್ವಜನಿಕ ಬದುಕಿನಲ್ಲಿ ಸಿ ಟಿ ರವಿಯನ್ನು ಹೋರಾಟಗಾರ ಎಂದು ಗುರುತಿಸಿದ್ದಾರೆ, ರವಿಯನ್ನು ಕೆಲಸಗಾರ ಎಂದು ಗುರುತಿಸಿದ್ದಾರೆ, ರವಿಯನ್ನ ಪಕ್ಷನಿಷ್ಠ, ಸಿದ್ಧಾಂತ ಬದ್ಧ ಎಂದು ಗುರುತಿಸುತ್ತಾರೆ ಎಂಬುದು ನನ್ನ ಕರ್ನಾಟಕದ ಜನತೆ ತಿಳಿದಿದೆ ಎಂದಿದ್ದಾರೆ.

“ಯದ್ಭಾವಂ ತದ್ಭವತಿ” ಎಂಬ ಮಾತಿನಂತೆ “ಯಾರು ಹೇಗಿದ್ದಾರೋ ಇತರರೂ ಹಾಗೆ ಎಂದು ಭಾವಿಸುತ್ತಾರೆ” ಸನ್ಮಾನ್ಯ “ಉಪಮುಖ್ಯಮಂತ್ರಿ” ಯವರೆ. ಅಂದಹಾಗೆ ಕಾಂಗ್ರಸ್ಸಿನ ಕೆಲ ನಾಯಕರು “ನಮ್ಮ ಡ್ರಾಮ(D) ಕಿಂಗ್ (K) ಶಿವಕುಮಾರ್ ಅವರು ಇಷ್ಟೆಲ್ಲಾ ಡ್ರಾಮಾ ಮಾಡುತ್ತಿರುವುದು ಮುಖ್ಯಮಂತ್ರಿ ಗಾದಿಯನ್ನು ಏರುವ ಹಪಹಪಿಗಾಗಿ” ಎಂದು ರಾಜಕೀಯದ ಮೊಗಸಾಲೆಗಳಲ್ಲಿ ಹೇಳಿಕೊಂಡು ಸುತ್ತುತ್ತಿರುವುದು ನಿಜವೇ? ಎಂದವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

You may have missed