ದಾವಣಗೆರೆ ಜಿಲ್ಲೆ ತೀರ್ಥಡಿ ಗ್ರಾಮದಲ್ಲಿ ಕೆಂಡಾರ್ಚನೆ

ಪ್ರತಿವರ್ಷ ನವರಾತ್ರಿ ಹಬ್ಬದ ವೇಳೆ ದಾವಣಗೆರೆ ಜಿಲ್ಲೆಯ ತೀರ್ಥಡಿ ಗ್ರಾಮದಲ್ಲಿ ಕೆಂಡಾರ್ಚನೆ ನಡೆಯುತ್ತೆ. ನವರಾತ್ರಿ ಕೊನೆ ದಿನ ಗ್ರಾಮದಲ್ಲಿ ಶ್ರೀಲಕ್ಷ್ಮಿ ರಂಗನಾಥ ಸ್ವಾಮಿ, ಹಿರಾಳ ಸ್ವಾಮಿ ಹಾಗೂ ನಟ್ಗಲ್ಲಮ್ಮ ದೇವಿ ಜಾತ್ರೆಯನ್ನು ವೈಭವದಿಂದ ಆಚರಿಸಲಾಗುತ್ತೆ. ದೇವರನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿ ಬಳಿಕ ಬನ್ನಿ ಪೂಜೆ ನೆರವೇರಿಸಲಾಗುತ್ತದೆ. ಇದಾದ ನಂತರ ನೆಟ್ಗಲ್ಲಮ್ಮ ದೇವಿಯ ಕೆಂಡಾರ್ಚನೆ ಮಾಡುವ ಮೂಲಕ ಹಬ್ಬಕ್ಕೆ ತೆರೆ ಬೀಳುತ್ತದೆ. ವಿಶೇಷ ಅಂದ್ರೆ ಪವಾಡದ ರೀತಿಯಲ್ಲಿ ಜನ ನಿಗಿ ನಿಗಿ ಕೆಂಡದ ಮೇಲೆ ಕುಣಿದಾಡಿ ಭಕ್ತಿ ಪ್ರದರ್ಶಿಸುತ್ತಾರೆ. ಈ ವೇಳೆ ಭಕ್ತರಿಗೆ ಯಾವುದೆ ಗಾಯವಾಗಲಿ ನೋವಾಗಲಿ ಉಂಟಾಗಲ್ಲ ಎಂಬುದು ಅಚ್ಚರಿಯ ವಿಚಾರ.
ತೀರ್ಥಡಿ ಗ್ರಾಮದಲ್ಲಿ ಇದೇ ದೊಡ್ಡ ದೇವರು, ಹೀಗಾಗಿ ಈ ದೇವರಿಗೆ ಸಾವಿರಾರು ಭಕ್ತರು ಇದ್ದಾರೆ. ಕೆಂಡಾರ್ಚನೆ ದಿನ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರ ದಂಡೇ ಹರಿದುಬರುತ್ತದೆ. ಈ ದೇವರು ಸಂಕಷ್ಟ ಎಂದು ಬಂದರೆ ಕೈಬಿಡುವುದಿಲ್ಲ ಎಂಬುದು ಭಕ್ತರ ನಂಬಿಕೆ. ವಿವಾಹ ಯೋಗ, ಸಂತಾನ ಯೋಗ, ಹಾಗೂ ಅನಾರೋಗ್ಯದಲ್ಲಿದ್ದವರಿಗೆ ಸಂಜೀವಿನಿ ಎನ್ನುತ್ತಾರೆ ಭಕ್ತರು.
ಇದು ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದ್ದು, ಚಿತ್ರದುರ್ಗದ ಪಾಳೇಗಾರರ ಆಡಳಿತದಲ್ಲಿತ್ತು.