ಚಿಕ್ಕಮಗಳೂರು: ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು..?

ಕಾಫಿಯ ನಾಡು ಚಿಕ್ಕಮಗಳೂರು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಜಿಲ್ಲೆ. ತುಂಗಾ, ಭದ್ರಾ, ನೇತ್ರಾವತಿ, ಹೇಮವತಿ, ಯಗಚಿ ಹೀಗೆ ಇಲ್ಲಿ ಹುಟ್ಟಿ ಹರಿಯುವ ನದಿಗಳೂ ಅನೇಕ.
ಆದರೆನಂತೆ ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು ಎನ್ನುವ ಸ್ಥಿತಿ ಇಲ್ಲಿಯದು. ಪ್ರತಿ ವರ್ಷ ಬೇಸಿಗೆ ಬಂತೆಂದರೆ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ದಾಹ ತಪ್ಪುತ್ತಿಲ್ಲ. ಈಗಾಗಲೇ 20 ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಪಡುವ ಸ್ಥಿತಿ ಎದುರಾಗಿದೆ.
ಕಳಸಾಪುರ, ಮಗಡಿ, ವಸ್ತಾರೆ, ಕುಂದೂರಿನಲ್ಲಿ ಸಮಸ್ಯೆ ಉಲ್ಬಣವಾಗಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ ಅಧಿಕವಾಗುತ್ತಿದ್ದು, ಮಳೆಯೂ ಕೈಕೊಟ್ಟಿದೆ. ಹೀಗಾಗಿ ಇದೇ ಸ್ಥಿತಿ ಮುಂದುವರಿದರೆ ಇನ್ನಷ್ಟು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕಾಗುತ್ತದೆ.
ಒಂದು ಮೂಲದ ಪ್ರಕಾರ ನೀರು ಸರಬರಾಜಿಗೆ 35 ಟ್ಯಾಂಕರ್ ಗಳು ಬೇಕಾಗಿದ್ದು, ದಿನ ಒಂದಕ್ಕೆ 40 ಸಾವಿರ ರೂ.ವೆಚ್ಚ ತಗಲುತ್ತದೆ. ಇನ್ನೂ ಪರ್ಯಾಯ ವ್ಯವಸ್ಥೆಗಾಗಿ 3 ಕೋಟಿ ರೂ. ಬೇಕಾಗುತ್ತದೆ. ಜಿಲ್ಲಾ ಪಂಚಾಯಿತಿಯ 1.50 ಕೋಟಿ ಹಣ ಬಳಸಿಕೊಂಡು 100 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಆದರೆ ಬಯಲು ಪ್ರದೇಶಕ್ಕೆ ನೀರುಣಿಸುವ ಮಳಲೂರು ಹಾಗೂ ಕರಗಡ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿರುವುದು ಈ ಭಾಗದ ಜನರಿಗೆ ಭಾರಿ ಹಿನ್ನಡೆಯಾಗಿದೆ…