ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಒಲಿದ ಅದೃಷ್ಟ; ಕಾಂಗ್ರೆಸ್ ಗೆ ಭಾರಿ ನಷ್ಟ

ಬೆಂಗಳೂರು: ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಬಹಿರಂಗಗೊಂಡಿದ್ದು ಕೇಸರಿ ಪಡೆ ವಿಜಯೋತ್ಸವ ಆಚರಿಸುತ್ತಿದೆ. ದೇವದುರ್ಗ ಕ್ಷೇತ್ರ ಕಾಂಗ್ರೆಸ್ ನ ಹಿಡಿತದಲ್ಲಿತ್ತು. ಕಳೆದ ಚುನಾವಣೆಯಲ್ಲಿ ಆ ಕ್ಷೇತ್ರದ ಜನ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ದೇವದುರ್ಗ ಬಿಜೆಪಿಯ ಹಿಡಿತಕ್ಕೆ ಸಿಕ್ಕಿದ್ದು, ಶಿವನಗೌಡ ನಾಯಕ್ 16 ಸಾವಿರದ 877 ಮತಗಳಿಂದ ಜಯಭೇರಿ ಬಾರಿಸಿದ್ದು, ಕಮಲ ಸೈನ್ಯದ ವಿಜಯೋತ್ಸವ ಮುಗಿಲೆತ್ತರ ರಾಚಿದೆ.
ಮಂಗಳವಾರ ನಡೆದ ಉಪಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು. ಕ್ಷಣಕ್ಷಣಕ್ಕೂ ಕುತೂಹಲ ಕೆರಳುವಂತ ಫಲಿತಾಂಶ ವ್ಯಕ್ತವಾಗಬಹುದು ಎಂದು ಜನ ನಿರೀಕ್ಷಿಸಿದ್ದರಾದರೂ ನಡೆದಿದ್ದೆ ಬೇರೆ. ಬೆಳಗ್ಗೆ 8 ಗಂಟೆಗೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅಂಚೆ ಮತಗಳನ್ನು ಪರಿಗಣಿಸಲಾಯಿತು. ಚಲಾವಣೆಯಾದ 12 ಅಂಚೆ ಮತಗಳಲ್ಲೇ ಬಿಜೆಪಿಗೆ ಬಹುಪಾಲು ಸಿಕ್ಕಿತ್ತು. ಕಾಂಗ್ರೆಸ್ ಗೆ ಒಲಿದದ್ದು, ಎರಡೇ ಮತಗಳು. ಮತ್ತೆ ಎರಡು ಮತಗಳು ಅಸಿಂಧುವಾದವು.
ಅನಂತರ ಮತಗಳ ಯಂತ್ರಗಳಲ್ಲಿ ಭದ್ರವಾಗಿದ್ದ ತೀರ್ಪನ್ನು ಅನಾವರಣ ಮಾಡುವ ಪ್ರಯತ್ನ ಸಾಗಿತ್ತು. 18 ಸುತ್ತುಗಳಲ್ಲಿ ಮತಗಳ ಎಣಿಕೆ ಸಾಗಿತು. ಅಚ್ಚರಿ ಎಂದರೆ ಕಾಂಗ್ರೆಸ್ ನ ಪ್ರಾಭಲ್ಯದ ಕ್ಷೇತ್ರ ಎಂದೇ ಕೈನಾಯಕರು ಹೇಳುತ್ತಿದ್ದ ಈ ಕ್ಷೇತ್ರದಲ್ಲಿ ಮೊದಲನೇ ಸುತ್ತಿನಿಂದಲೂ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಕಾಯ್ದುಕೊಂಡಿದ್ದರು. ಮೊದಲ ಸುತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಭಾರಿ ಅಂತರಗಳಿಂದ ಮುಂದಿದ್ದರು. ಐದನೇ ಸುತ್ತು ಕ್ರಮಿಸಿದಾಗಲಂತೂ ಗೆಲುವಿನ ಮುನ್ಸೂಚನೆ ವ್ಯಕ್ತವಾಯಿತು. ಆಗಲೇ ಮತಎಣಿಕಾ ಕೇಂದ್ರದಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಲಾರಂಭಿಸಿದರು. ಕಾರ್ಯಕರ್ತರು ಕೈಯಲ್ಲಿದ್ದ ಬಿಜೆಪಿ ಧ್ವಜಗಳು ರಾರಾಜಿಸಿದವು. ಕಾರ್ಯಕರ್ತ ಸಮೂಹ ನರ್ತಿಸುತ್ತಾ ಜೈಕಾರ ಹಾಕುತ್ತಾ ವಿಜಯೋತ್ಸವ ಸಂಭ್ರಮದಲ್ಲಿ ಬೀಗಿದರು.
ಮತಗಳ ಎಣಿಕೆ 10 ಸುತ್ತು ಕ್ರಮಿಸುತ್ತಿದ್ದಂತೆ ಬಿಜೆಪಿ ಹುರಿಯಾಳು ಶಿವನಗೌಡ ನಾಯಕ್ 40 ಸಾವಿರದ 447 ಮತಗಳನ್ನು ಪಡೆದು ಅಗ್ರ ಸ್ಥಾನದಲ್ಲಿ ಮಿಂಚಿದರು. ಆಗಿನ್ನೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಕರ್ ನಾಯಕ್ 31 ಸಾವಿರ 808 ಮತಗಳನ್ನಷ್ಟೇ ಪಡೆದಿದ್ದರು. ಜೆಡಿಎಸ್ ನ ಕರೆಮ್ಮಗೆ ಆವರೆಗೆ ಒಲಿದದ್ದು ಕೇವಲ 5 ಸಾವಿರದ 529 ಮತಗಳು. ಆಗಲೇ ಬಿಜೆಪಿ 9 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿದ್ದುದ್ದರಿಂದ ಗೆಲುವು ಶತಸಿದ್ದ ಎಂದು ವಿಶ್ಲೇಷಿಸಿದವರು ಅನೇಕರು.
ಈ ಅಂತರ 13 ನೇ ಸುತ್ತಿನ ಎಣಿಕೆ ಮುಗಿಯುವಷ್ಟರಲ್ಲಿ 12 ಸಾವಿರದ 338 ತಲುಪಿತು. ಆ ವೇಳೆ ಬಿಜೆಪಿಗೆ 52 ಸಾವಿರದ 862 ಮತಗಳು ಸಿಕ್ಕಿದರೆ, ಕಾಂಗ್ರೆಸ್ ಗೆ 40 ಸಾವಿರದ 424 ಮತಗಳು ಬಂದವು. ಜೆಡಿಎಸ್ ಸ್ಪಲ್ಪ ಚೇತರಿಸಿಕೊಂಡು 7 ಸಾವಿರದ ಗಡುವನ್ನು ದಾಟಿತು.
15 ನೇ ಸುತ್ತು ಕ್ರಮಿಸುವಷ್ಟರಲ್ಲಿ ಬಿಜೆಪಿ 61 ಸಾವಿರದ 399 ಮತಗಳನ್ನು ಪಡೆದು ತನ್ನ ಮುನ್ನಡೆಯ ಅಂತರವನ್ನು 14 ಸಾವಿರದ 556ಕ್ಕೆ ಹೆಚ್ಚಿಸಿಕೊಂಡಿತು. ಆ ವೇಳೆ ಕಾಂಗ್ರೆಸ್ ಗೆ ಸಿಕ್ಕಿರುವುದು 46 ಸಾವಿರದ 843 ಮತಗಳು.
ಅಂತಿಮ ಸುತ್ತು ಅಷ್ಟೊಂದು ನಿರ್ಣಾಯಕ ಅನಿಸಿಲ್ಲವಾದರೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ್ ಅವರ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದ್ದು ಆ ಪಕ್ಷದ ಕಾರ್ಯಕರ್ತರಿಂಗೆ ಸಿಹಿ ಸುದ್ದಿಯಾಗಿ ಮಾರ್ಪಟ್ಟಿತು.
ಅಂತಿಮ ಸುತ್ತಿನ ಮತಎಣಿಕೆ ಮುಗಿಯುವಷ್ಟರಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವಿನ ಸುದ್ದಿಯೇ ಸಿಕ್ಕಿತು. ಆದರೆ ಕಾಂಗ್ರೆಸ್ ಗೆ ಮಾತ್ರ ಮುಖಭಂಗದ ಅನುಭವವೇ ಆಯಿತು. ಅಂತಿಮವಾಗಿ ಬಿಜೆಪಿ ಹುರಿಯಾಳು ಶಿವನಗೌಡ ನಾಯಕ್ ಗೆ 72 ಸಾವಿರದ 665 ಮತಗಳು ಸಿಕ್ಕಿದರೆ, ಕಾಂಗ್ರೆಸ್ ನ ರಾಜಶೇಕರ್ ನಾಯಕ್ ಗೆ 55 ಸಾವಿರದ 767 ಮತಗಳು ಲಭಿಸಿವೆ. ಜೆಡಿಎಸ್ ನ ಕರೆಮ್ಮ 8 ಸಾವಿರದ 856 ಮತಗಳು ಚಲಾವಣೆಯಾಗಿವೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಸಾವಿರದ 708 ನೋಟ ಮತಗಳು ಚಲಾವಣೆಯಾಗಿವೆ.
ಶಿವನಗೌಡ ನಾಯಕ್ ಗೆಲುವು ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.