ಬಿಲ್ಲವಾಸ್ ಕತಾರ್’ನ ನೂತನ ಅಧ್ಯಕ್ಷರಾಗಿ ಅಪರ್ಣ ಶರತ್; ಸಂದೀಪ್ ಸಾಲಿಯಾನ್’ಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ

ಕತಾರ್: ಸಾಗರೋತ್ತರ ರಾಷ್ಟ್ರ ಕತಾರ್’ನ ಬಿಲ್ಲವ ಸಮುದಾಯದ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಬಿಲ್ಲವಾಸ್ ಕತಾರ್’ನ ಈವರೆಗೂ ಅಧ್ಯಕ್ಷರಾಗಿದ್ದ ಸಂದೀಪ್ ಸಾಲಿಯಾನ್’ಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಗಿದೆ. ಇದೇ ವೇಳೆ, ನೂತನ ಅಧ್ಯಕ್ಷರಾಗಿ ಅಪರ್ಣ ಶರತ್ ನೇಮಕವಾಗಿದ್ದಾರೆ.
ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ಕತಾರ್’ನ ಎಂ.ಆರ್.ಎ, ಸಲ್ವ ರೋಡ್, ಔತಣಕೂಟ ಹಾಲ್’ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಸಂದೀಪ್ ಸಾಲಿಯಾನ್ ಅವರನ್ನು ಅಭಿನಂಧಿಸಿದ ಅಪೂರ್ವ ಸನ್ನಿವೇಶ ಗಮನಸೆಳೆಯಿತು. ಸಮುದಾಯದ ಮುಖಂಡರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಿದ ಸಮಾರಂಭದಲ್ಲಿ ಸಂದೀಪ್ ಸಾಲಿಯಾನ್ ವಿನಯಪೂರ್ವಕವಾಗಿ ಬೀಳ್ಕೊಡಲಾಯಿತು.
ಉದ್ಯೋಗ ನಿಮಿತ್ತ ನೆರೆಯ ಕೊಲ್ಲಿ ರಾಷ್ಟ್ರಕ್ಕೆ ವರ್ಗಾವಣೆಗೊಂಡ ಅನಿವಾರ್ಯತೆ ಹಿನ್ನೆಲೆಯಲ್ಲಿ ಬಿಲ್ಲವಾಸ್ ಕತಾರ್’ನ ಜವಾಬ್ಧಾರಿಯಿಂದ ಬಿಡುಗೊಂಡಿರುವುದಾಗಿ ಹೇಳಿದ ಸಂದೀಪ್ ಸಾಲಿಯಾನ್, ಈ ವರೆಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಂದೀಪ್ ಸಾಲಿಯಾನ್ ನಿರ್ಗಮದ ಹಿನ್ನೆಲೆಯಲ್ಲಿ ತೆರವಾಗಿರುವ ಬಿಲ್ಲವಾಸ್ ಕತಾರ್’ನ ಅಧ್ಯಕ್ಷ ಸ್ಥಾನವನ್ನು ಸಂಘದ ಉಪಾಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ವಹಿಸಿಕೊಳ್ಳಲಿದ್ದಾರೆ ಎಂದು ಸಮಾರಂಭದಲ್ಲಿ ಘೋಷಿಸಲಾಯಿತು.
ಇದೇ ವೇಳೆ, ಸರಳ ಸಜ್ಜನಿಕೆಯ, ನಿರಾಡಂಬರ, ಮೃದು ಸ್ವಭಾವದ ಸಂದೀಪ್ ಸಾಲಿಯಾನ್ ಅವರ ಕತಾರ್’ನ ಜೀವನ ಚರಿತ್ರೆಯನ್ನು ಕಿರು ನಾಟಕ ರೂಪದಲ್ಲಿ ಪ್ರದಶಿಸಿದ ಕಾರ್ಯಕ್ರ್ರಮವೂ ಕುತೂಹಲದ ಕೇಂದ್ರಬಿಂದುವಾಯಿತು. ಪೂಜಾ ಜಿತಿನ್ ನಿರ್ದೇಶನಲ್ಲಿ ಮಂಜು ಮತ್ತು ತಂಡದವರು ಈ ಕಿರು ನಾಟಕವನ್ನು ನಡೆಸಿಕೊಟ್ಟರು.
ಬಿಲ್ಲವಾಸ್ ಕತಾರ್ ನ ಸಾಂಸ್ಕ್ರತಿಕ ಕಾರ್ಯದರ್ಶಿ ಪೂಜಾ ಜಿತಿನ್, ಐ.ಸಿ.ಸಿ. ಕತಾರ್’ನ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ಬಿಲ್ಲವಾಸ್ ಕತಾರ್ ಮಾಜಿ ಅಧ್ಯಕ್ಷ ರಘುನಾಥ್ ಅಂಚನ್, ಮಾಜಿ ಉಪಾಧ್ಯಕ್ಷ ಅಮಿತ್, ಶ್ವೇತಮೊದಲಾದ ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿದ್ದರು.