ಆಳ್ವಾಸ್ ನುಡಿಸಿರಿಗೆ ಅದ್ದೂರಿ ತೆರೆ ; ಇದೀಗ ವಿರಾಸತ್ ನತ್ತ ಚಿತ್ತ

ಮಂಗಳೂರಿನ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ 12ನೇ ಆಳ್ವಾಸ್ ನುಡಿಸಿರಿ ಅದ್ದೂರಿ ತೆರೆ ಕಂಡಿದೆ. ಈ ನುಡಿಸಿರಿ ನಾಲ್ಕು ದಿನಗಳ ಕಾಲ ಸಾಹಿತ್ಯಾಸಕ್ತರಿಗೆ ರಸದೌತಣ ಉಣ ಬಡಿಸಿತು. ಈ ನುಡಿ ಸುಗ್ಗಿ ಮಹಾಸಾರಾಸ್ವತ ಜಾತ್ರೆಗೆ ಸಾಕ್ಷಿಯಾಯಿತು.
ನಾಲ್ಕು ದಿನಗಳ ಕಾಲ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಕರ್ನಾಟಕ ಹೊಸತನದ ಹುಡುಕಾಟ ಎಂಬ ಪರಿಕಲ್ಪನೆಯಲ್ಲಿ ಸಾಹಿತ್ಯ ಗೋಷ್ಠಿಗಳು, ವಿಚಾರ ಮಂಥನಗಳು ನಡೆದಿದ್ದು, ಆರು ವೇದಿಕೆಗಳಲ್ಲಿ ಏಕಕಾಲಕ್ಕೆ ನಡೆದ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿದವು.
ಪುಸ್ತಕ ಪ್ರದರ್ಶನ, ಹಾಡು ಕಟ್ಟುವುದು, ಜನಪದ ಕುಣಿತ ಸೇರಿದಂತೆ ವೈವಿಧ್ಯಮಯ ಜಾನಪದ ಸಂಸ್ಕೃತಿ ಮೆಚ್ಚುಗೆಗೆ ಪಾತ್ರವಾಯಿತು.
ಲಕ್ಷಕ್ಕೂ ಹೆಚ್ಚು ಮಂದಿಗೆ ಆಳ್ವಾಸ್ ಆವರಣದಲ್ಲಿ ಊಟ-ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿದ ಮೋಹನ್ ಆಳ್ವ ಅವರ ಸಾಹಿತ್ಯ ಕೃಷಿಯೂ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಅಂತಿಮ ದಿನದಂದು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 10 ಮಂದಿ ಗಣ್ಯರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯ, ಡಾ.ಸುಮತೀಂದ್ರ ನಾಡಿಗ್, ಡಾ.ಬಿ.ಎಸ್.ಸುಮೀತ್ರಾ ಬಾಯಿ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ವಿದ್ವಾನ್ ಡಾ. ಆರ್.ಕೆ.ಪದ್ಮನಾಭ, ಈಶ್ವರ ದೈತೋಟ, ಭಾಗವತಿಕೆ ಲೀಲಾವತಿ ಬೈಪಡಿತ್ತಾಯ, ವರ್ತೂರು ನಾರಾಯಣ ರೆಡ್ಡಿ , ಶಿಲ್ಪಿ ಹೊನ್ನಪ್ಪಚಾರ್ ಮತ್ತು ಸೈಯದ್ ಸಲಾವುದ್ದೀನ್ ಪಾಷಾ ಅವರಿಗೆ ನುಡಿಸಿರಿಯ ಪ್ರಶಸ್ತಿ ಪುರಸ್ಕಾರ ಮಾಡಿ ಅಭಿನಂದಿಸಲಾಯಿತು….
ಯ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಸಮ್ಮೇಳನಾಧ್ಯಕ್ಷ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಆಳ್ವಾಸ್ ನುಡಿಸಿರಿ ಅಚ್ಚುಕಟ್ಟಾಗಿ ನಡೆದಿದ್ದು, ಇದು ಕಂಪು ನಿರಂತರವಾಗಿ ಸೂಸಲಿ, ವಿದ್ಯಾರ್ಥಿ ಸಿರಿ, ಸಾಹಿತ್ಯ ಸಿರಿಗಿಂತಲೂ ಡಾ.ಮೋಹನ್ ಆಳ್ವ ಅವರ ಸೌಜನ್ಯ ಸಿರಿಯಂತೂ ಎಲ್ಲರ ಮನದಾಳದ ಪ್ರೀತಿಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ನಾಲ್ಕು ದಿನಗಳ ಕಾಲ ನಡೆದ ನುಡಿಸಿರಿಗೆ ಎಲ್ಲಾ ಸಾಹಿತ್ಯ ಪ್ರಿಯರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು ಎಂದು ಡಾ.ಮೋಹನ್ ಆಳ್ವ ಕೃತಜ್ಞತೆ ಸಲ್ಲಿಸಿದರು.