ಅನಂತರಾಮರು ‘ಬಂಗಾಡಿ’ಯೇ? ಭಂಡಾರಿಯೇ? – ವಿಶೇಷ ಸಂದರ್ಶನ

‘ಅನಂತರಾಮ ಬಂಗಾಡಿ’ ಹೆಸರನ್ನು ಕೇಳದವರಿಲ್ಲ. ಕನ್ನಡ, ತುಳು ಸಂಸ್ಕೃತಿ ವಿಚಾರದಲ್ಲಿ ಅನಂತರಾಮ ಬಂಗಾಡಿಯವರ ಹೆಸರು ಮೊದಲನೆಯ ಪಂಕ್ತಿಯಲ್ಲಿ ಇದೆ. ತುಳುನಾಡಿನ ಗಂಡುಕಲೆ ಯಕ್ಷಗಾನದಲ್ಲಿ ಖ್ಯಾತ ಪ್ರಸಂಗಕರ್ತರಾಗಿರುವ ಅನಂತರಾಮ ಬಂಗಾಡಿಯವರು ತುಳು ಕಲೆ-ಸಂಸ್ಕೃತಿಯ ಜೀವಾಳವಾಗಿದ್ದಾರೆ. ನೂರಾರು ಯಕ್ಷಗಾನ ಪ್ರಸಂಗಗಳನ್ನು ಬರೆದಿರುವ ಅನಂತರಾಮ ಬಂಗಾಡಿಯವರಿಗೆ ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ವತಿಯಿಂದ ‘ಯಕ್ಷದೇವ ಪುರಸ್ಕಾರ’ ನೀಡಲಾಯಿತು. ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ಅಸ್ತಿತ್ವಗೊಂಡು ಇಪ್ಪತ್ತೊಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಇತ್ತೀಚಿಗೆ ನಡೆದ 3 ದಿನಗಳ ಯಕ್ಷಗಾನ ಸ್ಪರ್ಧೆಯ ಕೊನೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅನಂತರಾಮ ಬಂಗಾಡಿಯವರು ಪತ್ರಕರ್ತರ ಜೊತೆ ವಿಚಾರ ವಿನಿಮಯ ಮಾಡಿದರು. ಆ ಸಂದರ್ಭದಲ್ಲಿ ನಾನು ಅವರಲ್ಲಿ ಸಂದರ್ಶನ ಬೇಕು ಎಂದು ಹಪಹಪಿಸಿದಾಗ ಅವರು ನನ್ನನ್ನು ಅಪ್ಪಿಕೊಂಡು ಮಾತನಾಡಿಸಿದಾಗ ಎಂದಿಲ್ಲದ ಖುಷಿ ಆಯಿತು. ಕಾರ್ಯಕ್ರಮ ಸಂಘಟಕರ ಕೊಠಡಿಗೆ ನನ್ನನ್ನು ಕರೆದೊಯ್ದು ಕಾಫಿ ಕುಡಿಯುತ್ತಾ ಕೆಲವು ವಿಚಾರಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.
ಪ್ರಶ್ನೆ: ನಿಮಗೆ ಯಕ್ಷಗಾನವೇ ಪ್ರಪಂಚ, ಅದರಲ್ಲಿ ಈ ಪ್ರಶಸ್ತಿಗಳಿಗೆ ಮಹತ್ವನಾ?
ಬಂಗಾಡಿ: ಯಕ್ಷಗಾನವೇ ಪ್ರಪಂಚ ಹೌದು. ಆದರೆ ಪ್ರಶಸ್ತಿಗಾಗಿ ನಾನು ಪ್ರಸಂಗಗಳನ್ನು ಬರೆದಿಲ್ಲ. ಕಲಾರಾಧನೆಯಾಗಿ ಪ್ರಸಂಗಗಳನ್ನು ಬರೆದಿದ್ದೇನೆ. ಸಾಮಾಜಿಕ ವಿಚಾರಗಳನ್ನು ಯಕ್ಷಗಾನದಲ್ಲಿ ತೋರಿಸುವುದರಲ್ಲಿ ಸಿಗುವ ಆನಂದ ಪ್ರಶಸ್ತಿಗಳಲ್ಲಿ ಸಿಗಲ್ಲ.
ಪ್ರಶ್ನೆ: ಯಕ್ಷಗಾನಕ್ಕೆ ಸರ್ಕಾರದಿಂದ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ನಿಮ್ಮ ವಾದವಾಗಿತ್ತು. ಈಗ ಅಭಿಪ್ರಾಯವೇನು?
ಬಂಗಾಡಿ: ಸರ್ಕಾರದಿಂದ ಯಕ್ಷಗಾನಕ್ಕೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದು ನಿಜ. ಈಗಿನ ಎಲ್ಲಾ ಮೇಳಗಳು ನಷ್ಟದಲ್ಲಿದ್ದರೂ ದೇವಾಲಯಗಳ ಪ್ರೋತ್ಸಾಹದಿಂದ ನಡೆಯುತ್ತಿದೆ. ಈಗಿನ ಪರಿಸ್ಥಿತಿಯನ್ನು ನೋಡಿದಾಗ ದೇವರ ಕೃಪೆ ಇದ್ದರೆ ಮಾತ್ರ ಯಕ್ಷಗಾನ ಉಳಿಯಬಹುದು ಎಂಬಂತೆ ಕಾಣುತ್ತದೆ.
ಪ್ರಶ್ನೆ: ನೀವು ಜ್ಯೋತಿಷಿಯೂ ಹೌದು. ಬ್ರಾಹ್ಮಣರಲ್ಲದ ನೀವು ಹೇಗೆ ಜ್ಯೋತಿಷಿಯಾದಿರಿ?
ಬಂಗಾಡಿ: ಬ್ರಾಹ್ಮಣರಲ್ಲದವರು ಜ್ಯೋತಿಷಿಯಾಗಬಾರದೆಂಬ ನಿಯಮ ಎಲ್ಲೂ ಇಲ್ಲ. ನಮ್ಮದು ಹಿಂದೆ ಪೌರೋಹಿತ್ಯ ಮಾಡುತ್ತಿದ್ದ ಕುಲವಾಗಿದೆ. ದೇವಸ್ಥಾನಗಳ ಭಂಡಾರ ಕಾಯುವ ಜೊತೆಗೆ ಪೂಜೆಯನ್ನೂ, ವಿಧ್ವತ್ತನ್ನೂ ನಮ್ಮ ಜಾತಿಯವರು ಕಲಿಯುತ್ತಿದ್ದರು. ಆಯುರ್ವೇದ ಪಂಡಿತರಾಗಿ, ಕುಲ ಪುರೋಹಿತರಾಗಿ, ಜ್ಯೋತಿಷಿಗಳಾಗಿ ಅನೇಕ ಕುಟುಂಬಗಳು ನಮ್ಮ ಭಂಡಾರಿ ಸಮಾಜದಲ್ಲಿತ್ತು. ಹಲವಾರು ದಶಕಗಳ ಹಿಂದೆ ದೇವಸ್ಥಾನಗಳ ವಿಗ್ರಹಗಳನ್ನು ಭಂಡಾರಿ ಮನೆಯಲ್ಲಿ ಇಡಲಾಗುತ್ತಿತ್ತು. ಅರ್ಚಕರಿಗೆ ಸ್ಥಾನಿಕ ಪೌರೋಹಿತ್ಯದಲ್ಲಿ ಭಂಡಾರಿಗಳು ಸಹಾಯಕರಾಗಿರುತ್ತಿದ್ದರು. ಈಗಲೂ ಅನೇಕರು ಈ ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ನಾನು ಕೂಡಾ ನಮ್ಮ ಹಿರಿಯರ ಆಚರಣೆಯನ್ನೇ ಅನುಸರಿಸಿ ಪೂಜೆ-ಪುನಸ್ಕಾರ ನೆರವೇರಿಸುತ್ತಿದ್ದೇನೆ. ಆದರೂ ಬ್ರಹ್ಮ ಜ್ಞಾನ ಅಪೇಕ್ಷಿತನಿಗೆ ದೇವರ ಕೃಪೆ ಸದಾ ಇರುತ್ತದೆ. ಜ್ಯೋತಿಷ್ಯ ಕಲಿಯುವ ಅಸೆ ಇದ್ದು ಅನುಷ್ಠಾನದ ಜೊತೆ ಪರಿಶ್ರಮ ಇದ್ದರೆ ಸಿದ್ಧಿಯು ಪ್ರಾಪ್ತವಾಗತ್ತದೆ.
ಪ್ರಶ್ನೆ: ಹಾಗಾದರೆ ನೀವು ‘ಬಂಗಾಡಿಯೇ? ಅಥವಾ ಭಂಡಾರಿಯೇ?’
ಬಂಗಾಡಿ: ನಾನು ಬದುಕಿ ಬಾಳುತ್ತಿರುವ ಸ್ಥಳ ಬಂಗಾಡಿ. ಜಾತಿಯಲ್ಲಿ ಭಂಡಾರಿ.
ಪ್ರಶ್ನೆ: ಕರಾವಳಿ ಜಿಲ್ಲೆಗಳಲ್ಲಿ ಭಂಡಾರಿ ಸಮುದಾಯದ ಕುಲ ಕಸುಬು ಬಗ್ಗೆ ಜಿಜ್ಞಾಸೆ ಇದೆಯಲ್ಲವೇ?
ಪ್ರಶ್ನೆ: ಕರಾವಳಿಯ ಬಹುಭಾಗ ತುಳುನಾಡು ಆಗಿದ್ದು, ಬೇರೆ ಬೇರೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಾಣುತ್ತೇವೆ. ‘ಭಂಡಾರಿ’ ಎಂಬುದು ಒಂದು ಜಾತಿಯ ಹೆಸರಾಗಿದ್ದರೂ ಕೊಂಕಣಿ ಹಾಗೂ ಭಂಟ ಸಮುದಾಯದಲ್ಲಿ ಭಂಡಾರಿ ಎಂಬುದು ಮನೆತನದ ಹೆಸರಷ್ಟೇ. ಆದರೆ ‘ಭಂಡಾರಿ’ ಎಂಬ ಜಾತಿಯೇ ಪ್ರತ್ಯೇಕವಾಗಿ ಇದೆ. ಹಿಂದೆ ಅರಸರ ಕಾಲದಲ್ಲಿ ನಮ್ಮವರು ಶಸ್ತ್ರಾಸ್ತ್ರ ಭಂಡಾರದ ಮುಖ್ಯಸ್ಥರಾಗಿ ಇರುತ್ತಿದ್ದವರು. ದೇವಸ್ಥಾನ ಕೋಶಾಧಿಕಾರಿಯಾಗಿ ಮೂರ್ತಿ, ಆಭರಣಗಳನ್ನು ತಮ್ಮ ಮನೆಯಲ್ಲಿನ ಭಂಡಾರದಲ್ಲಿ ಇಟ್ಟು ಕಾವಲು ಕಾಯುತ್ತಿದ್ದರು. ಹಾಗಾಗಿ ನಮ್ಮವರನ್ನು ಭಂಡಾರಿ ಎಂದು ಕರೆಯುತ್ತಾರೆ. ಆದರೆ ಈಗ ದೇವಸ್ಥಾನಗಳನ್ನು ಗಟ್ಟಿಯಾಗಿಯೇ ಕಟ್ಟಿರುವುದರಿಂದ ಭಂಡಾರದ ಪರಿಕಲ್ಪನೆ ದೂರವಾಗಿ, ಭಂಡಾರಿಗಳಿಗೆ ಭಂಡಾರ ಕಾಯುವ ಕುಲಕಸುಬು ಇಲ್ಲದಾಗಿದೆ. ಈಗಿನ ಕಾಲದಲ್ಲಿ ವ್ಯಾಪಾರ, ವ್ಯವಸಾಯ, ಅಗಸ ವೃತ್ತಿ, ಆಭರಣ ತಯಾರಿಕೆ, ನೇಕಾರಿಕೆ, ಕ್ಷೌರಿಕ ವೃತ್ತಿ, ಬಡಗಿ ವೃತ್ತಿ ಹಾಗೂ ಇನ್ನೂ ಅನೇಕ ಕಸುಬನ್ನು ಹೊಟ್ಟೆಪಾಡಿಗಾಗಿ ಮಾಡುತ್ತಾರೆಯೇ ಹೊರತು ಆ ಕಸುಬುಗಳಿಗೂ ಭಂಡಾರಿ ಜಾತಿಗೂ ಸಂಬಂಧ ಇಲ್ಲ. ಭಂಡಾರ ಕಾಯುವುದು, ಪೌರೋಹಿತ್ಯ ಮಾಡುವುದು, ಜ್ಯೋತಿಷ್ಯ ಶಾಸ್ತ್ರ, ಆಯುರ್ವೇದ ಪಂಡಿತ ಕೆಲಸಗಳೇ ಭಂಡಾರಿ ಜಾತಿಯವರ ಕುಲಕಸುಬಾಗಿದೆ. ತುಳುನಾಡಿನ ಪುಣ್ಯಕ್ಷೇತ್ರಗಳಾದ ಕಾಸರಗೋಡು, ಪುತ್ತೂರು, ಕಟೀಲು, ಪೊಳಲಿ, ಬೋಳಿಯಾರು, ವಿಟ್ಲ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ಈಗಲೂ ‘ಭಂಡಾರ ಮುಖ್ಯಸ್ಥನ’ ಜವಾಬ್ಧಾರಿಯನ್ನು ಜಾತ್ರೆಗಳ ಕಾಲದಲ್ಲಿ ಕಾಣಬಹುದು.
ಪ್ರಶ್ನೆ: ಭಂಡಾರಿ ಸಮುದಾಯದವರು ತುಳುನಾಡಿನ ಮೂಲ ನಿವಾಸಿಗಳು ಅಲ್ಲ ಎಂಬುದು ಹಲವರ ವಾದ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಬಂಗಾಡಿ: ನೀವು ಸರಿಯಾಗಿಯೇ ಹೇಳಿದಿರಿ. ಭಂಡಾರಿ ಸಮುದಾಯದವರು ಮೂಲತಹ ಮಧ್ಯ ಭಾರತ ಮೂಲದವರು. ರಜಪೂತ ವಂಶಕ್ಕೆ ಸೇರಿದವರೆಂಬ ಮಾತೂ ಇದೆ. ಶಿವಾಜಿ ಮಹಾರಾಜರ ಕಾಲದಲ್ಲಿ ರಾಜವಂಶದ ಪ್ರಮುಖ ಖಜಾಂಚಿಯಾಗಿ ಇದ್ದವರು ಶಸ್ತ್ರಾಸ್ತ್ರ ಭಂಡಾರ ಕಾಯುತ್ತಿದ್ದುದರಿಂದ ಭಂಡಾರಿಗಳು ಎಂದು ಕರೆಸಿಕೊಂಡರು. ಶಿವಾಜಿ ಯುಗದ ನಂತರದಲ್ಲಿ ಮಹಾರಾಷ್ಟ್ರ, ಗೋವಾ ಪ್ರದೇಶಕ್ಕೆ ಚದುರಿಹೋದರು. ಪೋರ್ಚುಗೀಸರ ಆಕ್ರಮಣದ ಕಾಲದಲ್ಲಿ ಮತಾಂತರಕ್ಕೆ ಹೆದರಿ ಅನೇಕ ಸಮುದಾಯಗಳವರು ಬೇರೆ ಬೇರೆ ಕಡೆ ಓಡಿಹೋಗಿ ರಕ್ಷಿಸಿಕೊಂಡರು. ಗೌಡ ಸಾರಸ್ವತರು ಮಂಗಳೂರು-ಕಾಸರಗೋಡು ಕಡೆಗೆ ವಲಸೆ ಹೋದರೆ, ಇನ್ನೂ ಕೆಲವರು ಕಾಡಿಗೆ ತೆರಳಿ ಆಸರೆ ಪಡೆದು ಕಾಡು ಜನಾಂಗದವರನ್ನು ಅನುಸರಿಸಿದರು. ಭಂಡಾರಿ ಸಮುದಾಯದವರು ಕೇರಳಕ್ಕೆ ತೆರಳಿ ನಂತರ ಕಾಸರಗೋಡು, ಮಂಗಳೂರು ಸುತ್ತಮುತ್ತಲ ಪ್ರದೇಶಗಳ ದೇವಸ್ಥಾನಗಳಲ್ಲಿ ರಕ್ಷಣೆ ಪಡೆದು ತಮ್ಮ ಕುಲಕಸುಬಾದ ದೇವಸ್ಥಾನದ ಕೆಲಸಗಳಲ್ಲಿ ತೊಡಗಿದರು. ಆ ಕಾಲದಲ್ಲಿ ತುಳುನಾಡಿಗೆ ಓಡಿ ಬಂದ ಭಂಡಾರಿ ಸಮುದಾಯದವರು ಕೇವಲ 500-600 ರಷ್ಟು ಮಂದಿ ಮಾತ್ರ ಇರಬಹುದು. ಈಗ ನಾಲ್ಕೈದು ತಲೆಮಾರಿನಲ್ಲಿ ಭಂಡಾರಿ ಜಾತಿಯವರ ಸಂಖ್ಯೆ 10-15 ಸಾವಿರ ಅಷ್ಟೇ ಇದ್ದು ರಾಜ್ಯದಲ್ಲಿ ಅತೀ ಚಿಕ್ಕ ಸಮುದಾಯವಾಗಿದೆ.