ಮೈಸೂರು ದಸರಾ ; ವೈಭವೋಪೇತ ಜಂಬೂ ಸವಾರಿ ಮಹಾ ಮೆರವಣಿಗೆ

ರಾಜ ಮಹಾರಾಜರ ಬೀಡು.. ಸಾಂಸ್ಕೃತಿಕ ನಾಡು ಅರಮನೆ ನಗರಿಯಲ್ಲಿ ನವರಾತ್ರಿ ವೈಭವದ ಅಂತಿಮಘಟ್ಟದ ವೈಭವೋಪೇತ ಜಂಬೂ ಸವಾರಿ ಮಹಾ ಮೆರವಣಿಗೆ ನಾಡಿನ ಗಮನಸೆಳೆಯಿತು.
ಸಾಲು ಸಾಲು ಆನೆಗಳು.. ಆನೆಯ ಬೆನ್ನೇರಿದ್ದ ಸ್ವರ್ಣ ಖಚಿತ ಅಂಬಾರಿ.. ಆ ಅಂಬಾರಿಯೊಳಗೆ ವಿರಾಜಮಾನಳಾಗಿ ಶೋಭಿಸುತ್ತಿದ್ದಳು ಮಹಾಮಾತೆ ಚಾಮುಂಡಿ. ಈ ದೇವತೆಯನ್ನು ಹೊತ್ತು ಸಾಗಿದ ಈ ಮಹಾ ಮೆರವಣಿಗೆ ವೈಭವದ ಸಂಕೇತವಾಗಿ ಮತ್ತೊಮ್ಮೆ ಜನಜನಿತವಾಯಿತು. ಅದಿ ದೇವತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜವಂಶಸ್ಥ ಯದವೀರ್, ಮೈಸೂರು ಮೇಯರ್ ಲಿಂಗಪ್ಪ, ಜಿಲ್ಲಾಧಿಕಾರಿ ಶಿಖಾ, ಮೈಸೂರು ಪೊಲೀಸ್ ಆಯುಕ್ತ ದಯಾನಂದ್ ಪುಷ್ಮ ನಮನ ಸಮರ್ಪಿಸಿದರು.
ಶುಕ್ರವಾರ, ಮಧ್ಯಾಹ್ನ ನಂತರದ 12.30ರಿಂದ 2 ಗಂಟೆಯವರೆಗಿನ ಮಕರ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಹಸಿರು ನಿಶಾನೆ ತೋರಬೇಕಾಗಿತ್ತಾದರೂ ಕೆಲ ಅಡಚಣೆಯಿಂದಾಗಿ ಈ ಶೋಭಾ ಯಾತ್ರೆ ತಡವಾಗಿ ಆರಂಭವಾಯಿತು. ಆದರೂ ಕಳೆಗುಂದಲಿಲ್ಲ. ಬರದ ಛಾಯೆಯ ಹೊಡೆತದಿಂದಾಗಿ ಸರಳತೆಗೆ ಸರ್ಕಾರ ಮುಂದಾಗಿತ್ತಾದರೂ ಅದ್ಧೂರಿ ತನಕ್ಕೆ ಏನೂ ಕಡಿಮೆಯಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆಗೆ ಒಂದೊಂದು ಸ್ತಬ್ಧ ಚಿತ್ರಗಳು ರಾಜಬೀದಿಗೆ ಇಳಿಯುತ್ತಿದ್ದಂತೆ ಒಂದರ ಹಿಂದೊಂದರಂತೆ ಬಗೆ-ಬಗೆಯ ಸಂದೇಶಗಳನ್ನು ಸಾರುತ್ತಾ ಸಾಲು ಸಾಲಾಗಿ ಟ್ಯಾಬ್ಲೋಗಳು ತೆರಳಿದವು.
ಸಾಂಸ್ಕೃತಿಕ ಮಹಾ ವೈಭವ
ಈ ಮಹಾ ಮೆರವಣಿಗೆಯಲ್ಲಿ ಕಣ್ಣೀಗೂ ತಂಪೂ.. ಕಿವಿಗೂ ಇಂಪು ನೀಡುತ್ತಾ ಜನ ಮಾನಸವನ್ನು ಸೆಳೆಯುತ್ತಾ 65 ಸಾಂಸ್ಕೃತಿಕ ಕಲಾ ತಂಡಗಳು ಸಾಗಿದವು.
ಈ ಹಿಂದಿನ ದಸರಾ ಮೆರವಣಿಗೆಯಲ್ಲಿ ದೇಶದ ವಿವಿಧೆಡೆಯ ಹಾಗೂ ರಾಜ್ಯದ ಹಲವು ಜಿಲ್ಲೆಗಳ ಸ್ತಬ್ಧ ಚಿತ್ರಗಳ ಸಮ್ಮಿಲನವಾಗುತ್ತಿತ್ತು. ಆದರೆ, ಈ ಬಾರಿ ಸರಳ ಆಚರಣೆಗೆ ನಿರ್ಧರಿಸಿದ್ದರಿಂದ ಮೈಸೂರು ಜಿಲ್ಲೆಗಷ್ಟೇ ಇದನ್ನು ಸೀಮಿತಗೊಳಿಸಲು ನಿರ್ಧರಿಸಲಾಗಿತ್ತು. ಹೀಗಿದ್ದರೂ ವಿವಿಧ ಇಲಾಖೆಗಳ 23 ಸ್ತಬ್ಧ ಚಿತ್ರಗಳು ಹತ್ತು ಹಲವು ಜನಪರ ಸಂದೇಶಗಳನ್ನು ಸಾರಿದವು.
ಕೃಷಿ ಇಲಾಖೆ, ಪ್ರಾಚ್ಯವಸ್ತು ಇಲಾಖೆ, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆಯ ಸ್ತಬ್ಧ ಚಿತ್ರಗಳು, ತಮ್ಮ ಇಲಾಖೆಗಳ ಕಾರ್ಯಕ್ರಮಗಳತ್ತ ಬೆಳಕು ಚೆಲ್ಲಿದರೆ, ಆರೋಗ್ಯ ಇಲಾಖೆಯ ಇಂದ್ರಧನುಷ್ ಅಭಿಯಾನ, ಕನ್ನಡ ಸಂಸ್ಕೃತಿ ಇಲಾಖೆಯ ಬಸವ ಮಂಟಪ ಹಾಗೂ ವಾರ್ತಾ ಇಲಾಖೆಯ ಗಾಂಧಿಜಿ ಕನಸು ಕರ್ನಾಟಕದಲ್ಲಿ ನನಸು ಎಂಬ ಸ್ತಬ್ಧ ಚಿತ್ರಗಳು ಅರ್ಥಗರ್ಭವನ್ನೆ ಹೊಂದಿದಂತಿತ್ತು. ನಾವು ಉಳಿಸಿದರೆ ಜಲವನ್ನು, ಜಲವೂ ಉಳಿಸುವುದು ನಮ್ಮನ್ನು ಎಂಬ ಸಂದೇಶವನ್ನು ಸಾರಿತು, ಕಾವೇರಿ ನೀರಾವರಿ ನಿಗಮ.
ಟ್ಯಾಬ್ಲೋಗಳು ಸಾರಿದ ಕಥೆ
ಸ್ವಚ್ಛ ಭಾರತ ಅಭಿಯಾನದಲ್ಲಿ ನಂಬರ್ ಒನ್ ಗಿಟ್ಟಿಸಿರುವ ರಾಜ್ಯದ ಮಹಾನಗರಿ ಮೈಸೂರು ಪಾಲಿಕೆ, ಸ್ವಚ್ಛತೆಯನ್ನು ಅಭಿಯಾನವನ್ನು ಸಾರಿದರೆ, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯವನ್ನು, ಶಿಕ್ಷಣ ಇಲಾಖೆ -ಶೈಕ್ಷಣಿಕ ಅಭಿಯಾನವನ್ನು, ಪೊಲೀಸ್ ಇಲಾಖೆ – ಅಭಯವನ್ನು ಸಾರುತ್ತಲೂ, ಸಮಾಜ ಕಲ್ಯಾಣ ಇಲಾಖೆ ಅಸ್ಪೃಶ್ಯತೆ ನಿವಾರಣೆಯ ಉದ್ದೇಶವನ್ನು ಟ್ಯಾಬ್ಲೋಗಳ ಮೂಲಕ ಸಾರಿ ಹೇಳಿತು..
ಪರಂಪರೆ ಪ್ರತಿಬಿಂಬ
ಕ್ಷಣ ಕ್ಷಣಕ್ಕೂ ರಂಜಿಸುತ್ತಿದ್ದುದು ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ನಂದಿ ಧ್ವಜ ಕುಣಿತ, ತನ್ನದೆ ಆದ ಪರಂಪರೆಯನ್ನು ಪ್ರತಿಬಿಂಬಿಸುವಂತೆ ಮಾಡಿದರೆ, ವೀರಭದ್ರ ನೃತ್ಯ, ನಾದ ಸ್ವರ, ನಗಾರಿ ಮೇಳ ಈ ಜಂಬೂ ಸವಾರಿ ಮೆರವಣಿಗೆಗೆ ಆಕರ್ಷಣೆಯ ಸೆಳೆಯಾಯಿತು. ಮೈಸೂರು ಅರಮನೆಯ ಫಿರಂಗಿ ಗಾಡಿಗಳು ಹಾಗೂ ನೌಪತ್ ನಿಶಾನೆ ಆನೆಗಳು ಎಲ್ಲರ ಕುತೂಹಲ ಕೇಂದ್ರಬಿಂದುವಾಯಿತು.