ದೇವರಗುಡ್ಡದಲ್ಲಿ ಬಡಿಗೆಗಳಿಂದ ಹೊಡೆದಾಡುವ ಉತ್ಸವ

ಬಳ್ಳಾರಿ ಜಿಲ್ಲೆಯ ಗಡಿಭಾಗದ ಆಂಧ್ರಪ್ರದೇಶ ದೇವರಗುಡ್ಡದಲ್ಲಿ ವಿಜಯದಶಮಿಯಂದು ಮಾಳ ಮಲ್ಲೇಶ್ವರ ಕಲ್ಯಾಣೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಸಾವಿರಾರು ಜನ ಭಕ್ತ ಸಮೂಹ ಬಡಿಗೆಗಳಿಂದ ಹೊಡೆದಾಡುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಾರೆ. ಈ ಹೊಡೆದಾಟದಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಆಂಧ್ರ ಪ್ರದೇಶದ ಆಲೂರು ತಾಲೂಕಿನ ಹೊಳಗುಂದ ಮಂಡಲದ ನೇರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯ ಪ್ರದೇಶದ ಗುಡ್ಡದ ಮೇಲೆ ಮಾಲ ಮಲ್ಲೇಶ್ವರಸ್ವಾಮಿ ದೇವಸ್ಥಾನ ಇದೆ. ಇದು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಬಹುತಕ ಮಂದಿ ಕನ್ನಡಿಗರಾಗಿದ್ದಾರೆ.
ಪ್ರತಿ ವಿಜಯದಶಮಿ ದಿನರಾತ್ರಿ ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ನೆೇರಣಕಿ ಗ್ರಾಮದ ಭಕ್ತರು ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಮತ್ತು ಪಲ್ಲಕ್ಕಿಯನ್ನು ಹೊತ್ತು ಬೆಟ್ಟಕ್ಕೆ ಬರುತ್ತಾರೆ. ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ನಡೆಸುವ ಪ್ರಯತ್ನವೇ ಇಲ್ಲಿನ ಆಚರಣೆಯ ಇನ್ನೊಂದು ಮುಖ. ಅದು ಕ್ರೌರ್ಯ ಮತ್ತು ರಣೋತ್ಸಾಹದ್ದು . ಇದುವೇ ಭಯಾನಕ ಮತ್ತು ಮೈನವಿರೇಳಿಸುವಂತ ಸಂದರ್ಭ ಕೂಡ ಆಗಿರುತ್ತದೆ.
ಮಧ್ಯರಾತ್ರಿ ಕಲ್ಯಾಣೋತ್ಸವಕ್ಕೆ ದೇವರ ಗುಡ್ಡಕ್ಕೆ ನೇರಣಕಿ ಗ್ರಾಮದ ಭಕ್ತರು ಮೆರವಣಿಗೆಯ ಮೂಲಕ ಉತ್ಸವ ಮೂರ್ತಿಗಳನ್ನು ಬೆಟ್ಟಕ್ಕೆ ತರುವಾಗ, ಹೇಗಾದರೂ ಮಾಡಿ ತಮ್ಮ ಗ್ರಾಮಕ್ಕೆ ಈ ವರ್ಷ ಈ ಮೂತಿಗಳನ್ನು ಕೊಂಡೊಯ್ಯಬೇಕೆಂದು ಸುತ್ತಲಿನ ಎರಕೆರ, ಎಳ್ಳಾರ್ಥಿ, ವಿರುಪಾಪುರ, ಸುಳುವಾಯಿ ಮೊದಲಾದ 12 ಗ್ರಾಮಗಳ ಗ್ರಾಮಸ್ಥರ ತಂಡಗಳು ಕಾಯುತ್ತಿರುತ್ತವೆ. ಅದಕ್ಕಾಗಿ ಈ ರಣೋತ್ಸಾಹ ನಡೆಯುತ್ತದೆ.
ದೇವರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ನೆಣಕಿಯವರು, ಪಡೆದುಕೊಳ್ಳಲು ಇತರೆ ಗ್ರಾಮದವರು ನಡುವೆ ನಡೆಯುವ ಧರ್ಮಯುದ್ಧವೇ ಇದಾಗಿರುತ್ತದೆ. ದೇವರನ್ನು ಕಾಪಾಡಲು ಕಾಯುತ್ತಿರುವ ನೆಣಕಿ ತಂಡಗಳು ತಮ್ಮೆದುರಿಗೆ ಬೆೇರೆ ಗ್ರಾಮದವರು ಯಾರೆ ಬಂದರು ಕೈಯಲ್ಲಿನ ಬಡಿಗೆಗಳಿಂದ ದಾಳಿ ಮಾಡಿತ್ತಾರೆ. ಉತ್ಸವ ಮೂರ್ತಿಯನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ದರೆ ತಮ್ಮ ಗ್ರಾಮಕ್ಕೆ ಹೆಮ್ಮಮತ್ತು ಒಳ್ಳೆಯದಾಗುತ್ತದೆಂಬ ನಂಬಿಕೆಯಾಗಿದೆ.
ಈ ವರ್ಷ ಮಾನವ ಹಕ್ಕುಗಳ ಆಯೋಗ ಈ ಕ್ರೂರ ಆಚರಣೆಗೆ ನಿಷೇಧಿಸಬೇಕೆಂದು ಸೂಚಿಸಿತ್ತು. ಅದಕ್ಕಾಗಿ ಬೆಟ್ಟಕ್ಕೆ ಹತ್ತುವಾಗ ಪೊಲೀಸರು ಭಕ್ತರನ್ನು ತಡೆದು ಕಟ್ಟಿಗಳನ್ನು ಕಸಿದುಕೊಂಡರು. ಆದರೂ ರಾತ್ರಿ ಸಾವಿರಾರು ಜನ ಬಡಿಗೆಗಳನ್ನು ಹಿಡಿದು ಪ್ರತಿವರ್ಷದಂತೆ ಈ ವರ್ಷವೂ ತಮ್ಮ ರಣೋತ್ಸವ ಆಚರಿಸಿದರು. ಇದರಲ್ಲಿ 25ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಲ್ಲಿ ನುಡಿಯುವ ಕಾರಣಿಕದ ನುಡಿಯ ಭವಿಷ್ಯದ ಆಧಾರದ ಮೇಲೆ ಕೃಷಿಕರು ತಮ್ಮ ಬೇಸಾಯ ಕ್ರಮ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಖರೀದಿ ನಡೆಸುತ್ತಾರೆ. ಅಷ್ಟೇ ಅಲ್ಲದೆ ದೇಶದಲ್ಲಿ ಸಂಘಟಿಸಬಹುದಾದ ಘಟನೆಗಳು ಮತ್ತು ಮಳೆಯ ಬಗ್ಗೆ ವಿವರ ಇರುತ್ತದೆ. ಈ ವರ್ಷದ ಕಾರಣಿಕ ಭವಿಷ್ಯದಲ್ಲಿ ಲಕ್ಷ್ಮಿ ಪಾರ್ವತಿ ಒಂದಾಗಿ ಗಗನಕ್ಕೆ ಸೆರ್ಯಾರ. ಗಗನಕ್ಕೆ ಗುಂಡು ಹಾರ್ಯಾದ. ಅರಳೆ 4600, ಜೋಳ 2100, ಆರು ಮೂರು, ಮೂರು ಆರು ಎಂಬುದಾಗಿದೆ . ಇದರಿಂದ ಹಣದ ಸ್ವರೂಪಿಣಿ ಲಕ್ಷಿ ಮತ್ತು ಸಂರಕ್ಷಕಿ ಪಾರ್ವತಿ ಗಗನ ಸೇರಿದ್ದಾರೆಂದರೆ ಬೆಲೆ ಹೆಚ್ಚಲಿದೆ. ದೇಶದಲ್ಲಿ ಸಂರಕ್ಷಣೆಯೂ ದೂರವಾಗುತ್ತಿದೆ. ಬೆಲೆ ಹೆಚ್ಚಿನದಾಗಿ ಇದ್ದುದು ನಂತರ ಇಳಿಕೆಯಾಗಿ ಮತ್ತೆ ಹೆಚ್ಚಾಗಲಿದೆಂದು ಅರ್ಥೈಯಿಸಲಾಗಿದೆ.