ಕಡ್ಲೆಕಾಯಿ ಪರಿಷೆ ; ಬಸವನಗುಡಿಯಲ್ಲಿ ಜನಜಾತ್ರೆ

ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆ ಕಾರ್ತಿಕ ಮಾಸದ ಕಡೆ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಭಾನುವಾರವೂ ಬಸವನಗುಡಿ ರಸ್ತೆಯಲ್ಲಿ ನೂರಾರು ಮಂದಿ, ಹಳ್ಳಿ ಸೊಗಡಿನ ಕಡ್ಲೆಕಾಯಿ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಪ್ರತಿ ಚಳಿಗಾಲದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನ ವಿಜೃಂಭಣೆಯಿಂದ ಪಾಲ್ಗೊಳ್ಳುವ ಈ ಗ್ರಾಮೀಣ ಸೊಬಗಿನ ಪರಿಷೆಗೆ ಐತಿಹ್ಯಗಳಿವೆ. ಪ್ರತಿ ವರ್ಷದ ಕಾರ್ತಿಕ ಮಾಸದ ಕಡೆಯ ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಮಾಲ್ ಸಂಸ್ಕೃತಿಯಿಂದ ಬೇಸತ್ತ ಹೈಟೆಕ್ ಸಿಟಿ ಜನ ತಮ್ಮ ಹಳ್ಳಿಯ ಜೀವನ ನೆನಪಿಸುವ ಈ ಶೇಂಗಾ ಜಾತ್ರೆಗೆ ಕುಟುಂಬ ಸಮೇತರಾಗಿ ಪಾಲ್ಗೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಈ ಕಡ್ಲೆಕಾಯಿ ಪರಿಷೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಹಾಗೇ ಹೊರ ರಾಜ್ಯಗಳಿಂದ ಹತ್ತಾರು ಬಗೆಯ ಕಡ್ಲೆಕಾಯಿ ಮಾರಾಟಗಾರರು ಭಾಗವಹಿಸುತ್ತಿದ್ದಾರೆ.
ದೊಡ್ಡ ಗಣಪತಿ ದೇವಸ್ಥಾನ ರಸ್ತೆಯುದ್ದಕ್ಕೂ ಈ ಕಡ್ಲೆಕಾಯಿ ವ್ಯಾಪಾರ ಬಲು ಜೋರು. ವ್ಯಾಪಾರಿಯೊಬ್ಬರು ಈ ಬಾರಿಯು ಜನ ಹೆಚ್ಚಾಗಿ ಜಾತ್ರೆಗೆ ಬರುತ್ತಿದ್ದು, ಒಳ್ಳೆ ವ್ಯಾಪಾರವಾಗುತ್ತಿದೆ ಎಂದರು. ಬಸವಣ್ಣನಿಗೆ ಪ್ರಿಯವಾದ ಕಡಲೆಕಾಯಿ ಬೆಳೆದ ರೈತರು ಆತನ ಪಾದಕ್ಕೆ ಅರ್ಪಿಸಿ, ತಮ್ಮ ವ್ಯಾಪಾರ ಆರಂಭಿಸುತ್ತಾರೆ.
ರಾಮಕೃಷ್ಣ, ಆಶ್ರಮದ ಸರ್ಕಲ್ ನಿಂದ ಬಿ.ಎಂ.ಎಸ್. ಕಾಲೇಜಿಗೂ ಆಚೆಯವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಕಲಡೆಕಾಯಿ ವ್ಯಾಪಾರ ಭರಾಟೆಯಿಂದ ನಡೆಯುತ್ತಿದೆ. ಈಬಾರಿ ಪ್ಲಾಸ್ಟಿಕ್ ರಹಿತ ಜಾತ್ರೆಗೆ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಅಹಿತಕರ ಘಟನೆ ತಡೆಯಲು ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ..