ಚಾರ್ಮಾಡಿ ಯ ಅಣ್ಣಪ್ಪ ದೇವರ ಗುಡಿಯ ಮಹಿಮೆ ಗೊತ್ತಾ?

ಅಣ್ಣಪ್ಪ ಸ್ವಾಮೀ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ?
ಧರ್ಮ ಎಲ್ಲಿ ಇರುತ್ತದೋ ಅಲ್ಲಿ ನೆಲೆಯಾಗುತ್ತೇನೆ ಎಂದು ಹೇಳಿ ಧರ್ಮಸ್ಥಳದಲ್ಲಿ ನೆಲೆಸಿರುವ ಧರ್ಮದೇವತೆ ಅಣ್ಣಪ್ಪ.
ತುಳುನಾಡಲ್ಲಿ ದೈವಗಳ ಮೇಲೆ ಅಗಾಧ ನಂಬಿಕೆ. ಕಟೀಲು, ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಹೀಗೆ ಅನೇಕ ಪ್ರಸಿದ್ಧ ದೇಗುಲಗಳು ಇದ್ದರೂ ದೈವಗಳಿಗೆ ಮೊದಲ ಆರಾಧನೆ ಸಾಮಾನ್ಯ.
ಊರು ಕಾಯೋಕೆ ದೇವರಿದ್ದರೆ, ಮನೆಯನ್ನು, ಕುಟುಂಬವನ್ನು ಕಾಯೋಕೆ ಇರೋದು ದೈವಗಳು. ಕಲ್ಲುಟ್ಟಿ, ಪಂಜುರ್ಲಿ, ಕೊರಗಜ್ಜ, ಹೀಗೆ ತುಳುನಾಡ ಆರಾಧ್ಯ ದೈವಗಳು ಹತ್ತಾರು. ಈ ಪೈಕಿ ಅಣ್ಣಪ್ಪ ನಿಗೆ ವಿಶಿಷ್ಟ ಸ್ಥಾನ ಇದೆ.
ಧರ್ಮಸ್ಥಳದ ಮಂಜುನಾಥ ನ ಸನ್ನಿಧಿ ಬಳಿ ಬೆಟ್ಟವೇರಿ ಕುಳಿತಿರುವ ಅಣ್ಣಪ್ಪ ಸರ್ವರ ಕಷ್ಟ ನಷ್ಟಗಳಿಗೆ ಸ್ಪಂದಿಸುವ ಶಕ್ತಿ ಎಂಬುದು ಆಸ್ತಿಕರ ನಂಬಿಕೆ. ಈ ಅಣ್ಣಪ್ಪ ಧರ್ಮಸ್ಥಳದಲ್ಲಿ ಮಾತ್ರವಲ್ಲ, ಅಲ್ಲಲಿ ನೆಲೆಯೂರಿ ಭಕ್ತ ಕೋಟಿಯನ್ನು ಕಾಪಾಡುತ್ತಿರುವವನು.
ಇದೇ ಅಣ್ಣಪ್ಪ ಚಾರ್ಮಾಡಿ ಘಾಟಿಯಲ್ಲಿ ನೆಲೆಸಿ ತನ್ನದೇ ಆದ ಮಹಿಮೆ ಸಾರುತ್ತಿದ್ದಾನೆ ಅನ್ನುವ ವಿಷಯ ಈಗೀಗ ಜನಜನಿತವಾಗುತ್ತಿದೆ. ಉಜಿರೆಯಿಂದ ಚಿಕ್ಕಮಗಳೂರಿಗೆ ಹೋಗುವ ರಸ್ತೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಈ ದೈವಸ್ಥಾನ ಸಿಗುತ್ತದೆ. ಅದೇನೋ ಗೊತ್ತಿಲ್ಲ ; ಆ ರಸ್ತೆಯಲ್ಲಿ ಸಾಗುವ ವಾಹನಗಳ ಚಾಲಕರು ಈ ಗುಡಿಯ ಬಳಿ ನಿಲ್ಲಿಸಿ ಕೈ ಮುಗಿದೇ ಮುಂದೆ ಸಾಗ್ತಾರೆ.
ಇದು ಒಂದು ಸಣ್ಣ ಗುಡಿ. ಆದರೆ ಇದರಲ್ಲಿ ನೆಲೆಸಿರುವ ದೇವರ ಮಹಿಮೆ ಅಪಾರ. ಈ ಅಣ್ಣಪ್ಪ ಈ ಚಾರ್ಮಾಡಿಯ ಅತ್ಯಂತ ದುರ್ಗಮ ರಸ್ತೆಯಲ್ಲೂ ವಾಹನ ಚಾಲಕರಿಗೆ ಆಪ್ತ ರಕ್ಷಕ ಎಂಬುದು ಜನರ ನಂಬಿಕೆ. ಅಚ್ಚ ಐಸಿರಿರಿಯ ತಾಣದಲ್ಲಿ ಇರುವ ಈ ಗುಡಿ, ಪ್ರಕೃತಿ ಪ್ರಿಯರಿಗೆ ರಮ್ಯಾ ರಮಣೀಯ ತಾಣ ; ಆಸ್ತಿಕರಿಗೆ ಇದು ಪವಿತ್ರ ಕ್ಷೇತ್ರ. ಇಲ್ಲಿ ಬೇಡಿದವರಿಗೆ ನಿರಾಶೆಯಾಗಿಲ್ಲ ಎಂಬುದು ಈ ಅಣ್ಣಪ್ಪನನ್ನು ನಂಬಿದವರ ಮಾತು.