ಗೋಮಾತೆಗೆ ಸೀಮಂತ ಕಾರ್ಯಕ್ರಮ

ಹಿಂದೂ ಸಂಸ್ಕೃತಿಯಲ್ಲಿ ಗೋವುಗಳನ್ನು ಮಾತೆ ಎಂದು ಪೂಜಿಸಿ ಗೌರವಿಸುತ್ತೇವೆ. ಹಾಗಾಗಿಯೇ ಗೋಮಾತೆ ಗರ್ಭ ಧರಿಸಿದಾಗ ರಾಜ್ಯದ ಹಲವೆಡೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವ ರೂಢಿ ಇದೆ. ಇದರಿಂದ ಒಳಿತಾಗಾಗುತ್ತದೆ ಎಂಬುದು ಹಿಂದಿನಿಂದ ಬಂದ ನಂಬಿಕೆ. ಇಂಥವುದೇ ಒಂದು ವಿಶೇಷ ಕಾರ್ಯಕ್ರಮ ವಿದ್ಯಕಾಶಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಜರುಗಿತು.
ಗರ್ಭಿಣಿಯರಿಗೆ ಸೀಮಂತ ಮಾಡುವ ರೀತಿಯಲ್ಲೇ ಮುತ್ತೈದೆಯರೆಲ್ಲರೂ ಸೇರಿ ಗೌರಿ ಎಂಬ ಹೆಸರಿನ ಗೋವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅರಿಶಿನ ಹಚ್ಚಿ, ಮೈತೊಳೆದು ಸೀರೆ ಉಡಿಸಿ, ಬಳೆ ತೊಡಿಸಿ, ಸೀಮಂತ ಕಾರ್ಯ ಮಾಡಿದರು.
ಯಾದವಾಡ ಗ್ರಾಮದ ಬಸವರಾಜ ಹಡಪದ್ ಎಂಬುವರು ಬಡತನದ ನಡುವೆಯೂ ಹಸುವನ್ನು ಸಾಕಿ ಪಾಲನೆ ಪೋಷಣೆ ಮಾಡಿ, ಇದೀಗ ಗರ್ಭಧರಿಸಿರುವ ಗೌರಿಗೆ ಸೀಮಂತ ಕಾರ್ಯ ಮಾಡಿದರು.
ಹಬ್ಬದ ರೀತಿಯಲ್ಲಿಯೇ ಸೀಮಂತ ಕಾರ್ಯ ಮಾಡಿದ್ದು, ವಿಶೇಷವಾಗಿತ್ತು. ಈ ಕಾರ್ಯವನ್ನು ವೀಕ್ಷಿಸಲು ಯಾದವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನೆರೆದಿದ್ದರು.