ಬೈಂದೂರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ; ಪಂಜಿನ ಮೆರವಣಿಗೆ

0
Byndoor-Hindu-Jagaran-Vedike-Panjina-Meravanige-2

ಬೈಂದೂರು: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಭವ್ಯ ಪಂಜಿನ ಮೆರವಣಿಗೆ ಹಾಗೂ ವಿಶೇಷ ಸಭಾ ಕಾರ್ಯಕ್ರಮ ನಡೆಯಿತು.

ದೇಶಭಕ್ತಿಯ ಭಾವನೆ ಜಾಗೃತಗೊಳಿಸುವುದು ಹಾಗೂ ಸಮಾಜದಲ್ಲಿ ರಾಷ್ಟ್ರೀಯತೆಯ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಹಾಗೂ ದೇಶಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಂಡರು. ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಪಂಜಿನ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖ ಭಾಷಣಕಾರ ಕೇಶವ್ ಬಂಗೇರ, ದೇಶದ ಐಕ್ಯತೆ, ಸಮಗ್ರತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಅಖಂಡ ಭಾರತ ಸಂಕಲ್ಪದ ಪ್ರಮುಖ ಆಶಯವಾಗಿದೆ ಎಂದರು. 

ದೇಶದ ವಿಭಜನೆಯ ಕಹಿ ನೆನಪುಗಳನ್ನು ಮೆಲುಕು ಹಾಕುವುದರ ಜತೆಗೆ, ಭವಿಷ್ಯದ ಯುವಪೀಳಿಗೆಗೆ ದೇಶದ ಇತಿಹಾಸ ಹಾಗೂ ದೇಶಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಮಹಾನ್ ವೀರರ ಆದರ್ಶಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಇಂದಿನ ಜೆನ್-ಜಿ ಹಾಗೂ ಜೆನ್-ಆಲ್ಫಾ ಯುವಪೀಳಿಗೆಯ ಕೆಲವರು ದಾರಿ ತಪ್ಪುತ್ತಿರುವ ಸಂದರ್ಭಗಳು ಕಂಡುಬರುತ್ತಿವೆ. ಇದೇ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಭಗತ್ ಸಿಂಗ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳ ತ್ಯಾಗವನ್ನು ಯುವಕರು ಸ್ಮರಿಸಿಕೊಳ್ಳಬೇಕು. ದೇಶಪ್ರೇಮವನ್ನು ಮೈಗೂಡಿಸಿಕೊಂಡು ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಕೀಲ ನಾಗರಾಜ್ ಗೋಳಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚೀಲ, ಸಂಘಟನೆಯ ಹಿರಿಯರಾದ ಅರವಿಂದ್ ಕೋಟೇಶ್ವರ್, ಶಂಕರ್ ಕೋಟ, ವಾಸು ಗಂಗೊಳ್ಳಿ, ಮಹೇಶ್ ಬೈಲೂರು, ಉಮೇಶ್ ಸೂಡ, ರತ್ನಾಕರ ಗಂಗೊಳ್ಳಿ, ರಾಜೇಶ್ ಆಚಾರ್ಯ ಬೈಂದೂರು ಹಾಗೂ ತಾಲೂಕು ಸಂಯೋಜಕ ಹರೀಶ್ ಸಳ್ಕೋಡು ಉಪಸ್ಥಿತರಿದ್ದರು.

ಪಂಜಿನ ಮೆರವಣಿಗೆಗೆ ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಹಿರಿಯ ಕಾರ್ಯಕರ್ತರು ಚಾಲನೆ ನೀಡಿದರು. ಮಹೇಶ್ ವಸ್ರೆ ಪ್ರತಿಜ್ಞಾವಿಧಿ ಬೋಧಿಸಿದರು. ಕುಮಾರಿ ಜಾಹ್ನವಿ ಆಚಾರ್ಯ ವಂದೇ ಮಾತರಂ ಗೀತೆ ಹಾಡಿದರು. ವಿಜೇತ್ ಬಂಕೇಶ್ವರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *