ಕೊಡುಗು: ಮತ್ತೆ ಬೀಗುವಿನ ವಾತಾವರಣ; ನಾಪೋಕ್ಲುವಿನಲ್ಲಿ ಲಾಠಿ ಛಾರ್ಚ್

ಕೊಡುಗು: ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಗುಂಪು ಘರ್ಷಣೆಯಲ್ಲಿ ಗಾಲಗೊಂಡಿದ್ದ ಸಾಹುಲ್ ಹಮೀದ್(21) ನಿನ್ನೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊಡುಗು ಜಿಲ್ಲೆಯ ಕೆಲವು ಕಡೆ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿವರೆಗೆ ಘಟನೆಗೆ ಸಂಬಂಧಿಸಿದಂತೆ 110ಕ್ಕೂ ಹೆಚ್ಚು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಬೆಳಿಗ್ಗೆ ನಾಪೋಕ್ಲುವಿನಲ್ಲಿ ಒಂದು ಕೋಮಿನ ಮಂದಿ ಸ್ವಯಂ ಪ್ರೇರಿತ ಅಂಗಡಿಗಳನ್ನು ಮುಚ್ಚಿ ಬಂದ್ ಆಚರಿಸಿದರು. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಲ್ಲಲ್ಲಿ ಗುಂಪು ಸೇರಿದ ಜನರಿಗೆ ಗುಂಪು ಸೇರದಂತೆ ಪೊಲೀಸರು ಹೇಳಿದರು. ಆದರೆ, ಮತ್ತೆ ಗುಂಪು ಸೇರಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅಲ್ಲದೇ ನಾಪೋಕ್ಲುವಿನಲ್ಲಿ ಬಸ್ ತಡೆದಿದ್ದರಿಂದ ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಸಾಹಿಲ್ ಮೃತ ದೇಹವನ್ನು ಮೈಸೂರು ಕೆಆರ್ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಿದ್ದಾಪುರ ಬಳಿಯ ಗುಹ್ಯ ಗ್ರಾಮಕ್ಕೆ ತರಲಾಯಿತು. ಸದ್ಯ ಅಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ.
ಇನ್ನು, ಇದಕ್ಕೂ ಮೊದಲು ಸಚಿವ ದಿನೇಶ್ ಗುಂಡೂರಾವ್, ಮೈಸೂರು ಕೆಆರ್ ಆಸ್ಪತ್ರೆಗೆ ಭೇಟಿ ನೀಡಿ ಮೃತ ದೇಹ ವೀಕ್ಷಣೆ ಮಾಡಿದರು. ಬಳಿಕ ಸಾಹಿಲ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಸರ್ಕಾರದ ಪರವಾಗಿ 5 ಲಕ್ಷ ಪರಿಹಾರ ಧನ ಘೋಷಿಸಿದರು. ಬಳಿಕ ಅಲ್ಲಿಂದ ಮಡಿಕೇರಿಗೆ ತೆರಳಿದರು.
7 ಮಂದಿ ವಿರುದ್ಧ ದೂರು: ಗಲಭೆಯಲ್ಲಿ ಮೃತಪಟ್ಟ ಕುಟ್ಟಪ್ಪ ಅವರ ಮಗ ಡಾಲು 7 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಜಿಲ್ಲಾ ಸಂಚಾಲಕ ಆಬೂಬಕರ್, ಎಸ್ಡಿಪಿಐ ಮುಖಂಡ ಅಮೀನ್ ಮೊಹ್ಸಿನ್, ಪ್ರಧಾನ ಕಾರ್ಯದರ್ಶಿ ಎಂ.ಎಂ.ಫಜುಲುಲ್ಲಾ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಸೀನ್, ಖಲೀಲ್, ಸನಾವುಲ್ ಎಂಬವರ ಮೇಲೆ ಪೊಲೀಸರು ದೂರು ದಾಕಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಸಾಹುಲ್ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಪ್ರಭಾರ ಜಿಲ್ಲಾಧಿಕಾರಿ ಕೂರ್ಮರಾವ್ ಮನವಿ ಮಾಡಿದ್ದಾರೆ.
