‘ಬಿಡದಿ ಟೌನ್‌ಶಿಪ್‌ ಅಂದು ಅಧಿವೇಶನದಲ್ಲಿ ವಿರೋಧ, ಇದೀಗ ಪರ’; ಡಿಕೆಶಿ ನಡೆಗೆ ಬಿಜೆಪಿ ಟೀಕೆ

0
Siddaramaiah-DKShivakumar-DKS-300x164-1

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆ ಕೈ ಬಿಡದ ಕಾಂಗ್ರೆಸ್‌ ಸರ್ಕಾರ ಸಮಿತಿ ರಚಿಸುವ ಹೊಸ ನಾಟಕ ಮಾಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜನರ ಸಿಂಪತಿ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ ಎಂದಿಗೂ ಸ್ವಾಧೀನಕ್ಕೆ ಆದೇಶ ಹೊರಡಿಸಿರಲಿಲ್ಲ, ಕಾಂಗ್ರೆಸ್‌ ಕೂಡ ಯೋಜನೆಯನ್ನು ವಿರೋಧ ಮಾಡಿತ್ತು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್‌ ವಿರುದ್ಧ ರೈತರು ಉಗ್ರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಪೊಲೀಸರನ್ನು ಕಳಿಸಿ ಹಲ್ಲೆ ಮಾಡಿದೆ. ಕೊಲೆ, ಬೆದರಿಕೆ ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗ ಇದಕ್ಕಾಗಿ ಸದನ ಸಮಿತಿ ನೇಮಿಸಿರುವುದು ಹಾಸ್ಯಾಸ್ಪದವಾಗಿದೆ. ರೈತರು ಜಮೀನು ಕೊಡುವುದಿಲ್ಲ ಎಂದಮೇಲೂ ಸದನ ಸಮಿತಿ ಅಗತ್ಯವಿರಲಿಲ್ಲ. ಆದರೆ ಅಧಿವೇಶನ ನಡೆಯಲಿರುವುದರಿಂದ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಈ ಹಿಂದೆ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರೇ ಹೊರತು, ಆದೇಶ ಮಾಡಿರಲಿಲ್ಲ. ಅವರು ಪ್ರೊಸೀಡಿಂಗ್ಸ್‌ ಮಾತ್ರ ಮಾಡಿದ್ದರು. ಈ ಬಗ್ಗೆ ಆರೋಪ ಮಾಡುವವರು ಸರಿಯಾಗಿ ವಿವರಣೆ ನೀಡಬೇಕು. ಇದು ಕುಮಾರಸ್ವಾಮಿಯವರ ಕನಸಿನ ಕೂಸು ಎಂದು ಅಪಪ್ರಚಾರ ಮಾಡುವವರು ಈ ಬಗ್ಗೆ ದಾಖಲೆ ನೀಡಬೇಕು. ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಿಧಾನಸಭೆಯಲ್ಲಿ ಬಿಡದಿ ವಿಚಾರದಲ್ಲಿ ನಿಯಮ 69 ರಡಿ ಚರ್ಚೆಯಾಗಿತ್ತು. ಆಗ ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯೋಜನೆಯನ್ನು ಜಾರಿ ಮಾಡುವುದಿಲ್ಲ ಎಂದು ಅವರು ಉತ್ತರ ಕೊಟ್ಟಿದ್ದಾರೆ. ನಂತರ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಅವಧಿಯಲ್ಲೂ ಯೋಜನೆ ಜಾರಿ ಮಾಡಿರಲಿಲ್ಲ ಎಂದರು.

ಡಿಎಲ್ಎಫ್ ಕಂಪನಿ ಆಸಕ್ತಿ ತೋರಿ 400 ಕೋಟಿ ರೂ. ಠೇವಣಿ ಮಾಡಿತ್ತು. ನಂತರ ಬಿಜೆಪಿ ಸರ್ಕಾರ ಹಣವನ್ನು ವಾಪಸ್‌ ಮಾಡಿತು. ನಮಗೆ ಆಸಕ್ತಿ ಇದ್ದರೆ ಕಂಪನಿ ಜೊತೆಗೆ ಮಾತುಕತೆ ಮಾಡಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದೆವು. ಆದ್ದರಿಂದ ಅದರಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ನಂತರ ಕೇಂದ್ರ ಸರ್ಕಾರ ಹೊಸ ಭೂ ಸ್ವಾಧೀನ ಕಾಯ್ದೆ ಜಾರಿ ಮಾಡಿತು. ಆಗ ಸಿಎಂ ಆಗಿದ್ದ ಸದಾನಂದ ಗೌಡರು ಅದನ್ನು ಅದರ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು. ಜಗದೀಶ್ ಶೆಟ್ಟರ್ ಇದ್ದಾಗ 26/7/2012 ರಲ್ಲಿ ಸಭೆ ನಡೆದು ಸಮಿತಿ ರಚಿಸಸಲಾಯಿತು. ಯಾವುದೇ ಸ್ವಾಧೀನ ನಡೆದಿರಲಿಲ್ಲ. ಅಂದರೆ ಬಿಜೆಪಿ ಅವಧಿಯಲ್ಲಿ ಯಾವುದೇ ತೀರ್ಮಾನ ಆಗಿರಲಿಲ್ಲ. ಬಿಜೆಪಿ ಫೋರ್ ಒನ್, 51, 61 ಅವಾರ್ಡ್ ನೋಟಿಸ್ ಹೊರಡಿಸಿದೆಯೇ ಎಂದು ತಿಳಿಸಲಿ. ಇದರಲ್ಲಿ ಯಾವುದನ್ನೂ ಬಿಜೆಪಿ ಮಾಡಿಲ್ಲ ಎಂದರು.

ಆಗ ಇದಕ್ಕೆ ವಿರೋಧವಾಗಿ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಎಚ್‌.ಕೆ.ಪಾಟೀಲ್‌ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚನೆಯಾಯಿತು. ಕಾಂಗ್ರೆಸ್ ಈಗ ಆ ಸಮಿತಿಯ ವರದಿಯನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದವರು, ಈಗ ಏಕೆ ಜಾರಿ ಮಾಡುತ್ತಿದೆ? ಅದರಲ್ಲಿ ಈ ಲೇಔಟ್ ಮಾಡಬಾರದು ಎಂದು ಅವರು ವರದಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೂಡ ರೈತರ ಶಾಪ ತಟ್ಟುತ್ತದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅಧಿವೇಶನದಲ್ಲಿ ಟೌನ್ ಶಿಫ್ ವಿರೋಧಿಸಿ ಮಾತಾಡಿದ್ದರು. ಡಿ.ಕೆ.ಶಿವಕುಮಾರ್‌ ನನ್ನ ಜಿಲ್ಲೆ ಇದು, ಯೋಜನೆ ಬಂದರೆ ರೈತರಿಗೆ ಅಪಮಾನ ಎಂದು ಅಧಿವೇಶನದಲ್ಲಿ ಹೇಳಿದ್ದರು ಎಂದರು.

ಸಿದ್ದರಾಮಯ್ಯ ಕಾಲದಲ್ಲಿ ಕ್ರಮಗಳು

3/6/2016 ರಲ್ಲಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಮನಗರ ಜಿಲ್ಲೆಯ ಟೌನ್‌ಶಿಪ್‌ ವ್ಯಾಪ್ತಿಯಲ್ಲಿ ಬರುವ 10 ಗ್ರಾಮಗಳು ಸೇರಿದಂತೆ ಒಟ್ಟು 38 ಗ್ರಾಮಗಳನ್ನು ಸೇರಿಸಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಘೋಷಣೆ ಮಾಡಿದ್ದರು. ಯಾರು ಮಾಡಿದವರು? ನಾಲ್ಕು ತಿಂಗಳ ನಂತರ ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಪ್ರದೇಶ ಪ್ರಾಧಿಕಾರ ರಚನೆ ಮಾಡಿದರು. ಅಂದರೆ ಎಲ್ಲ ಆದೇಶಗಳನ್ನು ಸಿದ್ದರಾಮಯ್ಯಮವರ ಕಾಲದಲ್ಲೇ ಹೊರಡಿಸಿ ಕುಮಾರಸ್ವಾಮಿಯ ಕೂಸು ಎನ್ನಲಾಗುತ್ತಿದೆ. 2018 ರಲ್ಲಿ ವಿಧಾನಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದಾಗ, ಉಪಮುಖ್ಯಮಂತ್ರಿ ಪರಮೇಶ್ವರ ಅವರು, ನಾವು ಭೂಸ್ವಾಧೀನ ಮಾಡಿಲ್ಲ ಎಂದು ಹೇಳಿದ್ದರು. ಹಿಂದಿನ ಬಿಜೆಪಿ, ಸಮ್ಮಿಶ್ರ ಸರ್ಕಾರಗಳು ಸ್ವಾಧೀನ ಮಾಡಿದ್ದರು ಈ ರೀತಿ ಉತ್ತರ ಕೊಡಲು ಆಗುತ್ತಿರಲಿಲ್ಲ. 15/7/2024 ರಂದು ಸಿದ್ದರಾಮಯ್ಯನವರು ಗೆಜೆಟ್ ಹೊರಡಿಸಿ ಖಾತೆ ಮಾಡಿದ್ದಾರೆ. 25 ವರ್ಷಗಳ ಕಾಲ ಪರಭಾರೆ ಮಾಡತಕ್ಕದ್ದಲ್ಲ ಅಂತ ಷರತ್ತು ಹಾಕಲಾಗಿದೆ. ಅಂದರೆ ಇದು ರಿಯಲ್ ಎಸ್ಟೇಟ್ ಎನ್ನಲು ಇದಕ್ಕಿಂತ ದೊಡ್ಡ ಸಾಕ್ಷಿ ಬೇರೆ ಇಲ್ಲ. ಸರ್ಕಾರ ಆದೇಶ ಮಾಡಿದ ಮೇಲೆ ಗ್ರಾಂಟ್ ಮಾಡಲು ಸಾಧ್ಯವೇ ಇರಲಿಲ್ಲ. ಆಂಧ್ರದಲ್ಲಿ ಯಾರೋ ಒಬ್ಬ ಕಾಂಟ್ರಾಕ್ಟರ್‌ಗೆ ಇದನ್ನು ನೀಡಲಾಗಿದೆ. ಜನರ ಕರುಣೆ ಗಿಟ್ಟಿಸಲು ಡಿ.ಕೆ.ಶಿವಕುಮಾರ್‌ ಮಾತಾಡಿದ್ದಾರೆ. ಇವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ನಮ್ಮ ಅಕ್ಕ ಅಣ್ಣನ ಜಮೀನಿದೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಬಿಡದಿಯಲ್ಲಿ ಯಾರ ಯಾರ ಜಮೀನಿದೆ ಎಂದು ಹೇಳಲಿ. ಎಂದರು.

2007 ರಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಸಿದ್ದರಾಮಯ್ಯ ಮಾತನಾಡಿ, “ಬೆಂಗಳೂರಿನ ಮೂರನೇ ಒಂದು ಭಾಗದಷ್ಟು ಜನರಿಗೆ ಕುಡಿಯುವ ನೀರನ್ನು ಕೊಡೋಕೆ ಆಗ್ತಾ ಇಲ್ಲ. ಬೆಂಗಳೂರು ಅಂದರೆ 810 ಮಿಲಿಯನ್ ಲೀಟರ್ ನೀರು ಬೇಕೆಂದು ಹೇಳುತ್ತಾರೆ. ಈಗಾಗಲೇ ಕುಡಿಯುವುದಕ್ಕೆ ನೀರಿಲ್ಲ. ಇಲ್ಲಿ ನೀವು ರೈತರ ಜಮೀನನ್ನು ಕೊಡೋದಕ್ಕೆ ಹೊರಟಿದ್ದೀರಿ. ನೀವು ಎಸ್‌ಇಝೆಡ್ ಮಾಡುವುದಾದರೆ ಹಾಸನ, ಮಂಡ್ಯದಲ್ಲಿ ಮಾಡಿ” ಎಂದು ಹೇಳಿದ್ದಾರೆ. ಆಗ ಡಿ.ಕೆ.ಶಿವಕುಮಾರ್‌ ಮಾತನಾಡಿ, “ಇದು ನಮ್ಮ ಪಕ್ಷದ ಕ್ರೆಡಿಬಿಲಿಟಿ ವಿಚಾರ. ನಮ್ಮ ಸತ್ಯ ಶೋಧನಾ ಸಮಿತಿಯ ವಿಚಾರ. ಯು ಹ್ಯಾವ್ ಟು ಆಸ್ಕ್ ಅಪಾಲಜಿ” ಎಂದಿದ್ದರು. ಇದೆಲ್ಲಾ ಆದಮೇಲೆ ಕುಮಾರಸ್ವಾಮಿಯವರು ನಾನು ಅವರನ್ನು ಒಕ್ಕಲೆಬ್ಬಿಸಿ ಅವರ ಮನಸ್ಸಿಗೆ ನೋವು ಕೊಟ್ಟು ಅಲ್ಲಿ ಟೌನ್ಶಿಪ್ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದರು ಎಂದು ವಿವರಿಸಿದರು.

ಬಿಡದಿಯಲ್ಲಿ ಪ್ರತಿಭಟನೆ ಆರಂಭವಾಗಿ 435 ದಿನವಾದರೂ ಸರ್ಕಾರ ಸಮಿತಿ ರಚಿಸಲಿಲ್ಲ. ಅಧಿವೇಶನ ಮುಗಿದ ಮೇಲೆ ಸಮಿತಿ ವರದಿ ಕೊಡಲಿದದೆ. ಆಮೇಲೆ ಮತ್ತೆ ಸ್ವಾಧೀನ ನಡೆಯಲಿದೆ. ರಾತ್ರಿ ಸ್ವಾಧೀನಕ್ಕೆ ಆದೇಶ ಹೊರಟಿಸಿ ಬೆಳಗ್ಗೆ ಮುಖ್ಯಮಂತ್ರಿ ಮಾತಾಡುತ್ತಾರೆ. ಈ ಸಮಿತಿಗೆ ಅರ್ಥ ಏನಿದೆ? ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆಂದು ನಂತರ ಎಲ್ಲರಿಗೂ ಕ್ಲೀನ್‌ ಚಿಟ್‌ ನೀಡಲಾಗಿದೆ. ಅದೇ ರೀತಿ ಇಲ್ಲೂ ಮಾಡುತ್ತಾರೆ. ಎರಡು ತಿಂಗಳಲ್ಲಿ ಈ ಸಮಿತಿ ವರದಿ ನೀಡಲಿದೆ. ಇದೊಂದು ನಾಟಕ ಎಂದರು.

ಡಿನೋಟಿಫಿಕೇಶನ್‌ ಬೇಡ

ಜನರ ಹೋರಾಟದ ಮುಂದೆ ಯಾರೂ ದೊಡ್ಡವರಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಜನಾಕ್ರೋಶಕ್ಕೆ ತುತ್ತಾಗಿ ಹೊರಟುಹೋಯಿತು. ಅದೇ ರೀತಿ ಕಾಂಗ್ರೆಸ್‌ಗೂ ಆಗಲಿದೆ. ಇದು ಕಾಂಗ್ರೆಸ್‌ ಸರ್ಕಾರದ ಶವ ಪೆಟ್ಟಿಗೆಯ ಕೊನೆಯ ಮೊಳೆ ಆಗಲಿದೆ. ಡಿನೋಟಿಫಿಕೇಶನ್‌ ಮೂಲಕ ಜೈಲಿಗೆ ಕಳಿಸುವ ಪ್ರಯತ್ನ ನಡೆದಿದೆ ಎಂದು ಸಿಎಂ ಹೇಳಿದ್ದಾರೆ. ಡೀನೋಟಿಫಿಕೇಶನ್ ಮಾಡಿ ಎಂದು ನಾವ್ಯಾರೂ ಆಗ್ರಹಿಸುತ್ತಿಲ್ಲ. ರೈತರನ್ನು ಅವರ ಪಾಡಿಗೆ ಬಿಟ್ಟರೆ ಸಾಕು. ಮುಂದೆ ಬರುವ ಸರ್ಕಾರ ಅದನ್ನು ನಿಭಾಯಿಸಲಿದೆ ಎಂದರು.

Leave a Reply

Your email address will not be published. Required fields are marked *

You may have missed