ಕಮಿಷನ್ ಆರೋಪ : ಆಂಜನೇಯ ತಲೆದಂಡಕ್ಕೆ ಬಿಜೆಪಿ ಪಟ್ಟು

ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್ ನಲ್ಲಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಪತ್ನಿ ಕಮಿಷನ್ ಪಡೆದಿರುವ ಆರೋಪಕ್ಕೆ ಗುರಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಷಯವನ್ನೇ ಮುಂದಿಟ್ಟುಕೊಂಡು ಬಿಜೆಪಿ, ಎಚ್. ಆಂಜನೇಯ ತಲೆದಂಡಕ್ಕೆ ಪಟ್ಟು ಹಿಡಿದಿದೆ.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಸಚಿವ ಆಂಜನೇಯ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವುದು ಹೊಸತೇನಲ್ಲ. ಹಾಸ್ಟೆಲ್ ನಲ್ಲಿ ಪೂರೈಸಲಾಗಿರುವ ದಿಂಬು, ಹಾಸಿಗೆ ಇನ್ನಿತರ ವಸ್ತುಗಳ ಖರೀದಿಯಲ್ಲಿಯೂ ಸಚಿವರು ಶಾಮೀಲಾಗಿದ್ದಾರೆ. ಸಚಿವರ ಕ್ಷೇತ್ರದ ಜನರೇ ಎಲ್ಲಾ ಅಂಶಗಳನ್ನು ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕಮೀಷನ್ ಪಡೆದ ಆರೋಪ ಕೇಳಿ ಬಂದ ತಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಅದು ಆಗಿಲ್ಲ. ಕೂಡಲೇ ಸಚಿವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಸಚಿವ ಆಂಜಯನೇಯವರ ಲಂಚ ಪ್ರಕರಣ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ದುರ್ಗದ ಬೈಲ್ ನಲ್ಲಿ ಜಮಾಯಿಸಿದ ಬಿಜೆಪಿ ಸದಸ್ಯರು ಸಚಿವ ಆಂಜನೇಯ ಅವರ ಪ್ರತಿಕೃತಿ ದಹಿಸಿದರು. ಅಲ್ಲದೇ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ನಾಯಕ ರಂಗಾಬುದ್ದಿ ಮತ್ತು ಮಾಜಿ ಮೇಯರ್ ವೆಂಕಟೇಶ್ ಮೇಸ್ತ್ರಿ ಭಾಗವಹಿಸಿ ಆಂಜನೇಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ಸಿಲುಕಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ರಾಜೀನಾಮೆ ನೀಡುವಂತೆ ಎಬಿವಿಪಿ ಆಗ್ರಹಿಸಿದೆ.ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸುನೀಲ್ ಕುಮಾರ್, ರಾಜ್ಯದಲ್ಲಿ ದಲಿತ , ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣಗೊಳಿಸುವ ಸಮಾಜ ಕಲ್ಯಾಣ ಸಚಿವ ಆಂಜನೇಯ ಪದೇ ಪದೇ ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿರುವುದು ಖಂಡನೀಯ ಎಂದರು.
ಮಂಡ್ಯದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯ ರಾಜೀನಾಮೆಗೆ ಒತ್ತಾಯಿಸಿ , ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ನಗರದ ಎಸ್. ಬಿ. ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೋಟಾ ಶ್ರೀನಿವಾಸ್ ಪೂಜಾರಿ, ಕೇಂದ್ರದ ಬಿಜೆಪಿ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿತರಿಸುತ್ತಿದ್ದು, ಅದು ನಮ್ಮ ಯೋಜನೆ ಎಂದು ರಾಜ್ಯಸರ್ಕಾರ , ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕರೆಂಟ್ ಹೋಗುವುದೇ ಅಪರೂಪವಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಯಾವಾಗ ಬರಬಹುದು ಎಂಬ ಕಾತುರದಲ್ಲಿ ಜನತೆ ಕಾಯುವಂತಾಗಿದೆ ಎಂದು ಲೇವಡಿ ಮಾಡಿದರು.
ಚಿಕ್ಕಮಗಳೂರಿನಲ್ಲೂ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಆಂಜನೇಯ ರಾಜೀನಾಮೆಗೆ ಒತ್ತಾಯಿಸಿದರು.
ಮೈಸೂರಿನಲ್ಲೂ ಬಿಜೆಪಿ ಕಾರ್ಯಕರ್ತರು, ಸಮಾಜ ಕಲ್ಯಾಣ ಸಚಿವರ ತಲೆದಂಡ ಆಗಲೇಬೇಕು ಎಂದು ಪಟ್ಟುಹಿಡಿದರು.
ಬೆಂಗಳೂರಿನ ಶೇಷಾದ್ರಿಪುರಂ ಬಳಿಯ ರಾಜೀವ್ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಸಚಿವ ಆಂಜನೇಯರು ರಾಜೀನಾಮೆ ನೀಡದಿದ್ದಲ್ಲಿ, ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಘೋಷಿಸಿದರು.