ಬೆಂಗಳೂರಿನ ಮಾಲಿನ್ಯ ತಡೆಗೆ ‘ತಜ್ಞರ ತಂಡ’ ರಚನೆ: ಮುಖ್ಯ ಕಾರ್ಯದರ್ಶಿಗೆ ಡಿಸಿಎಂ ಸೂಚನೆ

0
Bangalore-traffic-1

​ಬೆಂಗಳೂರು: ದೇಶದ ಉದ್ಯಾನ ನಗರಿ ಹಾಗೂ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ಕುರಿತು ವಿಧಾನ ಪರಿಷತ್ ಶಾಸಕರೂ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ದಿನೇಶ್ ಗೂಳಿಗೌಡ ಅವರು ಮಾಡಿದ ಮನವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಸ್ಪಂದಿಸಿದ್ದು, ಈ ವಿಷಯದ ಕುರಿತು ತುರ್ತು ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

​ದೆಹಲಿಯಂತೆಯೇ ಬೆಂಗಳೂರು ಸಹ ಭವಿಷ್ಯದಲ್ಲಿ ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ದಿನೇಶ್ ಗೂಳಿಗೌಡ ಅವರು ಡಿಸಿಎಂ ಅವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಮುಖ್ಯ ಕಾರ್ಯದರ್ಶಿಗಳ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದು, ಬೆಂಗಳೂರಿನ ವಾಯು ಮಾಲಿನ್ಯದ ಅಪಾಯವನ್ನು ತಡೆಗಟ್ಟಲು ತುರ್ತು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ರಚಿಸುವಂತೆ ಆದೇಶಿಸಿದ್ದಾರೆ.

​ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಸ್ಫೋಟ: ನಗರದಲ್ಲಿ 1,23,24,919 ನೋಂದಾಯಿತ ಮೋಟರ್ ವಾಹನಗಳಿವೆ. ಜನಸಂಖ್ಯೆ (ಸುಮಾರು 1.47 ಕೋಟಿ) ಮತ್ತು ವಾಹನಗಳ ಅನುಪಾತವು ಪ್ರತಿ ನಾಗರಿಕರಿಗೆ ಒಂದು ವಾಹನ ಎಂಬಂತಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಸರ್ಕಾರದ ಗಮನಸೆಳೆದಿದ್ದರು.

ಪ್ರತಿದಿನ ಸರಾಸರಿ 2,563 ಹೊಸ ವಾಹನಗಳು ಬೆಂಗಳೂರಿನಲ್ಲಿ ನೋಂದಣಿಯಾಗುತ್ತಿವೆ. ಇವುಗಳಲ್ಲಿ 84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಾಗಿವೆ. ​ವಾಯು ಗುಣಮಟ್ಟದ ಸೂಚ್ಯಂಕ: ಬೆಂಗಳೂರಿನ ಪ್ರಸ್ತುತ ವಾಯು ಗುಣಮಟ್ಟ ಸೂಚ್ಯಂಕ (AQI) 50ನ್ನು ಮೀರಿ 70 ‘ಮಧ್ಯಮ’ ವರ್ಗದಲ್ಲಿದೆ. ಆದರೆ ಮುಂದಿನ 5-10 ವರ್ಷಗಳಲ್ಲಿ ನಗರವು ‘ತೀವ್ರ’ ಮಾಲಿನ್ಯದ ಮಟ್ಟ ತಲುಪಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ​ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಮಾಲಿನ್ಯದಿಂದಾಗಿ ಮಕ್ಕಳು, ಹಿರಿಯರು ಉಸಿರಾಟದ ತೊಂದರೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶಾಸಕರು ಗಮನಸೆಳೆದಿದ್ದರು.

ಪರಿಸರ ವಿಜ್ಞಾನಿಗಳು, ಸಂಚಾರ ತಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕು. ತಜ್ಞರ ಸಮಿತಿಯ ಕರ್ತವ್ಯಗಳು ಮತ್ತು ಧ್ಯೇಯೋದ್ದೇಶಗಳು: ಮುಂದಿನ ದಶಕದಲ್ಲಿ ಬೆಂಗಳೂರಿನ ಮಾಲಿನ್ಯದ ಪಥವನ್ನು ನಿರ್ಣಯಿಸುವುದು. ತುರ್ತು ಮತ್ತು ದೀರ್ಘಕಾಲೀನ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಶಿಫಾರಸು ಮಾಡುವುದು.
ವಾಹನ ಹೊರಸೂಸುವಿಕೆಯ ನಿಯಮಗಳು ಮತ್ತು ಅವುಗಳ ಜಾರಿಯನ್ನು ಬಲಪಡಿಸುವುದು. ಹೊಸ ವಾಹನ ನೋಂದಣಿ ಮತ್ತು ಸಂಚಾರ ದಟ್ಟಣೆಯನ್ನು ನಿರ್ವಹಿಸುವ ತಂತ್ರಗಳನ್ನು ರೂಪಿಸುವುದು. ಬೆಂಗಳೂರು ಮಹಾನಗರ ಪ್ರದೇಶಕ್ಕಾಗಿ ಸಮಗ್ರ ಸ್ವಚ್ಛ-ವಾಯು ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದ್ದರು.

Leave a Reply

Your email address will not be published. Required fields are marked *

You may have missed