ಪಾಕಿಸ್ತಾನಕ್ಕೆ ನೌಕಾಪಡೆ ರಹಸ್ಯ ಮಾರಾಟ; ಉಡುಪಿಯಲ್ಲಿ ಇಬ್ಬರು ಬಂಧನ

0

ಉಡುಪಿ: ಭಾರತೀಯ ನೌಕಾಪಡೆಯ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಚೋರಿಸಿ ರವಾನಿಸಿದ್ದ ಆರೋಪದಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ಮಲ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ 152 ಹಾಗೂ ಅಧಿಕೃತ ರಹಸ್ಯ ಕಾಯ್ದೆ (ಒಎಸ್‌ಎ) 3 ಮತ್ತು 5ನೇ ಕಲಮಗಳಡಿ ಕೇಸ್ ದಾಖಲಾಗಿದೆ. ಬಂಧಿತರನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಮೂಲದ 20 ವರ್ಷದ ರೋಹಿತ್ ಮತ್ತು 37 ವರ್ಷದ ಸಾಂತ್ರಿ ಎಂದು ಗುರುತಿಸಲಾಗಿದೆ.

ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಡಿಸೆಂಬರ್ 3ರವರೆಗೆ ನ್ಯಾಯಾಂಗ ಬಂಧನವನ್ನೂ ವಿಧಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಎಸ್ಪಿ ಹರಿರಾಮ್ ಶಂಕರ್ “ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೆ ಸಂಬಂಧಿಸಿದ ಗಂಭೀರ ಪ್ರಕರಣವಾದ್ದರಿಂದ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ನವೆಂಬರ್ 22ರಂದು ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗುವುದು” ಎಂದರು.

ಮಲ್ಪೆಯಲ್ಲಿದ್ದ ವಸತಿಗೃಹದ ಕೋಣೆಯಲ್ಲಿ ಸುಳಿವಿನ ಆಧಾರದ ಮೇಲೆ ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡ ಆರೋಪಿಗಳನ್ನು ಗ್ರಹಿಸಿದಂತೆಯೇ ಬಂಧಿಸಿದೆ. ತನಿಖಾ ಕಾರ್ಯವನ್ನು ಎಸಿಪಿ ಹರ್ಷ ಪ್ರಿಯಂವದ ಹಾಗೂ ಸಬ್‌ಇನ್ಸ್‌ಪೆಕ್ಟರ್ ಡಿ. ಅನಿಲ್ ಕುಮಾರ್ ಮುನ್ನಡೆಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಪ್ರಮುಖ ಆರೋಪಿ ರೋಹಿತ್, ಕಳೆದ ಆರು ತಿಂಗಳಿಂದ ಮಲ್ಪೆ ಘಟಕದಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದನು. ಶಿಪ್‌ಯಾರ್ಡ್‌ನಲ್ಲಿ ಪ್ರಸ್ತುತ ಉದ್ಯೋಗದಲ್ಲಿರುವ ಸಾಂತ್ರಿಯ ಸಹಕಾರದಿಂದ ನೌಕಾಪಡೆಯ ಹಡಗುಗಳ ಗುಪ್ತ ಪಟ್ಟಿ, ಗುರುತು ಸಂಖ್ಯೆ ಸೇರಿ ವರ್ಗೀಕೃತ ಮಾಹಿತಿಯನ್ನು ರೋಹಿತ್ ಪಡೆದು ವಾಟ್ಸಾಪ್, ಫೇಸ್‌ಬುಕ್ ಮೂಲಕ ಪಾಕಿಸ್ತಾನ ಸೇರಿ ಬೇರೆ ದೇಶಗಳಿಗೂ ಕಳಿಸಿದ್ದಾನೆ ಎಂಬ ಶಂಕೆ ಬೆಳಕಿಗೆ ಬಂದಿದೆ.

ಮಾಹಿತಿ ಹಂಚಿಕೊಂಡು ದೊಡ್ಡ ಮೊತ್ತದ ಹಣ ಸ್ವೀಕರಿಸಿರುವುದನ್ನೂ ಪೊಲೀಸರ ತನಿಖೆ ಬಹಿರಂಗಪಡಿಸಿದೆ. ಕೇರಳದ ಕೊಚ್ಚಿನ್ ಹಾಗೂ ಮಲ್ಪೆ ಘಟಕಗಳ ಹಡಗು ತಯಾರಿಕೆ ಕಾರ್ಯಾಚರಣೆಗೆ ಸಂಬಂಧಿಸಿದ ಸಂವೇದನಶೀಲ ಮಾಹಿತಿ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸೋರಿಕೆಯಾಗಿದೆ ಎಂದು ಎಸ್ಪಿ ಹೇಳಿದರು.

ರೋಹಿತ್ ಮಲ್ಪೆಗೆ ವರ್ಗಾವಣೆಯಾದ ನಂತರವೂ ಮಾಹಿತಿ ಮಾರಾಟ ಮಾಡುತ್ತಿದ್ದನೆಂಬ ಅಂಶವೂ ಹೊರಬಿದ್ದಿದೆ. ರಾಷ್ಟ್ರದ ಸಾರ್ವಭೌಮತ್ಯ, ಭದ್ರತೆಗೆ ಅಪಾಯ ಉಂಟುಮಾಡುವ ಕೃತ್ಯಕ್ಕೆ ಇಬ್ಬರೂ ಕಾರಣರಾಗಿದ್ದು, ಇತರರೂ ಭಾಗಿಯಾಗಿರುವ ಸಾಧ್ಯತೆಯನ್ನು ತನಿಖೆ ಪರಿಶೀಲಿಸುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You may have missed